ಬೆಂಗಳೂರು, (ಜುಲೈ 16): ರಾಜ್ಯ ಸರ್ಕಾರದ ಸಾರ್ವತ್ರಿಕ ವರ್ಗಾವಣೆ ನಡೆಯುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 9 ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ಓರ್ವ ಅಪರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ, ಮೂವರು ಜಿಲ್ಲಾ ಸರ್ಜನ್, ಇಲಾಖೆಯ 8 ಉಪನಿರ್ದೇಶಕರು, 8 ಪ್ರಾಂಶುಪಾಲರು ಮತ್ತಯ 42 ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, 21 THOಗಳು ಸೇರಿ 90ಕ್ಕೂ ಹೆಚ್ಚು ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ
ಕರ್ನಾಟಕ 40 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 40 RFO ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಇಂದು (ಜುಲೈ 16) ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ
ವರ್ಗಾವಣೆಗೊಂಡಿದ್ದ ಇಬ್ಬರು IPS ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ
ವರ್ಗಾವಣೆಗೊಂಡಿದ್ದ ಇಬ್ಬರು IPS ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿಶಾ ಜೇಮ್ಸ್, ಮಾನೆ ಸ್ವಪ್ನಿಲ್ ತುಕಾರಾಮ್ ಅವರಿಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ. ನಿಶಾ ಜೇಮ್ಸ್- ಪೊಲೀಸ್ ವರಿಷ್ಠಾಧಿಕಾರಿ (ಗುಪ್ತಚರ ಇಲಾಖೆ), ಮಾನೆ ಸ್ವಪ್ನಿಲ್ ತುಕಾರಾಮ್ ಅವರನ್ನು ಕಲಬುರಗಿ ಇಂಟೆಲಿಜೆನ್ಸ್ ಎಸ್ಪಿಯಾಗಿ ನಿಯೋಜನೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ, ಅವರು ತಮ್ಮ ಹಿಂದಿನ ಹುದ್ದೆಯಾದ ಗ್ರಾಮೀಣಾಭಿವೃದ್ಧಿ ಆಯುಕ್ತ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಸಹ ಮುಂದುವರಿಸಲಿದ್ದಾರೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಪಿ. ರುದ್ರಪ್ಪಯ್ಯ ಅವರನ್ನು ವರ್ಗಾವಣೆ ಮಾಡಲಾಗಿದ್ದು, ತೆರವಾಗಿದ್ದ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.
