ತಿರುವನಂತಪುರಂ, ಮೇ 03: ಕೇರಳದ ದೇವಾಲಯ ಉತ್ಸವಗಳಲ್ಲಿ ಗಜಪಡೆಗಳ ಅಟ್ಟಹಾಸ ಮುಂದುವರೆದಿದ್ದು, ಶುಕ್ರವಾರ (ಮೇ 1) ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಭೀಕರ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಎರ್ನಾಕುಲಂ ಜಿಲ್ಲೆಯ ಕಿಡಂಗೂರ್ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಗ್ಗೆ 9.15 ರ ಸುಮಾರಿಗೆ ‘ಮಯ್ಯನಾಡ್ ಪಾರ್ಥಸಾರಥಿ’ ಎಂಬ ಆನೆ ದಾಳಿ ನಡೆಸಿತ್ತು. ಆನೆಗೆ ನೀರು ಕುಡಿಸಲು ಕರೆದೊಯ್ಯುತ್ತಿದ್ದಾಗ, ಅದು ಇದ್ದಕ್ಕಿದ್ದಂತೆ ವಿಷ್ಣು ಎಂಬುವವರ ಮೇಲೆ ದಾಳಿ ಮಾಡಿದೆ. ಆನೆ ತನ್ನ ಸೊಂಡಿಲಿನಿಂದ ವಿಷ್ಣು ಅವರನ್ನು ಎತ್ತಿ ಬಿಸಾಡಿ, ತುಳಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಉದ್ರೇಕಗೊಂಡ ಆನೆಯು ದೇವಾಲಯದ ಆವರಣದಲ್ಲಿದ್ದ ಕಾರನ್ನು ಉರುಳಿಸುತ್ತಿರುವುದು ಮತ್ತು ದ್ವಿಚಕ್ರ ವಾಹನಗಳ ಮೇಲೆ ದಾಳಿ ನಡೆಸುತ್ತಿರುವುದು ಸೆರೆಯಾಗಿದೆ. ಆನೆಯ ರೌದ್ರಾವತಾರ ಕಂಡು ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ತ್ರಿಶೂರ್ ಜಿಲ್ಲೆಯಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಆನೆ ದಾಳಿಗೆ ಮಾವುತ ಬಲಿಯಾಗಿದ್ದಾರೆ. ಈ ಘಟನೆಗಳು ಧಾರ್ಮಿಕ ಆಚರಣೆಗಳಲ್ಲಿ ಆನೆಗಳ ಬಳಕೆ ಮತ್ತು ಸುರಕ್ಷತೆಯ ಬಗ್ಗೆ ಮತ್ತೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ