ಅಯೋಧ್ಯೆ, ಆ,13 : ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯ ಆಯ್ಕೆಗಾಗಿ ರಚಿಸಲಾಗಿದ್ದ ಶೋಧ ಸಮಿತಿಯು ಅಂತಿಮ ಹಂತದ ಮುಖಾಮುಖಿ ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದಲ್ಲೇ ಈ ಸಂದರ್ಶನಗಳು ಜರುಗಿದ್ದು, ಶೀಘ್ರದಲ್ಲೇ ನೂತನ ಸಿಇಒ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ.
ಅಭ್ಯರ್ಥಿಗಳ ಮೌಲ್ಯಮಾಪನಕ್ಕಾಗಿ ರಕ್ಷಣೆ, ನ್ಯಾಯಾಂಗ ಹಾಗೂ ವಿಜ್ಞಾನ ಕ್ಷೇತ್ರದ ದಿಗ್ಗಜರನ್ನು ಒಳಗೊಂಡ ಶೋಧ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ನ್ಯಾ. ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ ವಿ.ಕೆ. ಚತುರ್ವೇದಿ, ವಿಜ್ಞಾನಿ ಡಾ. ಸುರೇಶ್ ಹಾವರೆ ಒಳಗೊಂಡಿದ್ದಾರೆ.
ಈ ಮಹತ್ವದ ಹುದ್ದೆಗೆ ದೇಶಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗಿದ್ದು, ಶೇಕಡಾ 0.3 ಕ್ಕಿಂತಲೂ ಕಡಿಮೆ ಅಭ್ಯರ್ಥಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ಸಲ್ಲಿಕೆಯಾಗಿದ್ದ 5,585 ಅರ್ಜಿಗಳ ಪೈಕಿ 3,877 ಅಭ್ಯರ್ಥಿಗಳು ವಿವರವಾದ ಸಿವಿ (CV) ಸಲ್ಲಿಸಿದ್ದರು. ಅವರಿಂದ ನಿರ್ವಹಣಾ ಸಾಮರ್ಥ್ಯ, ಭಾಷಾ ಪ್ರಾವೀಣ್ಯ ಹಾಗೂ ಕಾರ್ಯತಂತ್ರ ಯೋಜನೆಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಮೌಲ್ಯಮಾಪನಗೊಂಡ 1,580 ಅಭ್ಯರ್ಥಿಗಳಲ್ಲಿ 111 ಮಂದಿಯನ್ನು ಆನ್ಲೈನ್ ಸಂದರ್ಶನಕ್ಕೆ ಆಯ್ಕೆ ಮಾಡಿ, ಅವರ ನಾಯಕತ್ವ ಗುಣ ಹಾಗೂ ತಂತ್ರಜ್ಞಾನದ ತಿಳುವಳಿಕೆಯನ್ನು ಪರಿಶೀಲಿಸಲಾಯಿತು.
ಅಂತಿಮವಾಗಿ ಆಯ್ಕೆಯಾದ 16 ಪ್ರಮುಖ ಅಭ್ಯರ್ಥಿಗಳನ್ನು ಅಯೋಧ್ಯೆಗೆ ಆಹ್ವಾನಿಸಿ ಮುಖಾಮುಖಿ ಸಂದರ್ಶನ ನಡೆಸಲಾಯಿತು. ಅಂತಿಮ 16 ಅಭ್ಯರ್ಥಿಗಳು 50 ರಿಂದ 70 ವರ್ಷ ವಯೋಮಾನದವರಾಗಿದ್ದು, ನಿವೃತ್ತ ಐಎಎಸ್ (IAS), ಐಪಿಎಸ್ (IPS) ಅಧಿಕಾರಿಗಳು, ಸಶಸ್ತ್ರ ಪಡೆಗಳ ನಿವೃತ್ತ ಯೋಧರು, ಕಾರ್ಪೊರೇಟ್, ಶಿಕ್ಷಣ ಹಾಗೂ ಐಟಿ ಕ್ಷೇತ್ರದ ದಿಗ್ಗಜರಾಗಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಮ ಜನ್ಮಭೂಮಿ ಸಂಸ್ಥೆಯನ್ನು ದಕ್ಷತೆಯಿಂದ ಮುನ್ನಡೆಸಬಲ್ಲ ಸಮರ್ಥ ನಾಯಕನ ಹುಡುಕಾಟ ಅಂತಿಮ ಘಟ್ಟಕ್ಕೆ ತಲುಪಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
