ಗದಗ ಜಿಲ್ಲೆಯಲ್ಲಿ ಭಾರಿ ಗಾಳಿ, ಮಳೆ ಹಾಗೂ ಆಲಿಕಲ್ಲು ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ನೂರಾರು ಎಕರೆಗಳಲ್ಲಿ ಬೆಳೆದ ಕಲ್ಲಂಗಡಿ ತೋಟಗಳು ಹಾನಿಗೊಳಗಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣನ ಆರ್ಭಟ ದೊಡ್ಡ ಹೊಡೆತ ನೀಡಿದೆ.
ಕಳೆದ ನಾಲ್ಕು–ಐದು ದಿನಗಳಿಂದ ನಿರಂತರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಕಲ್ಲಂಗಡಿ ಹಣ್ಣುಗಳು ಹಾನಿಗೊಳಗೊಂಡಿವೆ. ಹೊಲದಲ್ಲೇ ಹಣ್ಣುಗಳು ಒಡೆದು ಹಾಳಾಗಿದ್ದು, ರಾಶಿ ರಾಶಿಯಾಗಿ ಕೊಳೆಯುತ್ತಿವೆ. ಉತ್ತಮ ಗುಣಮಟ್ಟದ ಹಣ್ಣುಗಳು ಸಂಪೂರ್ಣ ಹಾನಿಯಾಗಿರುವುದರಿಂದ ರೈತರಿಗೆ ಆರ್ಥಿಕ ನಷ್ಟ ಭಾರೀ ಪ್ರಮಾಣದಲ್ಲಿ ಉಂಟಾಗಿದೆ.
ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗಬೇಕಿದ್ದ ಕಲ್ಲಂಗಡಿ ಹಣ್ಣುಗಳು ಈಗ ತೀವ್ರ ಹಾನಿಯಿಂದ ಬೆಲೆ ಕುಸಿದಿವೆ. ಕಿಲೋಗೆ 20 ರೂಪಾಯಿ ಸಿಗಬೇಕಿದ್ದ ಹಣ್ಣುಗಳನ್ನು 2 ರಿಂದ 3 ರೂಪಾಯಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಳಾದ ಹಣ್ಣುಗಳನ್ನು ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನೂರಾರು ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣ ನಾಶ!
ಒಂದು ಎಕರೆಗೆ ಸುಮಾರು 1.20 ಲಕ್ಷ ರೂಪಾಯಿ ವೆಚ್ಚ ಮಾಡಿ ಕಲ್ಲಂಗಡಿ ಬೆಳೆದ ರೈತರಿಗೆ ಭರ್ಜರಿ ಫಸಲು ಬಂದಿತ್ತು. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಸಮಯದಲ್ಲೇ ಪ್ರಕೃತಿ ವಿಪತ್ತು ಸಂಭವಿಸಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಹಣ್ಣುಗಳನ್ನು ನೆಲಕ್ಕೆ ಹೊಡೆದು ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಂಕಷ್ಟದಲ್ಲಿರುವ ರೈತರು ಸರ್ಕಾರದಿಂದ ತಕ್ಷಣ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಹಾನಿಗೊಳಗಾದ ಜಮೀನುಗಳನ್ನು ತ್ವರಿತವಾಗಿ ಸರ್ವೇ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಹಾಗೂ ರೈತರ ಒಗ್ಗಟ್ಟಿನ ಆಗ್ರಹವಾಗಿದೆ.
