T20 World Cup 2026: ಟಿ20 ವಿಶ್ವಕಪ್ನಲ್ಲಿ ಆಫ್ ಸ್ಪಿನ್ನರ್ಗಳ ವಿರುದ್ಧ ಟೀಮ್ ಇಂಡಿಯಾದ ತಿಣುಕಾಟ ಮುಂದುವರೆದಿದೆ. ಈ ತಿಣುಕಾಟವನ್ನೇ ಇದಿಗ ಎದುರಾಳಿ ತಂಡಗಳು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಮೊದಲ ಓವರ್ ಎಸೆದಿದ್ದು ಐಡೆನ್ ಮಾರ್ಕ್ರಾಮ್. ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಆಗಿರುವ ಮಾರ್ಕ್ರಾಮ್ ಇಶಾನ್ ಕಿಶನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದಕ್ಕೂ ಮುನ್ನ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸಲ್ಮಾನ್ ಅಲಿ ಅಘಾ ಮೊದಲ ಓವರ್ ಎಸೆದಿದ್ದರು. ಅಲ್ಲದೆ ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಲ್ಮಾನ್ ಅಲಿ ಅಘಾ ಕೂಡ ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಎಂಬುದು.
ಇನ್ನು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಮೊದಲ ಓವರ್ನಲ್ಲೇ ಆರ್ಯನ್ ದತ್ ಔಟ್ ಮಾಡಿದ್ದರು. ಆರ್ಯನ್ ದತ್ ಕೂಡ ಆಫ್ ಸ್ಪಿನ್ನರ್ ಎಂಬುದು ವಿಶೇಷ.
ಆಫ್ ಸ್ಪಿನ್ಗೆ ಆಫ್:
- ಕಡಿಮೆ ರನ್ ಗತಿ: ಈ ಟೂರ್ನಿಯಲ್ಲಿ ಆಫ್-ಸ್ಪಿನ್ ವಿರುದ್ಧ ಭಾರತದ ಸರಾಸರಿ ರನ್ ಗತಿ ಕೇವಲ 6.23 ರನ್ ಮಾತ್ರ. ಅಂದರೆ ಆಫ್ ಸ್ಪಿನ್ನರ್ಗಳ ಓವರ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಕೇವಲ 6.23 ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.
- ವಿಕೆಟ್ ನಷ್ಟ: ಕಳೆದ 5 ಪಂದ್ಯಗಳಲ್ಲಿ ಭಾರತ ಕಳೆದುಕೊಂಡ 41 ವಿಕೆಟ್ಗಳಲ್ಲಿ 12 ವಿಕೆಟ್ಗಳನ್ನು ಆಫ್-ಸ್ಪಿನ್ನರ್ಗಳೇ ಪಡೆದಿದ್ದಾರೆ.
- ಪಾರ್ಟ್-ಟೈಮ್ ಸ್ಪಿನ್ನರ್: ವಿಶೇಷವೆಂದರೆ, ಐಡೆನ್ ಮಾರ್ಕ್ರಾಮ್ ಮತ್ತು ಸಲ್ಮಾನ್ ಅಲಿ ಅಘಾ ಅವರಂತಹ ಪಾರ್ಟ್-ಟೈಮ್ ಬೌಲರ್ಗಳೇ ಭಾರತದ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ದಾಂಡಿಗರ ವೈಫಲ್ಯ:
- ಎಡಗೈ ಬ್ಯಾಟರ್ಗಳ ಸಮಸ್ಯೆ: ಭಾರತದ ಟಾಪ್ ಆರ್ಡರ್ನಲ್ಲಿರುವ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರಂತಹ ಎಡಗೈ ಬ್ಯಾಟರ್ಗಳನ್ನು ಗುರಿಯಾಗಿಸಿ ಎದುರಾಳಿ ತಂಡಗಳು ಆಫ್-ಸ್ಪಿನ್ನರ್ಗಳನ್ನು ಬಳಸುತ್ತಿವೆ.
- ಅಭಿಷೇಕ್ ಶರ್ಮಾ: ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಆಫ್-ಸ್ಪಿನ್ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದು, ಸತತ ವೈಫಲ್ಯ ಅನುಭವಿಸಿದ್ದಾರೆ.
- ಇಶಾನ್ ಕಿಶನ್: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಮೊದಲ ಓವರ್ನಲ್ಲೇ ಆಫ್-ಸ್ಪಿನ್ನರ್ ಮಾರ್ಕ್ರಾಮ್ಗೆ ವಿಕೆಟ್ ಒಪ್ಪಿಸಿದ್ದರು.
- ಸೂರ್ಯಕುಮಾರ್ ಯಾದವ್: ಸಾಮಾನ್ಯವಾಗಿ ವೇಗವಾಗಿ ಆಡುವ ಸೂರ್ಯ ಕೂಡ ಆಫ್-ಸ್ಪಿನ್ನರ್ಗಳ ವಿರುದ್ಧ 27 ಎಸೆತಗಳಲ್ಲಿ ಕೇವಲ 28 ರನ್ ಗಳಿಸಿ ತಿಣುಕಾಡಿದ್ದಾರೆ.
ಬದಲಾವಣೆ ಸಾಧ್ಯತೆ:
ಟೀಮ್ ಇಂಡಿಯಾದ ಟಾಪ್-3 ಬ್ಯಾಟರ್ಗಳು, ಅಂದರೆ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಆಫ್ ಸ್ಪಿನ್ ಎಸೆತಗಳಲ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇಲ್ಲಾ ರನ್ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ ಟಾಪ್-3 ನಲ್ಲಿ ಬದಲಾವಣೆ ಕಂಡು ಬರಲಿದೆ.
ಅಂದರೆ ಈ ಮೂವರು ಎಡಗೈ ದಾಂಡಿಗರಲ್ಲಿ ಒಬ್ಬರನ್ನು ಕೈ ಬಿಟ್ಟು ಅವರ ಬದಲಿಗೆ ಬಲಗೈ ದಾಂಡಿಗನನ್ನು ಕಣಕ್ಕಿಳಿಸಬಹುದು. ಅದರಂತೆ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಸೌತ್ ಆಫ್ರಿಕಾ ಮನಸ್ಸು ಮಾಡಿದ್ರೆ ಭಾರತ ಡೈರೆಕ್ಟ್ ಸೆಮಿಫೈನಲ್ಗೆ!
ನಿರ್ಣಾಯಕ ಪಂದ್ಯ:
ಸೂಪರ್-8 ಸುತ್ತಿನಲ್ಲಿ ಭಾರತ ತಂಡಕ್ಕೆ ಉಳಿದಿರುವುದು ಕೇವಲ 2 ಮ್ಯಾಚ್ ಮಾತ್ರ. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಅಂದರೆ ಭಾರತ ತಂಡವು ಸೆಮಿಫೈನಲ್ಗೆ ಪ್ರವೇಶಿಸಬೇಕಿದ್ದರೆ ಮುಂದಿನ ಎರಡು ಮ್ಯಾಚ್ಗಳಲ್ಲೂ ಜಯ ಸಾಧಿಸಬೇಕು. ಅದಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಆಫ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
