ಹಾಸನ, (ಆಗಸ್ಟ್ 10): ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Devegowda)ಅವರು ಪತ್ನಿ ಸಾವಿನ ನೋವಿನಿಂದ ಆಚೆ ಬಂದಂತಿಲ್ಲ. ಇಂದು (ಆಗಸ್ಟ್ 10) ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿರುವ ಪತ್ನಿ ಸಮಾಧಿಗೆ ಪೂಜೆ ನೆರವೇರಿಸಿದರು. ಹೂ, ಅರಿಸಿಣ ಕುಂಕುಮ ಸಮರ್ಪಣೆ ಮಾಡಿ ಭಾವುಕರಾದರು. ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡ್ರು, ನನ್ನ ಜೀವನದ ಬೆನ್ನೆಲುಬು ಈಕೆ. ಈಗ ಭೂದೇವಿಯ ಗರ್ಭದಲ್ಲಿ ಚಿರನಿದ್ರೆಯಲ್ಲಿ ಇದ್ದಾಳೆ. ಸದಾ ನನ್ನ ಬೆನ್ನ ಹಿಂದೆ ನಿಂತು ನನ್ನ ಏಳಿಗೆಗಾಗಿ ದುಡಿದವಳು. ನಾನು ಜುಲೈ 14 ರ ಮಂಗಳವಾರ ಕೈಯ್ಯಾರೆ ಹಣ್ಣು ತಿನ್ನಿಸಿದ್ದೆ. ಬುಧವಾರ ನನಗೆ ಡಯಾಲಿಸಿಸ್ ಇತ್ತು ಆಸ್ಪತ್ರೆಗೆ ಹೋಗಿದ್ದೆ. ಅಷ್ಟೊತ್ತಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿದ್ರು, ಬುಧವಾರ ಮುಚ್ಚಿದ ಕಣ್ಣು ಮತ್ತೆ ತೆರೆಯಲಿಲ್ಲ. ನನ್ನ ಕಿರಿಯ ಮಗ ದೇವರಿಗೆ ಪೂಜೆ ಮಾಡಿಸಿ ಪ್ರಸಾದ ತಂದಿದ್ದರು. ಚಂದನ ಹಣೆಗಿಟ್ಟು ಹೂ ಮುಡಿಸಿದೆ ಅಷ್ಟೇ. 108 ಇದ್ದ ಪಲ್ಸ್ ರೇಟ್ 20ಕ್ಕೆ ಬಿತ್ತು. ಯಂತ್ರಗಳು ಸದ್ದು ಮಾಡಲು ಶುರು ಮಾಡಿದವು. ವೈದ್ಯರು ಓಡಿ ಬಂದರು. ಅವರು ನಿಮಗಾಗಿ ಕಾದಿದ್ದರು . ನೀವು ಬಂದ ಬಳಿಕ ಹೊರಟಿದ್ದಾರೆ ಎಂದು ಹೇಳಿದ್ರು ಎಂದು ಪತ್ನಿಯ ಕೊನೆಯ ಕ್ಷಣದ ಸನ್ನಿವೇಶವನ್ನು ಹೇಳಿ ಭಾವುಕರಾದರು.
