ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
ಬೆಂಗಳೂರು, ಜೂನ್ 24: ಟ್ರಾಫಿಕ್ ಸಮಸ್ಯೆಯಿಂದ ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಗುತ್ತಿರುವ ನಡುವೆ ಆರೋಗ್ಯ ಇಲಾಖೆ ಬೆಂಗಳೂರಿಗರಿಗೆ (Bengaluru) ಗುಡ್ ನ್ಯೂಸ್ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಬೈಕ್ ಆ್ಯಂಬ್ಯುಲೆನ್ಸ್ ಸೇವೆ ಪುನರಾರಂಭಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡ ಬಹಳ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಖಾದರ್ ಆರೋಗ್ಯ ಸಚಿವರಾಗಿದ್ದ ವೇಳೆಯೇ ರಾಜ್ಯದಲ್ಲಿ ಬೈಕ್ ಆ್ಯಂಬುಲೆನ್ಸ್ ಸೇವೆ ಪರಿಚಯಿಸಲಾಗಿತ್ತು ಎಂಬುದಿಲ್ಲಿ ಗಮನಾರ್ಹ.
2015ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೈಕ್ ಆ್ಯಂಬ್ಯುಲೆನ್ಸ್ಗಳು ರಸ್ತೆಗಿಳಿದಿದ್ದವು. ರಾಜ್ಯದ್ಯಾಂತ ಒಟ್ಟು 30 ಬೈಕ್ ಆ್ಯಂಬ್ಯುಲೆನ್ಸ್ಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಆದರೆ 8 ವರ್ಷಗಳ ಬಳಿಕ ಬೈಕ್ ರಿಪೇರಿಗೆ ಅನುದಾನದ ಕೊರತೆ, ಸಿಬ್ಬಂದಿ ಸಂಬಳದ ವಿಚಾರ ಸೇರಿ ನಾನಾ ಕಾರಣಗಳಿಂದಾಗಿ ಮಹತ್ವದ ಯೋಜನೆ ನಿಂತಿತ್ತು. ಇದೀಗ ರಾಜ್ಯದ ಆರೋಗ್ಯ ಸಚಿವರಾಗಿ ಯು.ಟಿ. ಖಾದರ್ ಮತ್ತೆ ಅಧಿಕಾರ ಸ್ವೀಕಾರದ ಬೆನ್ನಲ್ಲೇ ಈ ಸೇವೆ ಪುನರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸಚಿವರು ಅಧಿಕಾರಿಗಳ ಸಭೆ ಕೂಡ ನಡೆಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಬಹಳ ಸುಲಭವಾಗಿ ಸಿಗಲಿದೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ! ದೇಶದಲ್ಲೇ ಪ್ರಥಮ ವಿನೂತನ ಕಮಾಂಡ್ ಸೆಂಟರ್ ಲೋಕಾರ್ಪಣೆ
ಬೈಕ್ ಆ್ಯಂಬುಲೆನ್ಸ್ಗಳ ವಿಶೇಷತೆ ಏನು?
- ರೋಗಿಗಳಿಗೆ ಸುಲಭವಾಗಿ ತಕ್ಷಣ ಚಿಕಿತ್ಸೆ ಒದಗಿಸಲು ಸಾಧ್ಯ
- ಟ್ರಾಫಿಕ್ ಸಮಯದಲ್ಲಿಯೂ ರೋಗಿಯ ಬಳಿ ಸುಲಭವಾಗಿ ತಲುಪಬಹುದು
- ಆ್ಯಂಬುಲೆನ್ಸ್ಗಳ ಮಾದರಿಯಲ್ಲೇ ಇವು ಆಕ್ಸಿಜನ್ ಸಿಲಿಂಡರ್, ಫಸ್ಟ್ ಏಡ್ ಕಿಟ್, ಲೈಫ್ ಸೇವಿಂಗ್ ಮೆಡಿಸಿನ್, ಆಕ್ಸಿಮೀಟರ್, ಗ್ಲೂಕೋಮೀಟರ್, ಡ್ರೆಸಿಂಗ್ ಸಾಮಗ್ರಿಗಳನ್ನು ಹೊಂದಿರಲಿವೆ
- ಕೆಲ ಬೈಕ್ಗಳಲ್ಲಿ ಸೈಡ್ ಕ್ಯಾರೇಜ್ ಅಳವಡಿಸುವ ಕಾರಣ ರೋಗಿ ಮಲಗಲು ಅನುಕೂಲ ಮಾಡುವ ವ್ಯವಸ್ಥೆಯೂ ಇರಲಿದೆ
ಯು.ಟಿ. ಖಾದರ್ ಮಾಹಿತಿ
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್, 108 ಆ್ಯಂಬುಲೆನ್ಸ್ ಹಾಗೂ ಬೈಕ್ ಆ್ಯಂಬುಲೆನ್ಸ್ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಬೇರೆ ಬೇರೆ ರಾಜ್ಯಗಳಲ್ಲಿ ಬೈಕ್ ಆ್ಯಂಬುಲೆನ್ಸ್ಗಳು ಸೇವೆ ನೀಡುತ್ತಿವೆ. ಹೀಗಾಗಿ ನಮ್ಮಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಮತ್ತೆ ಆರಂಭಿಸುತ್ತೇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:19 pm, Wed, 24 June 26
