ಕೋಲ್ಕತ್ತಾ, ಏಪ್ರಿಲ್ 27: ಕೈಜಾರಿ ಮಗು ರೈಲಿನಿಂದ ಬಿದ್ದೇ ಬಿಟ್ಟಿತ್ತು, ರೈಲಿನ ತುರ್ತು ಸರಪಳಿಯನ್ನು ಎಳೆದರೂ ಕೂಡ ರೈಲು ನಿಲ್ಲದೆ ಚಲಿಸುತ್ತಲೇ ಇದ್ದ ಘಟನೆ ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಸಂಭವಿಸಿದೆ.
ರೈಲಿನಿಂದ ಮಗು ಕೆಳಕ್ಕೆ ಬಿದ್ದ ತಕ್ಷಣವೇ ಗಾಬರಿಗೊಂಡ ತಾಯಿ, ಮಗುವನ್ನು ರಕ್ಷಿಸಲು ರೈಲನ್ನು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಿದ್ದಾರೆ. ಆದರೆ, ರೈಲು ನಿಲ್ಲಲೇ ಇಲ್ಲ. ಆಕೆಯ ಆಕ್ರಂದನ ಕಂಡು ಬೋಗಿಯಲ್ಲಿದ್ದ ಇತರ ಪ್ರಯಾಣಿಕರೂ ಸಹಕರಿಸಿ ಪದೇ ಪದೇ ಸರಪಳಿಯನ್ನು ಎಳೆದರೂ ರೈಲ್ವೆ ಬ್ರೇಕ್ ವ್ಯವಸ್ಥೆ ಸ್ಪಂದಿಸಲಿಲ್ಲ. ಇದು ರೈಲ್ವೆ ಬೋಗಿಗಳ ನಿರ್ವಹಣೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ.
ಘಟನೆಯ ವೇಳೆ ಬೋಗಿಯಲ್ಲಿದ್ದ ಯುವಕನೊಬ್ಬ ತಕ್ಷಣವೇ ಆರ್ಪಿಎಫ್ (RPF) ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಈ ಇಡೀ ಘಟನೆಯನ್ನು ಆತ ವೀಡಿಯೊದಲ್ಲಿ ಸೆರೆಹಿಡಿದಿದ್ದು, ನಾವು ಎಲ್ಲರಿಗೂ ಕರೆ ಮಾಡಿದ್ದೇವೆ, ಸರಪಳಿ ಎಳೆಯುತ್ತಿದ್ದೇವೆ, ಆದರೂ ರೈಲು ನಿಲ್ಲುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ರೈಲು ನಿಲ್ಲದ ಕಾರಣ ತಾಯಿ ಮಗುವಿನ ಹತ್ತಿರ ತಲುಪಲು ಸಾಧ್ಯವಾಗದೆ ರೈಲಿನಲ್ಲೇ ಕಣ್ಣೀರಿಡುತ್ತಾ ಕುಳಿತುಕೊಳ್ಳುವಂತಾಯಿತು.
ಮಗು ಬಿದ್ದ ನಂತರ ರೈಲು ಮುಂದಿನ ನಿಲ್ದಾಣ ತಲುಪುವವರೆಗೆ ತಾಯಿಗೆ ಯಾವುದೇ ಅಧಿಕೃತ ಸಹಾಯ ಸಿಗಲಿಲ್ಲ ಎಂದು ವರದಿಯಾಗಿದೆ. ನಂತರ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮಗುವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ