
ನವದೆಹಲಿ, ಮಾರ್ಚ್ 17: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಯತ್ನಿಸುವಂತೆ ಭಾರತಕ್ಕೆ ಫಿನ್ಲ್ಯಾಂಡ್ ಕರೆ ನೀಡಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ಶಾಂತಿ ಏರ್ಪಡಿಸಿ, ಬಿಕ್ಕಟ್ಟು ಶಮನಗೊಳಿಸಲು ಭಾರತ ಮಧ್ಯಸ್ಥಿಕೆ ವಹಿಸಲಿ ಎಂದು ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ (Alexander Stubb) ಸಲಹೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಯುದ್ಧ ನಿಲುಗಡೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕರೆ ನೀಡಿರುವ ಸಂಗತಿಯನ್ನು ಉಲ್ಲೇಖಿಸಿದ್ದಾರೆ.
‘ನಮಗೆ ಈಗ ಯುದ್ಧವಿರಾಮ ಬೇಕಿದೆ. ಇದರಲ್ಲಿ ಭಾರತ ಭಾಗಿಯಾಗಬಹುದಾ ಎನ್ನುವ ಕುತೂಹಲ ಇದೆ. ಬಿಕ್ಕಟ್ಟು ಶಮನಗೊಳಿಸಲು ಯುದ್ಧವಿರಾಮ ಏರ್ಪಡುವಂತೆ ಜೈಶಂಕರ್ ಕರೆ ಕೊಟ್ಟಿರುವುದನ್ನು ನಾವು ನೋಡಿದ್ದೇವೆ’ ಎಂದು ಅಲೆಕ್ಸಾಂಡರ್ ಸ್ಟಬ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ
ಭಾರತ ಹೆಚ್ಚಿನ ದೇಶಗಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದೆ. ಅಮೆರಿಕ, ಇರಾನ್ ಮತ್ತು ಇಸ್ರೇಲ್, ಈ ಮೂರೂ ದೇಶಗಳೊಂದಿಗೆ ಭಾರತದ ಉತ್ತಮ ಸಂಬಂಧ ಇದೆ. ಯಾರೊಂದಿಗೆ ಬೇಕಾದರೂ ಮಾತುಕತೆ ನಡೆಸುವ ಸ್ಥಿತಿಯಲ್ಲಿ ಭಾರತ ಇದೆ. ಇರಾನ್ ಜೊತೆ ಎಸ್ ಜೈಶಂಕರ್ ಮತ್ತು ನರೇಂದ್ರ ಮೋದಿ ಸಂಪರ್ಕದಲ್ಲಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಸಯದ್ ಅಬ್ಬಾಸ್ ಅರಾಗ್ಚಿ ಜೊತೆ ಜೈಶಂಕರ್ ದೂರವಾಣಿಯಲ್ಲಿ ಮಾತನಾಡಿ ವಿಚಾರ ವಿನಿಮಯ ಮಾಡಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜೊತೆ ಮಾತನಾಡಿ, ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಿಎನ್ಜಿ ಗ್ಯಾಸ್ಗೂ ಎಲ್ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್ಜಿ ಕನೆಕ್ಷನ್ ಪಡೆಯುವುದು ಹೇಗೆ?
ಅಮೆರಿಕ ಮತ್ತು ಇಸ್ರೇಲ್ನ ಆಕ್ರಮಣಕಾರಿ ವರ್ತನೆಯ ಫಲಶ್ರುತಿಯಾಗಿದೆ ಈ ಯುದ್ಧದ ಸ್ಥಿತಿ. ಇರಾನ್ ಕೇವಲ ತನ್ನ ಆತ್ಮರಕ್ಷಣೆ ಮಾಡಿಕೊಳ್ಳುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವರು ಭಾರತಕ್ಕೆ ತಿಳಿಸಿದ್ದಾರೆ. ಮೋದಿ ಮತ್ತು ಜೈಶಂಕರ್ ಅವರ ಮಾತುಕತೆಯ ಪರಿಣಾಮವಾಗಿ ಹಾರ್ಮುಜ್ ಜಲಸಂಧಿ ಮೂಲಕ ಕೆಲ ಭಾರತೀಯ ಗ್ಯಾಸ್ ಟ್ಯಾಂಕರ್ಗಳಿಗೆ ಸಾಗಲು ಇರಾನ್ ಅನುಮತಿಸಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ