ಆಯ್ಕೆ ಮಾಡಿ ಸಿರಾಜ್​ರನ್ನು ತಂಡದಿಂದ ಕೈ ಬಿಡಲು ಇದುವೇ ಕಾರಣ! – Kannada News

ಭಾರತ ಟಿ20 ತಂಡದಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗಿದೆ. ಇತ್ತೀಚೆಗೆ ಪ್ರಕಟಿಸಲಾದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಅವರಿಗೆ ಈ ಸರಣಿಗಳಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಸಿರಾಜ್ ಅವರನ್ನು ಕೈ ಬಿಡಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವಂತೆ, ಮುಂಬರುವ ದೀರ್ಘ ಹಾಗೂ ಬಿಡುವಿಲ್ಲದ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಸಿರಾಜ್ ಅವರ ‘ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್’ ಯೋಜನೆ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದರೆ ಇಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡುವ ಸಲುವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿ ಕಡ್ಡಾಯ ವಿಶ್ರಾಂತಿ ಸೂಚಿಸಲು ಮುಖ್ಯ ಕಾರಣ ಮುಂಬರುವ ಟೆಸ್ಟ್ ಸರಣಿಗಳು. ಅಂದರೆ ಭಾರತ ತಂಡಕ್ಕೆ ಮುಂದಿನ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಏಕೆಂದರೆ ಮುಂದಿನ 9 ಟೆಸ್ಟ್ ಪಂದ್ಯಗಳಲ್ಲಿ  8 ಮ್ಯಾಚ್ ಗೆದ್ದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬಹುದು.

ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಅವರ ಕಾರ್ಯದೊತ್ತಡ ನಿರ್ವಹಣೆ ಮತ್ತು ದೈಹಿಕ ದಣಿವು ನಿವಾರಣೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲಾಗಿದೆ.

ವೈದ್ಯಕೀಯ ತಂಡ ಮತ್ತು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ನಡುವೆ ನಡೆದ ಸಮಾಲೋಚನೆಯ ನಂತರ ಈ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ…

  • ನಿರಂತರ ಬೌಲಿಂಗ್ ದಣಿವು: ಮೊಹಮ್ಮದ್ ಸಿರಾಜ್ ಅವರು 2025 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಓವರ್‌ಗಳನ್ನು  ಎಸೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದರಲ್ಲೇ ಅವರು 185.3 ಓವರ್ ಬೌಲಿಂಗ್ ಮಾಡಿದ್ದರು.
  • ಅತೀ ಹೆಚ್ಚು ಓವರ್​: 2025 ರಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಓವರ್​ಗಳನ್ನು ಎಸೆದ ವೇಗಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೂಡ ಸಿರಾಜ್. 2025 ರಿಂದ ಈವರೆಗೆ ಸಿರಾಜ್ 324.4 ಓವರ್​ಗಳನ್ನು ಎಸೆದಿದ್ದಾರೆ. ವಿಶ್ವ ಯಾವುದೇ ವೇಗದ ಬೌಲರ್ ಕಳೆದೊಂದು ವರ್ಷದಲ್ಲಿ 310 ಕ್ಕಿಂತ ಹೆಚ್ಚು ಓವರ್ ಎಸೆದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
  • ಐಪಿಎಲ್ ಪಂದ್ಯಗಳು: ಮೊಹಮ್ಮದ್ ಸಿರಾಜ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಎಲ್ಲಾ 17 ಪಂದ್ಯಗಳನ್ನು ಆಡಿದ್ದರು. ಇದರ ಬೆನ್ನಲ್ಲೇ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಭಾಗವಹಿಸಿದ್ದರು.
  • ದೀರ್ಘಾವಧಿಯ ಸರಣಿಗಳಿಗೆ ಸಿದ್ಧತೆ: ಮುಂಬರುವ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಸೀಸನ್ ಮತ್ತು ಪ್ರಮುಖ ಸರಣಿಗಳಿಗೆ ಸಿರಾಜ್ ಅವರ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ. ಹೀಗಾಗಿ ಅವರು ಸಂಪೂರ್ಣ ದೈಹಿಕ ಫಿಟ್‌ನೆಸ್ ಹಾಗೂ ವೇಗವನ್ನು ಕಾಯ್ದುಕೊಳ್ಳಲು ಈ ವಿಶ್ರಾಂತಿ ಅನಿವಾರ್ಯವಾಗಿತ್ತು.

ಸದ್ಯ ಭಾರತ ಟಿ20 ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ವಿರುದ್ಧದ ಮೂರು ಮ್ಯಾಚ್​ಗಳ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂಬರುವ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಈಗಲೇ ಬಲಿಷ್ಠ ಪಡೆಯನ್ನು ರೂಪಿಸಲು ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 21 ವರ್ಷ… ಆಸ್ಟ್ರೇಲಿಯಾವನ್ನು ಮಕಾಡೆ ಮಲಗಿಸಿದ ಬಾಂಗ್ಲಾದೇಶ್!

ಈ ಪ್ಲ್ಯಾನ್​ನ ಭಾಗವಾಗಿ ಇದೀಗ ಮೊಹಮ್ಮದ್ ಸಿರಾಜ್ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಅವರನ್ನು ಮುಂಬರುವ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ.

Source link

Leave a Reply

Your email address will not be published. Required fields are marked *