ಚಿಕ್ಕೋಡಿ, ಫೆಬ್ರವರಿ 5: ಅಚಲವಾದ ಶ್ರದ್ಧೆ, ಭಕ್ತಿ, ನಂಬಿಕೆ ಇದ್ದರೆ ಯಾವುದೂ ಅಡ್ಡಿಯಾಗಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕಾ ದೇವಿ ಜಾತ್ರೆಯಲ್ಲಿ ಕಂಡು ಬಂದ ಅಪರೂಪದ ವಿದ್ಯಮಾನ ಸಾಕ್ಷಿಯಾಗಿದೆ. ತೀವ್ರ ಉಸಿರಾಟದ ತೊಂದರೆ ಇದ್ದರೂ ಪತ್ನಿಯ ಇಚ್ಛೆಯನ್ನು ನೆರವೇರಿಸಲು ಪತಿ ಆಕ್ಸಿಜನ್ ಸಿಲಿಂಡರ್ ಜೊತೆಗೇ ಬಂದು ದೇವಿಯ ದರ್ಶನ ಮಾಡಿಸಿದ್ದು ಭಕ್ತರ ಮನಸೂರೆಗೊಳ್ಳುವಂತೆ ಮಾಡಿದೆ.
ಭಾರತ ಹುಣ್ಣಿಮೆ ಪ್ರಯುಕ್ತ ನಡೆಯುತ್ತಿರುವ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಭಕ್ತಸಾಗರದ ನಡುವೆಯೇ ಮಹಾರಾಷ್ಟ್ರದ ಪಂಢರಪುರದಿಂದ ದಂಪತಿ ದರ್ಶನಕ್ಕೆ ಆಗಮಿಸಿದ್ದಾರೆ. ಪತ್ನಿಗೆ ಉಸಿರಾಟದ ತೊಂದರೆ ಇರುವ ಕಾರಣ, ಆಕ್ಸಿಜನ್ ಸಿಲಿಂಡರ್ ಕೈಯಲ್ಲಿ ಹಿಡಿದುಕೊಂಡೇ ಪತಿ ದೇವಸ್ಥಾನದವರೆಗೆ ಹೆಜ್ಜೆ ಹಾಕಿ ದೇವಿಯ ದರ್ಶನ ಮಾಡಿಸಿದ್ದಾರೆ.
ಅನಾರೋಗ್ಯವನ್ನೇ ಲೆಕ್ಕಿಸದೇ ದೇವಿಯ ದರ್ಶನ ಪಡೆದ ದಂಪತಿಯ ಭಕ್ತಿ ಸ್ಥಳೀಯರ ಮನಸೆಳೆದಿದೆ. ‘ನಾವು ಮಹಾರಾಷ್ಟ್ರದ ಪಂಢರಪುರದಿಂದ ಬಂದಿದ್ದೇವೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಮಾಯಕ್ಕಾ ದೇವಿ ದರ್ಶನಕ್ಕೆ ಬರುತ್ತಿದ್ದೇವೆ. ಈ ಬಾರಿ ಪತ್ನಿಯ ಆರೋಗ್ಯ ಸಮಸ್ಯೆ ಇದ್ದರೂ ದೇವಿಯ ಕೃಪೆಯಿಂದ ದರ್ಶನ ಚೆನ್ನಾಗಿ ಆಯಿತು’ ಎಂದು ಪತಿ ತಿಳಿಸಿದ್ದಾರೆ.