ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಸಂಬಂಧ ಈಗಾಗಲೇ ಕೆಎಸ್ಆರ್ಟಿಸಿ ಖಡಕ್ ಎಚ್ಚರಿಕೆ ರವಾನಿಸಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಷ್ಕರದಲ್ಲಿ ಭಾಗಿಯಾಗದಂತೆ ಕೆಎಸ್ಆರ್ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ. ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ ಸಾರಿಗೆ ನೌಕರರು ಮಾತ್ರ ಪಟ್ಟು ಬಿಡಲು ನಿರಾಕರಿಸಿದ್ದು, ನಾವು ದೃಢವಾಗಿ ನಿರ್ಧಾರ ಮಾಡಿದ್ದೀವಿ, ಮುಷ್ಕರ ನಡೆಸುವುದು ಖಚಿತ ಎಂದು ತಿಳಿಸಿದ್ದಾರೆ.
‘ನಾವು ಯಾವುದಕ್ಕೂ ಹೆದರುವುದಿಲ್ಲ’
ನಮ್ಮ ಬೇಡಿಕೆ ಈಡೇರಿಸಲೇಬೇಕು, ಸಾರಿಗೆ ಮುಷ್ಕರ ಶುರುವಾದ ಮೇಲೆ ಏನೇನು ಆಗುತ್ತೆ ನೋಡೋಣ. ಸಾರಿಗೆ ನೌಕರರನ್ನು ಅರೆಸ್ಟ್ ಮಾಡಿದ್ರೆ ಬಸ್ ಯಾರು ಓಡಿಸುತ್ತಾರೆ? ಎಸ್ಮಾ ಜಾರಿಯಲ್ಲಿದೆ ಅಂತಾರೆ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಬೆಂಗಳೂರಲ್ಲಿ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ; ಸಿಬ್ಬಂದಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC
‘ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ’
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ ಎಂದಿದ್ದಾರೆ. ಈಗಾಗಲೇ ‘ನೋ ವರ್ಕ್ ನೋ ಪೇ’ ಆದೇಶ ಜಾರಿಮಾಡಲಾಗಿದ್ದು, ಸಾರಿಗೆ ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ನಿಶ್ಚಿತ. ಎಲ್ಲಾ ಜಿಲ್ಲೆಗಳ ಎಸ್ಪಿ, ಆರ್ಟಿಒಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ಕಾರದ ಸಾಧನಾ ಸಮಾವೇಶಕ್ಕೆ 2,000 ಬಸ್ ಕಳುಹಿಸಲಾಗುತ್ತಿದೆ. ಮೇ 20ರಂದು ರಾಜ್ಯದ ಎಲ್ಲಾ ಡಿಪೋಗಳಿಗೆ ಭದ್ರತೆ ನೀಡಲಾಗುವುದು. ಪೊಲೀಸ್ ಇಲಾಖೆ ಜೊತೆ ಚರ್ಚಿಸಲಾಗಿದ್ದು ಭದ್ರತೆಗೆ ಸೂಚಿಸಲಾಗಿದೆ. ಮುಷ್ಕರದಲ್ಲಿ ಭಾಗಿಯಾಗಲ್ಲವೆಂದು ಸಾರಿಗೆ ಸಿಬ್ಬಂದಿಯಿಂದ ಮುಚ್ಚಳಿಕೆ ಬರೆಸಿಕೊಂಡಿರುವುದರಿಂದ ಸಾರಿಗೆ ಬಸ್ ಸಂಚಾರ ಇರುತ್ತೆ ಎಂದವರು ತಿಳಿಸಿದ್ದಾರೆ.
ಇದರ ಹೊರತಾಗಿಯೂ ಮುಷ್ಕರ ನಡೆದರೆ ನಮ್ಮಲ್ಲಿ 2,000 ತರಬೇತಿನಿರತರು ಇದ್ದಾರೆ. ಸಾರಿಗೆ ಇಲಾಖೆಯ 4 ನಿಗಮಗಳಲ್ಲಿ 5,000 ತರಬೇತಿ ಚಾಲಕರಿದ್ದಾರೆ. ಅವರನ್ನು ನಿಯೋಜಿಸುವ ಮೂಲಕ ಸಾರಿಗೆ ಬಸ್ ಸೇವೆ ನೀಡುತ್ತೇವೆ. ಜೊತೆಗೆ ಖಾಸಗಿ ಬಸ್ಗಳ ಮಾಲೀಕರ ಸಂಘದ ಜೊತೆಗೂ ಚರ್ಚೆ ಮಾಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್ಗಳನ್ನು ಓಡಿಸ್ತೇವೆ. ನಮ್ಮ ಜೊತೆ ಚರ್ಚೆ ನಡೆಸಲು ಸಾರಿಗೆ ಸಿಬ್ಬಂದಿಗೆ ಮುಕ್ತ ಅವಕಾಶವಿದೆ ಎಂದವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.