Headlines

ಅಂಚೆ ಮತಪತ್ರ ತಿದ್ದುಪಡಿ ಆರೋಪ: ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧದ ಕೇಸ್​​ಗೆ ತಾತ್ಕಾಲಿಕ ತಡೆ – Kannada News | Sringeri Postal Ballot Tampering Allegations: High Court Temporarily Stays FIR Against BJP’s D.N. Jeevaraj

ಡಿ.ಎನ್. ಜೀವರಾಜ್ ವಿರುದ್ಧದ ಕೇಸ್​​ಗೆ ತಾತ್ಕಾಲಿಕ ತಡೆ

ಬೆಂಗಳೂರು/ಚಿಕ್ಕಮಗಳೂರು, ಮೇ 05: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ದಾಖಲಾದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾ ಪೀಠ, ಪ್ರಾಥಮಿಕವಾಗಿ ಎಫ್‌ಐಆರ್‌ಗೆ ತಡೆ ನೀಡಬೇಕು ಎಂಬ ಅಭಿಪ್ರಾಯದಲ್ಲಿದ್ದೇವೆ. ರಾಜಕೀಯ ಒತ್ತಡದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಬಾರದು. ಇದು ಕಾನೂನು ಪ್ರಕ್ರಿಯೆಯ ದುರುಪಯೋಗ, ಎಂದು ಅಭಿಪ್ರಾಯಪಟ್ಟಿದೆ. ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದೆ.

  • ಶೃಂಗೇರಿ ವಿಧಾನಸಭಾ ಚುನಾವಣೆ ಅಂಚೆಮತಗಳ ಮರುಎಣಿಕೆ ವಿವಾದ
  • ಮರುಎಣಿಕೆ ವೇಳೆ ಅಂಚೆ ಮತಪತ್ರಗಳಲ್ಲಿ ತಿದ್ದುಪಡಿ ನಡೆಸಿದ ಆರೋಪ
  • ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧದ ಕೇಸ್​​ಗೆ ತಾತ್ಕಾಲಿಕ ತಡೆ

ಇದನ್ನೂ ಓದಿ: ಮತಗಳ ಮರುಎಣಿಕೆ ಬಗ್ಗೆ ಬಿಜೆಪಿ ಶಾಸಕ ಜೀವರಾಜ್ ಬಿಚ್ಚಿಟ್ಟ ರಹಸ್ಯ ಕೇಳಿ

ಸರ್ಕಾರದ ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಅಂಚೆ ಮತಪತ್ರಗಳಲ್ಲಿ ಡಬಲ್ ಟಿಕ್ ಗುರುತು ಕಂಡುಬಂದಿದೆ ಎಂದು ವಾದಿಸಿದ್ದರು. ಮರುಎಣಿಕೆಗೆ ಮೊದಲು ಈ ಬಗ್ಗೆ ರಿಟರ್ನಿಂಗ್ ಅಧಿಕಾರಿಗೆ ದೂರು ನೀಡಲಾಗಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದ್ದು, ಅಲ್ಲದೆ ಮರುಎಣಿಕೆ ಮಾಡಬಾರದ ಅಂಚೆ ಮತಗಳನ್ನೂ ಎಣಿಸಲಾಗಿದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ನ್ಯಾಯಪೀಠ, ಹೈಕೋರ್ಟ್ ಆದೇಶದಂತೆ ಮರುಎಣಿಕೆ ನಡೆದಿದೆ. ಏಜೆಂಟ್ ನ್ಯಾಯಾಲಯವನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಬಹುದಿತ್ತು ಎಂದು ಸೂಚಿಸಿತು. ಅಲ್ಲದೆ ಮತ ಎಣಿಕೆಯಲ್ಲಿ ವ್ಯತ್ಯಾಸ ಇದ್ದರೆ ಚುನಾವಣಾ ಅರ್ಜಿ ಸಲ್ಲಿಸುವುದೇ ಸೂಕ್ತ ಮಾರ್ಗ ಎಂದು ಅಭಿಪ್ರಾಯಪಟ್ಟಿತು.

ಮುಂದಿನ ವಿಚಾರಣೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಕೋರ್ಟ್ ಅವಕಾಶ ನೀಡಿದ್ದು, ಪ್ರಸ್ತುತ ರಿಟರ್ನಿಂಗ್ ಅಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರನ್ನು ಸಹ ಆರೋಪಿಯಾಗಿಸಲು ಪರಿಗಣಿಸಬಹುದು ಎಂದು ಕೋರ್ಟ್ ಹೇಳಿದೆ. ಇನ್ನೊಂದೆಡೆ ತಮ್ಮ ಅರ್ಜಿಯಲ್ಲಿ ಈ ಎಫ್‌ಐಆರ್ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ವಿಷಯಗಳನ್ನು ಮರು ತೆರೆಯುವ ಪ್ರಯತ್ನ ಮಾತ್ರ ಎಂದು ಜೀವರಾಜ್ ವಾದಿಸಿದ್ದರು..

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ 59,171 ಮತಗಳನ್ನು ಪಡೆದು ಗೆದ್ದಿದ್ದರು. ಜೀವರಾಜ್ 58,970 ಮತಗಳನ್ನು ಪಡೆದು 201 ಮತಗಳ ಅಂತರದಿಂದ ಸೋತಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 6ರಂದು ಹೈಕೋರ್ಟ್ 279 ತಿರಸ್ಕೃತ ಅಂಚೆ ಮತಪತ್ರಗಳ ಮರುಪರಿಶೀಲನೆ ಹಾಗೂ ಎಲ್ಲಾ ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು. ಅದರಂತೆ ಮೇ 2ರಂದು ಮರುಎಣಿಕೆ ನಡೆದಿತ್ತು.ಮೊದಲ ಎಣಿಕೆಯಲ್ಲಿ 1,822 ಅಂಚೆ ಮತಗಳಲ್ಲಿ ಜೀವರಾಜ್ 692 ಮತಗಳನ್ನು ಪಡೆದರೆ, ರಾಜೇಗೌಡ 569 ಮತಗಳನ್ನು ಪಡೆದಿದ್ದರು. ಮರುಪರಿಶೀಲನೆ ಮತ್ತು ಮರುಎಣಿಕೆಯ ಬಳಿಕ ಜೀವರಾಜ್ ಮತಗಳು 690 ಆಗಿದ್ದು, ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿದ್ದು, 255 ಮತಗಳ ಕಡಿತವಾಗಿದೆ. ಇದರಿಂದ ಜೀವರಾಜ್ 52 ಮತಗಳ ಅಂತರದಿಂದ ವಿಜೇತರಾಗಿ ಘೋಷಿಸಲ್ಪಟ್ಟಿದ್ದರು. ಆ ಬಳಿಕ ರಾಜೇಗೌಡ ಪರ ಮತ ಎಣಿಕೆ ಏಜೆಂಟ್ ಸುಧೀರ್ ಕುಮಾರ್ ಮುರೊಳ್ಳಿ ನೀಡಿದ ದೂರಿನ ಆಧಾರದಲ್ಲಿ, ಚಿಕ್ಕಮಗಳೂರು ಪಟ್ಟಣ ಪೊಲೀಸರು ಜೀವರಾಜ್, ಅಧಿಕಾರಿಗಳು ಸೇರಿದಂತೆ  ಹಲವರ ವಿರುದ್ಧ ಕೇಸ್ ದಾಖಲಿಸಿದ್ದರು. ಮರುಎಣಿಕೆ ವೇಳೆ ರಾಜೇಗೌಡ ಪರದ 255 ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂದು ಆರೋಪಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:46 pm, Tue, 5 May 26

Source link

Leave a Reply

Your email address will not be published. Required fields are marked *