ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ದಿ ಬೆಂಗಾಲ್ ಫೈಲ್ಸ್’ ಮುಂತಾದ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಈಗ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾಗೆ ಅವರು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ‘ಆಪರೇಷನ್ ಸಿಂದೂರ್’ (Operation Sindoor) ಕುರಿತು ಅವರು ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಪಾಕ್ ಉಗ್ರರು ಭಾರತದ ಪ್ರವಾಸಿಗರನ್ನು ಗುರಿಯಾಗಿಸಿ ಪಹಲ್ಗಾಮ್ನಲ್ಲಿ ಗುಂಡಿನ ದಾಳಿ ಮಾಡಿದ್ದರು. ಅದರಿಂದ ಅಮಾಯಕರ ಪ್ರಾಣಿಹಾನಿ ಆಗಿತ್ತು. ಆ ಘಟನೆಗೆ ಪ್ರತ್ಯುತ್ತರ ನೀಡಲು ಭಾರತವು ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತು. ಪಾಕ್ ಉಗ್ರರ ಅಡುಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿತು. ಆ ಘಟನೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗಲಿದೆ.
‘ಆಪರೇಷನ್ ಸಿಂದೂರ್’ ಸಿನಿಮಾಗೆ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಟಿ ಸಿರೀಸ್’ ಬಂಡವಾಳ ಹೂಡಲಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆಗೆ ವಿವೇಕ್ ಅಗ್ನಿಹೋತ್ರಿ ಅವರ ‘ಐ ಆ್ಯಮ್ ಬುದ್ಧ ಪ್ರೊಡಕ್ಷನ್ಸ್’ ಸಂಸ್ಥೆ ಕೂಡ ನಿರ್ಮಾಣದಲ್ಲಿ ಕೈಜೋಡಿಸಲಿದೆ ಎಂಬ ಸುದ್ದಿ ಹಬ್ಬಿದೆ.
ಸದ್ಯಕ್ಕೆ ಈ ಮಾಹಿತಿ ಕೇವಲ ಅಂತೆ-ಕಂತೆಗಳ ಹಂತದಲ್ಲಿ ಇದೆ. ಟಿ-ಸಿರೀಸ್ ಕಡೆಯಿಂದಾಗಿ, ವಿವೇಕ್ ಅಗ್ನಿಹೋತ್ರಿ ಅವರ ಕಡೆಯಿಂದಾಗಲಿ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಾಗಿ ಸಿನಿಮಾದಲ್ಲಿ ಯಾವೆಲ್ಲ ಕಲಾವಿದರು ನಟಿಸುತ್ತಾರೆ? ಶೂಟಿಂಗ್ ಯಾವಾಗ ಆರಂಭ ಆಗಲಿದೆ ಎಂಬಿತ್ಯಾದಿ ಮಾಹಿತಿ ಕೂಡ ಸದ್ಯಕ್ಕೆ ಲಭ್ಯವಾಗಿಲ್ಲ.
ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿತ್ತು. ಆದರೆ ನಂತರದ ಸಿನಿಮಾಗಳು ಅವರ ಕೈ ಹಿಡಿಯಲಿಲ್ಲ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ‘ದಿ ಬೆಂಗಾಲ್ ಫೈಲ್ಸ್’ ಮೇಲೆ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಸಿನಿಮಾ ಕೂಡ ಸೋತಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
