ಕಾನ್ಪುರ, ಏಪ್ರಿಲ್ 19: ತಂದೆಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ರಾಕ್ಷಸನಂತೆ ಕೊಲೆ(Murder) ಮಾಡಿದ್ದಾನೆ. ಕಾನ್ಪುರದ ನಿವಾಸವೊಂದರಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯ ಕ್ರೌರ್ಯದ ಒಂದೊಂದೇ ಪುಟಗಳು ಈಗ ತೆರೆದುಕೊಳ್ಳುತ್ತಿವೆ. ಆರೋಪಿ ಮತ್ತು ಆತನ ಪತ್ನಿ ರೇಷ್ಮಾ ಛೆಟ್ರಿ 2014 ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಸಂಸಾರದಲ್ಲಿ ನಂತರ ಬಿರುಕು ಮೂಡಿತು. ಆರೋಪಿ ಮದ್ಯವ್ಯಸನಿಯಾಗಿದ್ದು, ಪತ್ನಿಗೆ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದ. ಎಷ್ಟರಮಟ್ಟಿಗೆ ಅಂದರೆ, ಮನೆಯ ಪ್ರತಿಯೊಂದು ಮೂಲೆಯಲ್ಲಿ ಹಾಗೂ ಮಲಗುವ ಕೋಣೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪತ್ನಿಯ ಮೇಲೆ ನಿಗಾ ಇಟ್ಟಿದ್ದ.
ಕೊಲೆಯ ಹಿಂದಿನ ರಾತ್ರಿ ಕುಟುಂಬದವರೆಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ನಂತರ ಆರೋಪಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಮಲಗಿಸಲು ತನ್ನ ಕೋಣೆಗೆ ಕರೆದೊಯ್ದಿದ್ದ. ಪತ್ನಿ ರೇಷ್ಮಾ ಸಿಸಿಟಿವಿ ಮಾನಿಟರ್ನಲ್ಲಿ ನೋಡುತ್ತಿದ್ದಾಗ, ಪತಿ ಫೋನ್ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದುದು ಕಂಡುಬಂದಿದೆ. ಬೆಳಗಿನ ಜಾವ 2:30ಕ್ಕೆ ಆತ ಒಬ್ಬ ಮಗಳನ್ನು ಸ್ನಾನಗೃಹಕ್ಕೆ ಕರೆದೊಯ್ದು ನಂತರ ವಾಪಸ್ ಬಂದಿದ್ದಾನೆ. ಸ್ವಲ್ಪ ಸಮಯದ ನಂತರ ಕೋಣೆಯ ದೀಪಗಳನ್ನು ಆಫ್ ಮಾಡಿದ್ದಾನೆ. ಆನಂತರ ಅಲ್ಲಿ ಯಾವುದೇ ಸದ್ದು ಕೇಳಿಸದಿದ್ದಾಗ, ಎಲ್ಲರೂ ಮಲಗಿದ್ದಾರೆ ಎಂದು ರೇಷ್ಮಾ ಭಾವಿಸಿದ್ದರು.
ದೀಪ ಆಫ್ ಮಾಡಿದ ಆ ಕರಾಳ ಕ್ಷಣದಲ್ಲೇ ಆರೋಪಿ ತನ್ನಿಬ್ಬರು ಮಕ್ಕಳ ಕತ್ತನ್ನು ಹರಿತವಾದ ಆಯುಧದಿಂದ ಸೀಳಿ ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ನಂತರ ಏನೂ ಅರಿಯದವನಂತೆ ತಾನೇ ಪೊಲೀಸರಿಗೆ ಫೋನ್ ಮಾಡಿ ಮನೆಯಲ್ಲಿ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾನೆ. ಪೊಲೀಸರನ್ನು ದಾರಿ ತಪ್ಪಿಸಲು ಆತ ನಡೆಸಿದ ಈ ನಾಟಕ ದೀರ್ಘಕಾಲ ಉಳಿಯಲಿಲ್ಲ.
ಮತ್ತಷ್ಟು ಓದಿ: ಗುಜರಾತ್ನಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಜಗಳ, ಕೊಲೆ, ಕೋಮುಗಲಭೆ
ಪೊಲೀಸರು ಸ್ಥಳಕ್ಕೆ ಬಂದಾಗ ಇಬ್ಬರು ಹೆಣ್ಣು ಮಕ್ಕಳ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಆತ ನಮ್ಮನ್ನು ಕೊಲ್ಲುವುದಾಗಿ ಆಗಾಗ ಬೆದರಿಕೆ ಹಾಕುತ್ತಿದ್ದ. ನನ್ನನ್ನು ಹೊಡೆದು ಮನೆಯಿಂದ ಹೊರಹಾಕುತ್ತಿದ್ದ ಎಂದು ರೇಷ್ಮಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ. ಒಂಬತ್ತು ತಿಂಗಳು ಮಕ್ಕಳಿಂದ ದೂರವಿದ್ದ ರೇಷ್ಮಾ, ಮಕ್ಕಳ ಮೇಲಿನ ಪ್ರೀತಿಗಾಗಿ ಮರಳಿ ಬಂದಿದ್ದರು. ಆದರೆ ಬಂದ ಕೆಲವೇ ದಿನಗಳಲ್ಲಿ ಮಕ್ಕಳ ಹೆಣ ನೋಡುವಂತಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ದೀಪೇಂದ್ರ ನಾಥ್ ಚೌಧರಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಹಂತಕ ತಂದೆಯನ್ನು ಈಗಾಗಲೇ ಬಂಧಿಸಲಾಗಿದ್ದು, ಈ ದಾರುಣ ಹತ್ಯೆಯ ಹಿಂದಿನ ಅಸಲಿ ಉದ್ದೇಶವನ್ನು ಹೊರಹಾಕಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:46 pm, Sun, 19 April 26
