ಆಟೋ ಗ್ಯಾಸ್ ಎಮರ್ಜೆನ್ಸಿ: ಎಲ್‌ಪಿಜಿ ಬಂಕ್‌ಗಳ ಎದುರು ಮುಂದುವರಿದ ಸರದಿ ಸಾಲು, ಕರ್ನಾಟಕ ಬಂದ್ ಎಚ್ಚರಿಕೆ

ಆಟೋ ಗ್ಯಾಸ್ ಎಮರ್ಜೆನ್ಸಿ: ಎಲ್‌ಪಿಜಿ ಬಂಕ್‌ಗಳ ಎದುರು ಮುಂದುವರಿದ ಸರದಿ ಸಾಲು, ಕರ್ನಾಟಕ ಬಂದ್ ಎಚ್ಚರಿಕೆ

ಬೆಂಗಳೂರು, ಏಪ್ರಿಲ್ 7: ಕರ್ನಾಟಕದಲ್ಲಿ (Karnataka) ಆಟೋ ಗ್ಯಾಸ್ (LPG) ಅಭಾವ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗ್ಯಾಸ್‌ಗಾಗಿ ಎಲ್‌ಪಿಜಿ ಬಂಕ್‌ಗಳ ಮುಂದೆ ಆಟೋ ಸಾರಥಿಗಳು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲುವಂತಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ‘ಕರ್ನಾಟಕ ಬಂದ್’ ಮಾಡುವುದಾಗಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಬೆಂಗಳೂರಿನ ಗಿರಿನಗರ, ಹೆಬ್ಬಾಳ, ಸಾರಕ್ಕಿ, ಸಜ್ಜನ್ ರಾವ್ ಸರ್ಕಲ್ ಸೇರಿದಂತೆ ರಾಜ್ಯದ ಹಲವೆಡೆ ಆಟೋ ಚಾಲಕರು ಇಡೀ ದಿನ ದುಡಿಮೆ ಬಿಟ್ಟು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ಸೋಮವಾರವಷ್ಟೇ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಸಚಿವ ಮುನಿಯಪ್ಪ ಭರವಸೆ ಮತ್ತು ಕೇಂದ್ರಕ್ಕೆ ಪತ್ರ

ಚಾಲಕರ ಅಹವಾಲು ಆಲಿಸಿದ ಸಚಿವ ಕೆ.ಹೆಚ್. ಮುನಿಯಪ್ಪ, ಏಪ್ರಿಲ್ 10ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಮುನಿಯಪ್ಪ, ‘ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ತೀವ್ರವಾಗಿದೆ. ಕೆಲವು ಖಾಸಗಿ ವಿತರಣಾ ಕೇಂದ್ರಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ನಿಗದಿತ ದರದಲ್ಲೇ ಗ್ಯಾಸ್ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆಯ ಪಾಠ ಕಲಿಸುತ್ತೆ’: ರೋಡ್ ರೇಜ್ ಪ್ರಕರಣದಲ್ಲಿ ಟೆಕ್ಕಿಗೆ ಹೈಕೋರ್ಟ್ ಚಾಟಿ!

ಇತ್ತ ಬಾಗಲಕೋಟೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ‘ಗ್ಯಾಸ್ ಸಿಲಿಂಡರ್ ಒದಗಿಸುವುದು ಪ್ರಧಾನಿ ಮೋದಿ ಅವರ ಜವಾಬ್ದಾರಿ. ಗ್ಯಾಸ್ ಸಿಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ನಮಗೆ ತಕ್ಷಣ ಪರಿಹಾರ ಸಿಗದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಏಪ್ರಿಲ್ 9 ಗುರುವಾರದಂದು ‘ಕರಾಳ ದಿನ’ ಆಚರಿಸಿ, ಆಟೋಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *