ನವದೆಹಲಿ, ಏಪ್ರಿಲ್ 24: ಆಮ್ ಆದ್ಮಿ ಪಕ್ಷದಲ್ಲಿ ಆರಂಭದ ದಿನಗಳಿಂದಲೂ ಪಕ್ಷ ಕಟ್ಟಲು ಮುಖ್ಯ ಪಾತ್ರ ವಹಿಸಿದ್ದ ರಾಘವ್ ಚಡ್ಡಾ (Raghav Chadha) ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲಂಡನ್ನಲ್ಲಿ ಸಿಎ ಪದವಿ ಪಡೆದ ರಾಘವ್ ಚಡ್ಡಾ ತಮ್ಮ 23ನೇ ವಯಸ್ಸಿನಲ್ಲಿಯೇ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಎಂಟ್ರಿಯಾದರು. ಅಂದಿನಿಂದ 15 ವರ್ಷ ಆಪ್ನಲ್ಲಿಯೇ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ರಾಘವ್ ಚಡ್ಡಾ ದೆಹಲಿಯ ಬಳಿಕ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ನೆಲೆಯೂರಲು ಮುಖ್ಯ ಪಾತ್ರ ವಹಿಸಿದ್ದರು.
ಅರವಿಂದ್ ಕೇಜ್ರಿವಾಲ್ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಹಲವರಿಗಿತ್ತು. ಆದರೆ, ರಾಘವ್ ಚಡ್ಡಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಯಿತು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದ ನಂತರ ಪಕ್ಷದೊಳಗೆ ನಾನಾ ಬದಲಾವಣೆಗಳಾದವು. ಇದರಿಂದ ಬೇಸರಗೊಂಡಿದ್ದ ರಾಘವ್ ಚಡ್ಡಾ ಪಕ್ಷದೊಳಗೇ ಇದ್ದರೂ ಪಕ್ಷದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಕೇವಲ 23 ವಯಸ್ಸಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿ ಗುರುತರ ಜವಾಬ್ದಾರಿಗಳನ್ನು ವಹಿಸಿಕೊಂಡ ರಾಘವ್ ಚಡ್ಡಾ ರಾಜ್ಯಸಭೆಯ ಅಧಿವೇಶನದಲ್ಲಿ ತಮ್ಮ ಭಾಷಣದ ವೇಳೆ ಹೇಳುತ್ತಿದ್ದ ವಿಷಯಗಳಿಗೆ, ಅದಕ್ಕಾಗಿ ಅವರು ಸಂಶೋಧನೆ ಮಾಡುತ್ತಿದ್ದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅದೇ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ತಪ್ಪಾದ ಪಕ್ಷದಲ್ಲಿರುವ ಸರಿಯಾದ ನಾಯಕ ಎಂದು ಕರೆಯುತ್ತಿದ್ದುದೂ ಉಂಟು. ಇದೀಗ ರಾಘವ್ ಚಡ್ಡಾ ತನಗೆ ಗೌರವ ಸಿಗದ ಪಕ್ಷದಿಂದ ದೂರವಾಗಿದ್ದಾರೆ.
ಕೇಜ್ರಿವಾಲ್ ಅವರೊಂದಿಗಿನ ಆಪ್ತ ಸಂಬಂಧದ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ಕೇಜ್ರಿವಾಲ್ರ “ನೀಲಿ ಕಣ್ಣಿನ ಹುಡುಗ” ಎಂದು ಕರೆಯಲಾಗುತ್ತಿತ್ತು. 2022ರಲ್ಲಿ ರಾಘವ್ ಪಂಜಾಬ್ನಿಂದ ರಾಜ್ಯಸಭಾ ಸಂಸದರಾದರು. 33ನೇ ವಯಸ್ಸಿನಲ್ಲಿ ಅವರು ರಾಜ್ಯಸಭೆಯ ಕಿರಿಯ ಸದಸ್ಯರಾಗಿ ಸಂಸತ್ ಪ್ರವೇಶಿಸಿದರು. 2023ರಲ್ಲಿ ಅವರನ್ನು ಸಂಜಯ್ ಸಿಂಗ್ ಬದಲಿಗೆ ರಾಜ್ಯಸಭೆಯಲ್ಲಿ ಎಎಪಿಯ ನಾಯಕರನ್ನಾಗಿ ನೇಮಿಸಲಾಯಿತು.
ಇದನ್ನೂ ಓದಿ: ಬಿಜೆಪಿಯಿಂದ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ; ರಾಘವ್ ಚಡ್ಡಾ ಸೇರಿ 7 ಸಂಸದರ ರಾಜೀನಾಮೆಗೆ ಕೇಜ್ರಿವಾಲ್ ಪ್ರತಿಕ್ರಿಯೆ
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ, ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು ಮತ್ತು ದೆಹಲಿ ಮತ್ತು ಪಂಜಾಬ್ ಸೇರಿದಂತೆ ಎಲ್ಲಾ ಎಎಪಿ ಪ್ರಚಾರಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಆರಂಭದಿಂದಲೂ ಪಕ್ಷದಲ್ಲಿದ್ದರು. 2012ರಲ್ಲಿ ದೆಹಲಿ ಲೋಕಪಾಲ್ ಮಸೂದೆಯಲ್ಲಿ ಕೇಜ್ರಿವಾಲ್ ಅವರೊಂದಿಗೆ ಕೆಲಸ ಮಾಡುವ ಮೂಲಕ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ಅವರನ್ನು ವಜಾಗೊಳಿಸಿದ ನಂತರ ಪಕ್ಷದೊಳಗಿನ ಆಂತರಿಕ ಸಮರ ಎಲ್ಲರ ಎದುರು ಬಯಲಾಗಿತ್ತು. ಅದಕ್ಕೂ ಮೊದಲಿನಿಂದಲೂ ರಾಘವ್ ಚಡ್ಡಾ ಪಕ್ಷದ ಪ್ರಮುಖ ಕಾರ್ಯಕ್ರಮಗಳು ಮತ್ತು ಪ್ರಚಾರದಿಂದ ಗೈರುಹಾಜರಾಗಿದ್ದರು. ಪಂಜಾಬ್ನ ಉಸ್ತುವಾರಿ ಸ್ಥಾನದಿಂದಲೂ ಅವರನ್ನು ತೆಗೆದುಹಾಕಲಾಯಿತು. ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನದಂತಹ ನಿರ್ಣಾಯಕ ಸಮಯದಲ್ಲಿ ರಾಘವ್ ಪಕ್ಷವನ್ನು ಬೆಂಬಲಿಸಲಿಲ್ಲ ಎಂದು ಎಎಪಿ ನಾಯಕರು ಆರೋಪಿಸಿದರು. ಪಂಜಾಬ್ ಸರ್ಕಾರದ ವ್ಯವಹಾರಗಳಲ್ಲಿ ಅವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವೂ ಇತ್ತು.
ಇದನ್ನೂ ಓದಿ: ಕೇಜ್ರಿವಾಲ್ಗೆ ಭಾರೀ ಹೊಡೆತ; 6 ಸಂಸದರೊಂದಿಗೆ ಆಮ್ ಆದ್ಮಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್ ಚಡ್ಡಾ
ರಾಘವ್ ಚಡ್ಡಾ ರಾಜಕೀಯ ಜೀವನದ ಟೈಮ್ಲೈನ್ ಇಲ್ಲಿದೆ:
2012: ರಾಘವ್ ಚಡ್ಡಾ ಅವರ ರಾಜಕೀಯ ಪ್ರಯಾಣವು ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪನೆಯಾದಾಗಿನಿಂದ ಪ್ರಾರಂಭವಾಯಿತು. 23ನೇ ವಯಸ್ಸಿನಲ್ಲಿ ಅವರು 2012ರಲ್ಲಿ ದೆಹಲಿ ಲೋಕಪಾಲ್ ಮಸೂದೆಯನ್ನು ಕರಡು ಮಾಡಲು ಅರವಿಂದ್ ಕೇಜ್ರಿವಾಲ್ ಅವರ ಅಡಿಯಲ್ಲಿ ಕೆಲಸ ಮಾಡಿದರು. ಇದು ಶಾಸಕಾಂಗ ಕೆಲಸಕ್ಕೆ ಅವರ ಮೊದಲ ಪ್ರವೇಶವನ್ನು ಗುರುತಿಸಿತು. ನಂತರ ಅವರು ಅತ್ಯಂತ ಕಿರಿಯ ರಾಷ್ಟ್ರೀಯ ವಕ್ತಾರರಾದರು.
2015-2018: 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಜಯ ಸಾಧಿಸಿದಾಗ ರಾಘವ್ ಚಡ್ಡಾ ಅವರನ್ನು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಯಿತು. ಅವರು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. 2018ರಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರ ಅಧಿಕಾರಾವಧಿಯನ್ನು ಕೊನೆಗೊಳಿಸಿತು.
2019-2020: ಅವರು ದಕ್ಷಿಣ ದೆಹಲಿ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿದರು. ಆದರೆ, ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಸೋತರು. 2020ರಲ್ಲಿ ಅವರು ರಾಜೇಂದ್ರ ನಗರದಿಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, 20,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಅವರ ಗೆಲುವಿನ ನಂತರ ಅವರನ್ನು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.
2022: ಪಂಜಾಬ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದರು. ಅವರನ್ನು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ನೇಮಿಸಲಾಯಿತು. ಇದು ಹಲವಾರು ಕೇಂದ್ರ ಸಚಿವಾಲಯಗಳು ಮತ್ತು ನೀತಿ ಆಯೋಗ ರಚಿಸಿದ ನೀತಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗಳು ಸೇರಿದಂತೆ ದೆಹಲಿಯನ್ನು ಮೀರಿದ ಎಎಪಿಯ ಚುನಾವಣಾ ಯಶಸ್ಸಿಗೆ ಅವರು ಕೊಡುಗೆ ನೀಡಿದ್ದಾರೆ. ಅಲ್ಲಿ ಪಕ್ಷವು ಅಗಾಧ ಬಹುಮತವನ್ನು ಗಳಿಸಿತು. ನಂತರ ಅವರನ್ನು 2022ರ ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಸಹ-ಉಸ್ತುವಾರಿಯಾಗಿ ನೇಮಿಸಲಾಯಿತು. ನಂತರ ರಾಜ್ಯಸಭೆಯಲ್ಲಿ ಎಎಪಿಯ ನಾಯಕರಾಗಿ ಸೇವೆ ಸಲ್ಲಿಸಿದರು.
2023: ಪಕ್ಷದ ಸದನದ ನಾಯಕ ಸಂಜಯ್ ಸಿಂಗ್ ನ್ಯಾಯಾಂಗ ಬಂಧನದಿಂದಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಘವ್ ಚಡ್ಡಾ ಅವರನ್ನು ಸದನದ ಮಧ್ಯಂತರ ನಾಯಕರನ್ನಾಗಿ ನೇಮಿಸುವಂತೆ ವಿನಂತಿಸಿದರು. ಆದರೆ ಕಾರ್ಯವಿಧಾನದ ನಿಯಮಗಳಿಂದಾಗಿ ಆ ವಿನಂತಿಯನ್ನು ತಿರಸ್ಕರಿಸಲಾಯಿತು. ಪಂಜಾಬ್ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಈ ಕ್ರಮವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿಹಿಡಿದಿದೆ.
2024- 2026: ರಾಜ್ಯಸಭೆಯಲ್ಲಿದ್ದ ಸಮಯದಲ್ಲಿ ರಾಘವ್ ಚಡ್ಡಾ ವಿದ್ಯಾರ್ಥಿಗಳು ಮತ್ತು ಗಿಗ್ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿದರು. ವಿದ್ಯಾರ್ಥಿಗಳ ಸಾಲದ ಕುರಿತು ಅವರ ಸಂಸದೀಯ ಭಾಷಣಗಳು ವೈರಲ್ ಆದವು. ಸಾಮಾಜಿಕ ಮಾಧ್ಯಮದಲ್ಲಿ ಜೆನ್-ಝಡ್ನಿಂದ ಪ್ರಶಂಸಿಸಲ್ಪಟ್ಟವು. ಮಧ್ಯಮ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ಕೆಲವರು ಅವರನ್ನು ದೇಶದ ಅತ್ಯುತ್ತಮ ಸಂಸದ ಎಂದು ಕರೆದರು.
2026: ಏಪ್ರಿಲ್ 2026ರಲ್ಲಿ ಎಎಪಿ ಮತ್ತು ಅದರ ಉನ್ನತ ನಾಯಕತ್ವವನ್ನು ಒಳಗೊಂಡ ಪ್ರಮುಖ ಬೆಳವಣಿಗೆಗಳ ಬಗ್ಗೆ ರಾಘವ್ ಚಡ್ಡಾ ಅವರ ನಿರಂತರ ಮೌನದ ನಡುವೆ ಪಕ್ಷವು ಅವರನ್ನು ಮೇಲ್ಮನೆಯ ಪ್ರಮುಖ ಹುದ್ದೆಯಿಂದ ತೆಗೆದುಹಾಕಲು ಶಿಫಾರಸು ಮಾಡಿತು. ಇಂದು ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ