ಭಾರತ ಮತ್ತು ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಯುವ ದಾಂಡಿಗನನ್ನು ಮೊದಲ ಮ್ಯಾಚ್ನಲ್ಲಿ ಕಣಕ್ಕಿಳಿಸಿರಲಿಲ್ಲ. ಇದರ ಬೆನ್ನಲ್ಲೇ ಉತ್ತಮ ಫಾರ್ಮ್ನಲ್ಲಿರುವ ವೈಭವ್ಗೆ ಯಾಕೆ ಚಾನ್ಸ್ ನೀಡಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಅನುಭವಕ್ಕೆ ಮಣೆ:
ಈ ಬಗ್ಗೆ ಮಾತನಾಡಿದ ಭಾರತ ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ ಖಂಡಿತವಾಗಿಯೂ ಅತ್ಯಂತ ಪ್ರತಿಭಾವಂತ ಆಟಗಾರ. ಆದರೆ, ತಂಡದ ಹಿರಿಯ ಮತ್ತು ಅನುಭವಿ ಆಟಗಾರರ ಸಂಯೋಜನೆಯಲ್ಲಿ ತಕ್ಷಣವೇ ಬದಲಾವಣೆ ಮಾಡುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಮ್ಯಾನೇಜ್ಮೆಂಟ್ ಬಂದಿದೆ ಎಂದು ತಿಳಿಸಿದ್ದಾರೆ. ಅಂದರೆ ಈ ಹಿಂದೆ ಟಿ20 ವಿಶ್ವಕಪ್ನಲ್ಲಿ ಮಿಂಚಿದ್ದ ಪ್ರಮುಖ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ಜೋಡಿ:
ವೈಭವ್ ಸೂರ್ಯವಂಶಿ ಅವರು ಮೂಲತಃ ಆರಂಭಿಕ ಆಟಗಾರ. ಆದರೆ ಪ್ರಸ್ತುತ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಫಾರ್ಮ್ನಲ್ಲಿರುವ ಹಿರಿಯ ಆಟಗಾರರು ಟಾಪ್-ಆರ್ಡರ್ನಲ್ಲಿದ್ದಾರೆ. ಇಲ್ಲಿ ವೈಭವ್ನನ್ನು ಕಣಕ್ಕಿಳಿಸಬೇಕಿದ್ದರೆ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ ಅಥವಾ ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ನನ್ನು ಕೈ ಬಿಡಬೇಕಾಗುತ್ತದೆ. ಇದು ಫಾರ್ಮ್ನಲ್ಲಿರುವ ಹಿರಿಯ ಆಟಗಾರರಿಗೆ ತಪ್ಪು ಸಂದೇಶ ರವಾನಿಸದಂತಾಗುತ್ತದೆ ಎಂದು ಕೋಚಿಂಗ್ ಸಿಬ್ಬಂದಿ ವೈಭವ್ ಸೂರ್ಯವಂಶಿಯನ್ನು ಕಣಕ್ಕಿಳಿಸಿಲ್ಲ.
ಗೆಲುವಿನ ಲಯ:
ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಟೀಮ್ ಇಂಡಿಯಾದಲ್ಲಿ ಅನಗತ್ಯ ಪ್ರಯೋಗಗಳನ್ನು ಮಾಡಲು ಮ್ಯಾನೇಜ್ಮೆಂಟ್ ಮುಂದಾಗಿಲ್ಲ. ಅದರಲ್ಲೂ ಟಿ20 ವಿಶ್ವಕಪ್ ಫೈನಲ್ನಲ್ಲಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಉತ್ತಮವಾಗಿ ಆಡಿದ್ದರು. ಹೀಗಾಗಿ ಅವರನ್ನೇ ಮುಂದುವರೆಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಒಂದೇ ಪಂದ್ಯ, ಮೂರು ತಂಡಗಳ ಸೆಮಿಫೈನಲ್ ಭವಿಷ್ಯ ನಿರ್ಧಾರ!
ವೈಭವ್ ಸೂರ್ಯವಂಶಿ ಪಾದಾರ್ಪಣೆ ಯಾವಾಗ?
ಜೂನ್ 28 ರಂದು ಭಾನುವಾರ ನಡೆಯಲಿರುವ ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಥವಾ ಜುಲೈ 1 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅದರಂತೆ ನಾಳೆ (ಜೂ 28) ಅಥವಾ ಮುಂದಿನ ಬುಧವಾರ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಬಹುದು.