ಉತ್ತರ ಕನ್ನಡ, ಜು.9: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಇಡೀ ಧಾರವಾಡ ನಗರವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಪ್ರವಾಸಕ್ಕೆಂದು ತೆರಳುತ್ತಿದ್ದ ಕ್ರೂಸರ್ ವಾಹನ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘೋರ ದುರಂತದಲ್ಲಿ ಮೃತಪಟ್ಟ ಸಚಿನ್ ಅವರ ತಾಯಿ ಈರಮ್ಮ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ. “ನನಗೆ ಇದ್ದಿದ್ದೇ ಇಬ್ಬರು ಗಂಡು ಮಕ್ಕಳು. ನನ್ನ ಮಗ ಸಚಿನ್ ದುಬೈನಲ್ಲಿದ್ದ, ಕೇವಲ ಇಪ್ಪತ್ತು ದಿನಗಳ ಹಿಂದಷ್ಟೇ ಅವನು ಊರಿಗೆ ವಾಪಸ್ ಬಂದಿದ್ದ. ಇಲ್ಲಿ ಸ್ವಂತ ಖರ್ಚಿಗೆ ಹಾಗೂ ಹಣಕ್ಕಾಗಿ ಸ್ವಿಗ್ಗಿ (Swiggy) ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಂಡಿದ್ದ. ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿ ಧರ್ಮಸ್ಥಳ, ಚಿಕ್ಕಮಗಳೂರು ಟೂರ್ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಆದರೆ ಮುಂಜಾನೆ ಇಂತಹದ್ದೊಂದು ಘೋರ ಅವಘಡ ನಡೆದು ನನ್ನ ಮಗ ನನ್ನನ್ನು ಬಿಟ್ಟು ಹೋಗ್ತಾನೆ ಅಂತ ಅಂದುಕೊಂಡಿರಲಿಲ್ಲ…” ಎಂದು ತಾಯಿ ಈರಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
