ಅಜೀಂ ಪ್ರೇಮ್ ಜಿ ವಿವಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದೇಕೆ? ಪ್ರತ್ಯೇಕತಾವಾದಕ್ಕೆ ನೀಡಿದ್ರಾ ಕುಮ್ಮಕ್ಕು? ಇಲ್ಲಿದೆ ಅಸಲಿಯತ್ತು – Kannada News | Why Did Protests Erupt Against Azim Premji University? ABVP Alleges Support to Kashmir Separatism, Writes to Amit Shah

ಅಜೀಂ ಪ್ರೇಮ್‌ಜಿ ವಿವಿ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆImage Credit source: tv9

ಬೆಂಗಳೂರು, ಫೆಬ್ರವರಿ 25: ಸ್ಪಾರ್ಕ್ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಸಂಘಟನೆಗಳು ಬೆಂಗಳೂರಿನ ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ (Azim Premji University) ದೇಶ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿವೆ ಎಂದು ಎಬಿವಿಪಿ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲದೆ, ಈ ಸಂಘಟನೆಗಳು ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಭಾರತೀಯ ಸೇನೆಯ ಸೈನಿಕರನ್ನು ಅವಮಾನಿಸುತ್ತಿವೆ ಎಂದು ಆರೋಪಿಸಿದ್ದು, ಪ್ರತಿಭಟನೆಯನ್ನೂ ನಡೆಸಿವೆ. ಸದ್ಯ, ಕ್ಯಾಂಪಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಿಸಿದ್ದಾರೆ.

ಏತನ್ಮಧ್ಯೆ, ಸ್ಪಾರ್ಕ್ ಸಂಘಟನೆಗೆ ನಿಷೇಧ ಹೇರಬೇಕು ಮತ್ತು ವಿಶ್ವವಿದ್ಯಾಲಯ ಕ್ಷಮೆಯಾಚಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರವನ್ನೂ ಬರೆದಿದೆ.

ವಿವಿ ವಿರುದ್ಧ ಎಬಿವಿಪಿ ಆಕ್ರೋಶಕ್ಕೆ ಅಸಲಿ ಕಾರಣ ಏನು?

ಸ್ಪಾರ್ಕ್ ಹಾಗೂ ಎಐಎಸ್‌ಎ ಸಂಘಟನೆಗಳು ಈ ಹಿಂದೆ ಭಾರತೀಯ ಸೈನಿಕರಿಗೆ ಅವಮಾನ ಮಾಡಿವೆ. ಸೈನಿಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿವೆ. ಯೋಧರು ಕಾಶ್ಮೀರ ಪ್ರದೇಶದಲ್ಲಿ ಕ್ರೌರ್ಯ ಎಸಗುತ್ತಿದ್ದಾರೆ ಎಂಬಂಥ ಹೇಳಿಕೆಗಳನ್ನು ನೀಡಿವೆ. ಇಂಥ ಸಂಘಟನೆಗಳು ಇದೀಗ ಅಜೀಂ ಪ್ರೇಮ್ ಜಿ ವಿವಿಯಲ್ಲಿ ಫೆಬ್ರವರಿ 26, 27 ಹಾಗೂ 28 ರಂದು ಕಾರ್ಯಕ್ರಮ ಆಯೋಜಿಸಲು ಮುಂದಾಗಿವೆ. ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವಂತಹ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿವೆ ಎಂದು ಎಬಿವಿಪಿ ಆರೋಪಿಸಿದ್ದು, ಇದಕ್ಕೆ ಯಾವ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಆಗ್ರಹಿಸಿದೆ.

ಅಮಿತ್ ಶಾಗೆ ಎಬಿವಿಪಿ ಬರೆದ ಪತ್ರದಲ್ಲೇನಿದೆ?

‘ವಿದ್ಯಾಸಂಸ್ಥೆಗಳು ಜ್ಞಾನಾರ್ಜನೆಯ ಕೇಂದ್ರವಾಗಬೇಕು.ಆದರೆ ಇಂದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳೇ ದೇಶವಿರೋಧಿ ಚಟುವಟಿಕೆಗಳ ತಾಣವಾಗಿ ನಿರ್ಮಾಣವಾಗುತ್ತಿರುವುದು ವಿಪರ್ಯಾಸ. ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) ಎನ್ನುವ ವಿದ್ಯಾರ್ಥಿ ಸಂಘಟನೆ ಕಳೆದ ಅನೇಕ ವರ್ಷಗಳಿಂದ ದೇಶವಿರೋಧಿ ಚಟುವಟಿಕೆಗಳ ಮೂಲಕ ಯುವಸಮಾಜವನ್ನು ದೇಶದ ವಿರುದ್ಧ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆ. AISA ಪ್ರಾಯೋಜಿತ SPARK ಎನ್ನುವ ಸಂಸ್ಥೆಯ ಮೂಲಕ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಿಂತನೆಗಳ ಕೂಟಗಳನ್ನು ನಡೆಸುತ್ತಾ ದೇಶದ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳು ಹಿಂಸಾಚಾರಿಗಳು ಎನ್ನುವಂತೆ ಬಿಂಬಿಸುವ ಕಾರ್ಯಕ್ರಮಗಳು, ಭಾರತದ ಮುಕುಟಮಣಿ ಕಾಶ್ಮೀರ ಭಾರತದ ಭಾಗವಲ್ಲ,ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ದೇಶವಿರೋಧಿ ಕಾರ್ಯಕ್ರಮಗಳ ಮೂಲಕ ಭಾರತದ ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳು, ಅಪರೇಷನ್ ಸಿಂಧೂರ ಸೈನಿಕ ಕಾರ್ಯಾಚರಣೆಯನ್ನು ಖಂಡಿಸುವ ಚಟುವಟಿಕೆಗಳು, ನಕ್ಸಲ್ ವಾದ ಹಾಗೂ ಮಾವೋವಾರಿಗಳನ್ನು ಬೆಂಬಲಿಸಿ ಕಾರ್ಯಕ್ರಮಗಳನ್ನು ನಡೆಸುತ್ತಾ ಯುವ ಮನಸುಗಳಲ್ಲಿ ದೇಶವಿರೋಧಿ ಚಿಂತನೆಯನ್ನು ಬಿತ್ತುತ್ತಿವೆ. ಹೀಗೆ ದೇಶದೊಳಗಿದ್ದುಕೊಂಡು ದೇಶವಿರೋಧಿ ಕೃತ್ಯಗಳ ಮೂಲಕ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಹ ಈ ಸಂಸ್ಥೆಯನ್ನು ಈ ಕೂಡಲೇ ನಿಷೇಧಿಸಬೇಕು’ ಎಂದು ಅಮಿತ್ ಶಾಗೆ ಬರೆದ ಪತ್ರದಲ್ಲಿ ಎಬಿವಿಪಿ ಆಗ್ರಹಿಸಿದೆ.

ಇಂತಹ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುತ್ತಿರುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಬೇಕು ಹಾಗೂ ಈ ರೀತಿಯ ಚಟುವಟಿಕೆಗಳ ಮೂಲಕ ದೇಶವಿರೋಧಿ ಚಿಂತನೆಯನ್ನು ಕ್ಯಾಂಪಸ್ನಲ್ಲಿ ಹರಡುತ್ತಿರುವ ದೇಶವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಈ ಮೂಲಕ ಆಗ್ರಹಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎಬಿವಿಪಿ ಹೇಳಿದ್ದೇನು?

ಅಜೀಂ ಪ್ರೇಮ್ ಜೀ ಯೂನಿವರ್ಸಿಟಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಸ್ಪಾರ್ಕ್ ಎನ್ನುವ ಸಂಘಟನೆಯ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡಲಾಗುತ್ತಿದೆ ಎಂದು ಎಬಿವಿಪಿ ಸಂಘಟನೆಯ ಮುಖಂಡ ಮಣಿಕಂಠ ಕಳಸ ಹೇಳಿದ್ದಾರೆ. ‘ಕಾಶ್ಮೀರ ಭಾರತದ ಭೂಭಾಗವಲ್ಲ, ಭಾರತದವರು ಅಲ್ಲಿಗೆ ಹೋಗಿ ದೌರ್ಜನ್ಯ ಎಸಗುತ್ತಿದ್ದಾರೆ. ಸೈನಿಕರು ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾರೆ’ ಎಂಬ ಹೇಳಿಕೆಗಳನ್ನು ಸ್ಪಾರ್ಕ್ ಸಂಘಟನೆಯವರು ನೀಡುತ್ತಾರೆ ಎಂದು ಮಣಿಕಂಠ ಕಳಸ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಜೀಂ ಪ್ರೇಮ್ ಜಿ ವಿವಿಯಲ್ಲಿ ದೇಶ ವಿರೋಧಿ ಚಟುವಟಿಕೆ ಆರೋಪ: ಎಬಿವಿಪಿ ಪ್ರತಿಭಟನೆ, ಮಾನ್ಯತೆ ರದ್ದುಗೊಳಿಸಲು ಅಮಿತ್ ಶಾಗೆ ಪತ್ರ

ಸ್ಪಾರ್ಕ್ ಸಂಘಟನೆ ದೇಶ ವಿರೋಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸಿದ್ದೇವೆ. ವಿವಿ ತಪ್ಪು ಹೆಜ್ಜೆ ಇಟ್ಟಿರುವುದರಿಂದ ಬೋರ್ಡಿಗೆ ಕಪ್ಪು ಮಸಿ ಬಳಿದಿದ್ದೆವು. ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಕಾಲೇಜು ವಿಧ್ಯಾರ್ಥಿಗಳಿಗೆ ಹೇಳಿಕೊಟ್ಟು ನಮ್ಮ ಮೇಲೆ ಹಲ್ಲೆ ನಡೆಸಲು ಕಳುಹಿಸಿದ್ದಾರೆ. ಭಾರತದ ಧ್ವಜವನ್ನ ಹಿಡಿದು ಅಲ್ಲಿ ಪ್ರತಿಭಟನೆ ನಡೆಸಿದ್ದೆವು. ಆಗ, ಅಲ್ಲಿನ ವಿಧ್ಯಾರ್ಥಿಗಳು ಅಶ್ಲೀಲ ಸನ್ನೆಗಳನ್ನು ತೋರಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕ್ರಮವಾಗಬೇಕು ಎಂದು ಮಣಿಕಂಠ ಕಳಸ ಆಗ್ರಹಿಸಿದ್ದಾರೆ.

ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್​ಐಆರ್

ಮಂಗಳವಾರ ರಾತ್ರಿ ಎಬಿವಿಪಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು 21 ಮಂದಿಯನ್ನು ಬಂಧಿಸಿದ್ದಾರೆ. ಎಫ್​ಐಆರ್ ಸಹ ದಾಖಲಿಸಲಾಗಿದೆ. ನಂತರ ಅವರಿಗೆ ಜಾಮೀನು ಮಂಜೂರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:51 am, Wed, 25 February 26

Source link

Leave a Reply

Your email address will not be published. Required fields are marked *