ಆಪರೇಷನ್ ಸಿಂಧೂರ್ ಹುತಾತ್ಮರ ವಿವಾದ; ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್​ಗೆ ಕಾಂಗ್ರೆಸ್ ಪತ್ರ – Kannada News | KC Venugopal writes to Om Birla seeks privilege motion against Rajnath Singh for misleading Parliament over Operation Sindoor statement

ನವದೆಹಲಿ, ಜೂನ್ 30: ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಕುರಿತು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅನುಮತಿ ಕೋರಿದೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಇಂದು ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Speaker Om Birla) ಅವರಿಗೆ ಪತ್ರ ಬರೆದಿದ್ದಾರೆ. ಆಪರೇಷನ್ ಸಿಂಧೂರ್ (Operation Sindoor) ವೇಳೆ ಯಾವುದೇ ಭಾರತೀಯ ಸೈನಿಕರು ಮೃತಪಟ್ಟಿಲ್ಲ ಎಂದು ರಾಜನಾಥ್ ಸಿಂಗ್ (Rajnath Singh) ಈ ಹಿಂದೆ ಪಾರ್ಲಿಮೆಂಟ್​​ಗೆ ಮಾಹಿತಿ ನೀಡಿದ್ದರು. ಆದರೆ, ಇದೀಗ ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕೇಂದ್ರ ರಕ್ಷಣಾ ಸಚಿವರು ಸಂಸತ್​ನ ದಾರಿತಪ್ಪಿಸಿದ್ದಾರೆ ಎಂದು ಕೆ.ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ ಪತ್ರದಲ್ಲಿ ಈ ಕುರಿತು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ವೇಣುಗೋಪಾಲ್, “ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಜನತೆಗೆ ಸುಳ್ಳು ಹೇಳಿದ್ದಾರೆ. ಸದನವನ್ನು ದಾರಿ ತಪ್ಪಿಸಲು ಅವರು ಜುಲೈ 2025ರಲ್ಲಿ ಯಾವುದೇ ಭಾರತೀಯ ಸೈನಿಕ ಹುತಾತ್ಮರಾಗಿಲ್ಲ ಎಂದು ಹೇಳಿದ್ದರು. ಅದಾದ ಒಂದು ವರ್ಷದ ನಂತರ ಸಶಸ್ತ್ರ ಪಡೆಗಳು ತಾವು 6 ಜನ ಸೈನಿಕರನ್ನು ಕಳೆದುಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿವೆ. ರಕ್ಷಣಾ ಸಚಿವರು ನಮ್ಮ ಸೈನಿಕರ ಬಲಿದಾನವನ್ನು ಈ ರೀತಿ ಹೇಗೆ ಮುಚ್ಚಿಡಲು ಸಾಧ್ಯ?” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Operation Sindoor 2.0: ಭಾರತ ಆಪರೇಷನ್ ಸಿಂಧೂರ್ 2.0ಗೆ ತಯಾರಿ ನಡೆಸುತ್ತಿದೆ:ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

“ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಈ 6 ವೀರ ಯೋಧರ ಶೌರ್ಯ ಮತ್ತು ಬಲಿದಾನದ ಬಗ್ಗೆ ಭಾರತದ ಜನತೆಗೆ ಮಾಹಿತಿ ನೀಡದಿರುವುದು ಆ ಹುತಾತ್ಮರ ಕುಟುಂಬಗಳಿಗೆ ಮತ್ತು ಇಡೀ ಸಶಸ್ತ್ರ ಪಡೆಗಳಿಗೆ ಮಾಡಿದ ಘೋರ ಅವಮಾನವಾಗಿದೆ” ಎಂದು ವೇಣುಗೋಪಾಲ್ ಟೀಕಿಸಿದ್ದಾರೆ. “ನಮ್ಮ ಶತ್ರುಗಳ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸುವಾಗ ಅವರು ವೀರಮರಣ ಅಪ್ಪಿದ್ದಾರೆ. ಆದರೆ, ಈ ಸ್ವಯಂ ಘೋಷಿತ ರಾಷ್ಟ್ರೀಯತಾವಾದಿ ಸರ್ಕಾರವು ಅವರ ಬಲಿದಾನದ ಬಗ್ಗೆ ಬಹಳ ಸುಲಭವಾಗಿ ಸುಳ್ಳು ಹೇಳಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರು ಸದನವನ್ನು ದಾರಿ ತಪ್ಪಿಸುವುದು ಹಕ್ಕುಚ್ಯುತಿ:

“ಯಾವುದೇ ಸಚಿವರು ಸದನವನ್ನು ದಾರಿ ತಪ್ಪಿಸಿದರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟರೆ, ಅದು ಹಕ್ಕುಚ್ಯುತಿಯಾಗುತ್ತದೆ ಮತ್ತು ಸದನದ ನಿಂದನೆಗೆ ಸಮಾನವಾಗಿರುತ್ತದೆ ಎಂಬುದು ಸ್ಥಾಪಿತ ನಿಯಮವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಕೋರಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ‘ಆಪರೇಷನ್ ಸಿಂಧೂರ್’ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ 6 ಸೈನಿಕರ ಬಲಿದಾನವನ್ನು 1 ವರ್ಷದವರೆಗೆ ಗುರುತಿಸದ ಕೇಂದ್ರ ಸರ್ಕಾರದ ನಿಲುವನ್ನು ಕಳೆದ ವಾರವಷ್ಟೇ ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು.

‘ಆಪರೇಷನ್ ಸಿಂಧೂರ್’ನಲ್ಲಿ 6 ಯೋಧರ ವೀರಮರಣ:

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಕರ್ತವ್ಯದ ಅವಧಿಯಲ್ಲಿ ವೀರಮರಣ ಅಪ್ಪಿದ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ (IAF) ಒಬ್ಬರು ಸೇರಿದಂತೆ ಒಟ್ಟು 6 ಜನ ಮಿಲಿಟರಿ ಸಿಬ್ಬಂದಿಗಳ ಹೆಸರನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ (National War Memorial) ಗೋಡೆಯ ಮೇಲೆ ಕೆತ್ತಲಾಗಿದ್ದು, ಆ ಮೂಲಕ ಹುತಾತ್ಮ ವೀರರಿಗೆ ಗೌರವ ಸಲ್ಲಿಸಲಾಗಿದೆ. ಈ ಕಾರ್ಯಾಚರಣೆಯ ನಂತರ ಸರ್ಕಾರವು ಅಧಿಕೃತವಾಗಿ ಈ 6 ಯೋಧರ ಹೆಸರುಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲ ಬಾರಿಯಾಗಿದೆ. ಏಪ್ರಿಲ್ 22, 2025ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರ ಯೋಧರ ಹೆಸರು ಪ್ರಕಟ

ರಾಷ್ಟ್ರೀಯ ಯುದ್ಧ ಸ್ಮಾರಕದ ತ್ಯಾಗ್ ಚಕ್ರದ ಗೋಡೆ ಸಂಖ್ಯೆ 3D ಯಲ್ಲಿ ಕೆತ್ತಲಾದ ಹೆಸರುಗಳು ಹೀಗಿವೆ:

ಸುಬೇದಾರ್ ಮೇಜರ್ ಪವನ್ ಕುಮಾರ್ (ಭೂಸೇನೆ)

ರೈಫಲ್‌ಮ್ಯಾನ್ ಸುನಿಲ್ ಕುಮಾರ್ (ಭೂಸೇನೆ)

ಲ್ಯಾನ್ಸ್ ನಾಯ್ಕ್ ದಿನೇಶ್ ಕುಮಾರ್ (ಭೂಸೇನೆ)

ಅಗ್ನಿವೀರ್ ಮುರಳಿನಾಯ್ಕ್ (ಭೂಸೇನೆ)

ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್ (ಭೂಸೇನೆ)

ಸಾರ್ಜೆಂಟ್ ಸುರೇಂದ್ರ ಕುಮಾರ್ (ಭಾರತೀಯ ವಾಯುಸೇನೆ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *