ಕೊಪ್ಪಳ, (ಮೇ 13): ಜಿಲ್ಲೆಯ ಅಂಜನಾದ್ರಿಯ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರದ ಆಭರಣಗಳ ಕುರಿತು ಹರಿದಾಡುತ್ತಿದ್ದ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ಗಂಗಾವತಿ ಶಾಸಕ ಜನಾರ್ದನರೆಡ್ಡಿ ಆಪ್ತ ಉದ್ಯಮಿ ಮಹೇಶ ರೆಡ್ಡಿ ಅವರು ನೀಡಿದ್ದ ಬಂಗಾರ ನಕಲಿ ಎಂದು ಸುದ್ದಿ ಹರಿದಾಡಿದ್ದು, ಇದರ ಬೆನ್ನಲ್ಲೇ ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ 1400 ಗ್ರಾಂ ಬಂಗಾರದಲ್ಲಿ 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿ ಎಂದು ಸಾಬೀತಾಗಿದೆ.
ಉದ್ಯಮಿ ಮಹೇಶ ರೆಡ್ಡಿ ಒಟ್ಟು 1400 ಗ್ರಾಂ ಬಂಗಾರ ಆಭರಣಗಳು ನೀಡಿದ್ದು, ಇದರಲ್ಲಿ 120 ಗ್ರಾಂ ವೇಸ್ಟೇಜ್ ತೆಗೆದು 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿಯದ್ದು ಎಂದು ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ತಿಳಿಸಿದ್ದಾರೆ. ಬಳಿಕ ಗಂಗಾವತಿ ತಹಶಿಲ್ದಾರ್, ಎಲ್ಲಾ ಬಂಗಾರವನ್ನು ಸ್ವೀಕಾರ ಮಾಡಿ ಖಜಾನೆಗೆ ಕಳುಹಿಸಿದರು. ಇನ್ನು ಆಪ್ತ ನೀಡಿದ್ದ ಚಿನ್ನ ಅಸಲಿ ಎಂದು ಸಾಬೀತಾಗುತ್ತಿದ್ದಂತಯೇ ಶಾಸಕ ಜನಾರ್ದನರೆಡ್ಡಿ ನಿರಾಳರಾಗಿದ್ದಾರೆ.
