ಇನ್ನೂ ಮದುವೆ ಆಗದಿರಲು ಆ ಸಮಸ್ಯೆ ಕಾರಣ: ನಟಿ ಚಿತ್ರ ರೇಖಾ – Kannada News | Rekha Vedavyas talks about her personal life and marriage

ಇಸವಿ 2000 ರಲ್ಲಿ ಕನ್ನಡ ಚಿತ್ರರಂಗಕ್ಕೆ (Sandalwood) ಇಬ್ಬರು ರೇಖಾರ ಪರಿಚಯವಾಯ್ತು. ಒಬ್ಬರು ‘ಸ್ಪರ್ಷ’ ರೇಖಾ ಎನಿಸಿಕೊಂಡರೆ ಮತ್ತೊಬ್ಬರು ‘ಚಿತ್ರ’ ರೇಖಾ. ‘ಸ್ಪರ್ಷ’ ರೇಖಾ, ಸುದೀಪ್ ಮತ್ತು ದರ್ಶನ್ ಇಬ್ಬರೂ ನಾಯಕನಾಗಿ ನಟಿಸಿದ ಸಿನಿಮಾನಲ್ಲಿ ನಾಯಕಿ ಆಗಿ ನಟಿಸಿದ್ದರು. 2004 ರ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಸ್ಪರ್ಷ ರೇಖಾ, 2015 ರಿಂದ ಮತ್ತೆ ಸಕ್ರಿಯರಾಗಿದ್ದಾರೆ. ಬಿಗ್​​ಬಾಸ್​​ನಲ್ಲಿಯೂ ಇವರು ಭಾಗವಹಿಸಿದ್ದರು. ಆದರೆ ಚಿತ್ರ ರೇಖಾ ಅವರದ್ದು ಬೇರೆ ಕತೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ ಕನ್ನಡತಿ ‘ಚಿತ್ರ’ ರೇಖಾ. 2014ರ ವರೆಗೆ ಸಕ್ರಿಯರಾಗಿದ್ದರು. ಆ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾದರು. ರೇಖಾ ಮದುವೆ ಸಹ ಆಗಿಲ್ಲ, ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ರೇಖಾ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತೆರೆಯ ಮೇಲೆ ಹಾಡುತ್ತಾ, ಕುಣಿಯುತ್ತಾ ಖುಷಿಯಿಂದ ಕಾಣಿಸಿಕೊಳ್ಳುವ ನಟಿಯರ ಖಾಸಗಿ ಜೀವನದಲ್ಲಿ ಎಷ್ಟೆಲ್ಲ ನೋವುಗಳಿರುತ್ತವೆ ಎಂಬುದಕ್ಕೆ ರೇಖಾ ಅವರ ಜೀವನ ಉದಾಹರಣೆ. ಬೆಂಗಳೂರಿನವರಾದ ರೇಖಾ ವೇದವ್ಯಾಸ, ಚಿತ್ರರಂಗದಲ್ಲಿ ಸುಮಾರು ಒಂದು ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದರು. ಭಾರಿ ಬೇಡಿಕೆಯ ನಟಿ ಎನಿಸಿಕೊಂಡರು. ಆದರೆ ಅವರ ಖಾಸಗಿ ಜೀವನದಲ್ಲಿ ಉಂಟಾದ ಸಮಸ್ಯೆ, ನೋವುಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದವು.

ಕನ್ನಡದ ‘ಹುಚ್ಚ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ರೇಖಾ, ಬಳಿಕ ‘ಚಿತ್ರ’ ಸಿನಿಮಾನಲ್ಲಿ ನಟಿಸಿ ಚಿತ್ರ ರೇಖಾ ಎನಿಸಿಕೊಂಡರು. ತೆಲುಗಿನ ‘ಆನಂದಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಖಾ, ಅಲ್ಲಿಯೂ ಸಹ ಮೊದಲ ಸಿನಿಮಾನಲ್ಲಿಯೇ ಭಾರಿ ಯಶಸ್ಸು ಗಳಿಸಿದರು. ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಈ ಸುಂದರಿ, 2012ರ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದರು. ಈ ಹಠಾತ್ ಕಣ್ಮರೆಯ ಹಿಂದೆ ದೊಡ್ಡದೊಂದು ನೋವಿನ ಕಥೆಯೇ ಇತ್ತು.

ಇದನ್ನೂ ಓದಿ:ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಇತ್ತೀಚಿನ ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿರುವ ರೇಖಾ, ತಾನು ಸಿನಿಮಾದಿಂದ ದೂರ ಉಳಿಯಲು ಮುಖ್ಯ ಕಾರಣ ‘ಆರೋಗ್ಯದ ಸಮಸ್ಯೆ’ ಎಂದು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಏರುಪೇರಿನಿಂದ ಬಳಲುತ್ತಿದ್ದರಂತೆ. ಇದರಿಂದಾಗಿ ಅವರು ದೈಹಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಇದೇ ಕಾರಣಕ್ಕೆ ಅವರು ಬಂದಂತಹ ಅನೇಕ ಸಿನಿಮಾ ಅವಕಾಶಗಳನ್ನು ಕೈಬಿಡಬೇಕಾಯಿತಂತೆ.

ರೇಖಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, “ಹಿಂದೆ ನನಗೆ ಮದುವೆಯ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ನಂತರ ಮನಸ್ಸು ಬದಲಾಗಿ ಮದುವೆಯಾಗೋಣ ಎಂದು ನಿರ್ಧರಿಸಿದೆ. ಆದರೆ ನನ್ನ ಇಂದಿನ ಪರಿಸ್ಥಿತಿ ಮತ್ತು ಆರೋಗ್ಯದ ಸ್ಥಿತಿಯನ್ನು ನೋಡಿ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ” ಎಂದು ಅತೀವ ನೋವಿನಿಂದ ಹೇಳಿಕೊಂಡಿದ್ದಾರೆ.

ಅಲ್ಲದೆ, “ಅವಸರಪಟ್ಟು ಮದುವೆಯಾಗಿ ವಿಚ್ಛೇದನದವರೆಗೆ ಹೋಗುವ ಸಂಬಂಧಗಳಿಗಿಂತ, ಸ್ವಲ್ಪ ತಡವಾದರೂ ಪರವಾಗಿಲ್ಲ ಒಬ್ಬ ಸರಿಯಾದ ಸಂಗಾತಿ ಸಿಗಲಿ ಎಂಬುದು ನನ್ನ ಅಭಿಪ್ರಾಯ. ಇಂದು ಚಿತ್ರರಂಗ ಸಂಪೂರ್ಣ ಬದಲಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ನಾನು ಇಂದಿಗೂ ಧೈರ್ಯವಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ದೇವರ ಕೃಪೆಯೇ ಕಾರಣ” ಎಂದು ಅವರು ಹೇಳಿದ್ದಾರೆ.

ತಾವು ಆರೋಗ್ಯ ಸಮಸ್ಯೆಯಿಂದ ಬಳಲಿರುವ ಬಗ್ಗೆ ಹೇಳಿಕೊಂಡಿರುವ ರೇಖಾ, ತಮಗೆ ಇದ್ದ ಸಮಸ್ಯೆ ಏನು ಎಂಬುದನ್ನು ಹೇಳಿಲ್ಲ. ಸದ್ಯ ರೇಖಾ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *