ಇಲಿ ಕಡಿತವನ್ನು ಸಾಮಾನ್ಯ ಎಂದು ಪರಿಗಣಿಸಿ ಪ್ರಾಣಕ್ಕೇ ಅಪಾಯ ತಂದುಕೊಳ್ಳಬೇಡಿ, ತಪ್ಪದೇ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ – Kannada News | Bitten By A Rat? Follow These 3 Life Saving Tips From Experts Without Fail

ಇಲಿಗಳ ಹಾವಳಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ, ಇದರ ಬಗ್ಗೆ ಯಾರೂ ಹೆಚ್ಚಾಗಿ ಗಮನಹರಿಸುವುದಿಲ್ಲ ಹಾಗೇ ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಮನೆಯಲ್ಲಿ ಇಲಿಗಳ ಓಡಾಟ ಎಷ್ಟು ಕಿರಿಕಿರಿ ಉಂಟುಮಾಡುತ್ತದೆಯೋ, ಅದು ಕಡಿದರೆ ಅಷ್ಟೇ ಅಪಾಯವನ್ನೂ ಉಂಟುಮಾಡುತ್ತದೆ. ಏಕೆಂದರೆ ಇಲಿ ಕಡಿತವನ್ನು (Rat Bite) ವಿಷವೆಂದು ಪರಿಗಣಿಸಲಾಗುತ್ತದೆ ಹಾಗೂ ತಕ್ಷಣದ ವೈದ್ಯಕೀಯ ನೆರವೂ ಅಗತ್ಯವಾಗಿರುತ್ತದೆ. ಇಲಿಯ ಕಡಿತ, ಪರಚುವಿಕೆ ಸಣ್ಣ ಸಂಗತಿಯಲ್ಲ, ಇದು ಜೀವಕ್ಕೆ ಅಪಾಯ ತಂದೊಡ್ಡಬಹುದು. ಜೊತೆಗೆ ಇಲಿಯ ವೀರ್ಯ, ಮಲ, ಮೂತ್ರಗಳಿಂದಲೂ ಸೋಂಕುಗಳು ಹರಡುತ್ತವೆ. ಆದ ಕಾರಣ, ಈ ಬಗ್ಗೆ ಸಾಧ್ಯವಾದಷ್ಟು ಗಮನಹರಿಸುವುದು ಬಹಳ ಮುಖ್ಯ. ಹಾಗಾದರೆ ಇಲಿಯಿಂದ ಕಚ್ಚಿಸಿಕೊಂಡರೆ ಏನಾಗುತ್ತದೆ, ಇಲಿ ಕಡಿತದಿಂದ ಕಂಡುಬರುವ ಸಾಮಾನ್ಯ ಲಕ್ಷಣಗಳು ಹೇಗಿರುತ್ತವೆ ಮತ್ತು ಈ ರೀತಿಯಾದಾಗ ಮೊದಲು ಏನು ಮಾಡಬೇಕು ಎಂಬುದರ ಬಗ್ಗೆ ಹಾಸನ ಎಸ್‌ಡಿಎಮ್‌ ಆಯುರ್ವೇದ ಕಾಲೇಜ್‌ ಮತ್ತು ಆಸ್ಪತ್ರೆಯ ಅಸಿಸ್ಟೆಂಟ್‌ ಪ್ರೊಫೆಸರ್, ಅಗದತಂತ್ರ ಏವಂ ವಿಧಿ ವೈದ್ಯಕರಾಗಿರುವ ಡಾ. ರಕ್ಷಿತ್‌ ಎನ್‌ ಎನ್‌ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಇಲಿ ಕಡಿತದಿಂದ ಕಂಡುಬರುವ ಸಾಮಾನ್ಯ ಲಕ್ಷಣಗಳು:

ದದ್ದುಗಳು, ಚರ್ಮದ ಮೇಲೆ ಕೆಂಪು ಕಲೆ, ಚಳಿಯೊಂದಿಗೆ ಜ್ವರ, ಕೀಲು ನೋವು, ದೌರ್ಬಲ್ಯ, ತಲೆ ಸುತ್ತು,. ಚರ್ಮ ಬಿಳಿಚಿಕೊಳ್ಳುವುದು, ಗಂಟುಗಳು, ಊತ, ಮೈ ಜುಮ್‌ ಎನಿಸುವುದು, ಗಾಯದಿಂದ ರಕ್ತ ಸ್ರಾವವಾಗಬಹುದು. ಜೊತೆಗೆ ಇಲಿಗಳು ರ್‍ಯಾಟ್‌ ಫೀವರ್, ಲ್ಯಾಪ್ಟೋಸ್ಟಿರೋಸಿಸ್‌ ಎಂಬ ಅಪಾಯಕಾರಿ ರೋಗವನ್ನು ಹರಡುತ್ತವೆ. ಕಚ್ಚಿದ 3ರಿಂದ 10 ದಿನಗಳೊಳಗೆ ದಿಢೀರ್ ಜ್ವರ, ವಾಂತಿ, ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ.

ಇಲಿ ಕಡಿದರೆ ತಕ್ಷಣ ಏನು ಮಾಡಬೇಕು?

ರಕ್ತಸ್ರಾವ ನಿಲ್ಲಿಸಿ: ಗಾಯದಿಂದ ಹೊರಬರುತ್ತಿರುವ ರಕ್ತಸ್ರಾವವನ್ನು ಮೊದಲು ನಿಲ್ಲಿಸಿ. ಶುದ್ದವಾದ ಬಟ್ಟೆಯಿಂದ ಗಾಯವನ್ನು ಗಟ್ಟಿಯಾಗಿ ಒತ್ತಿ ಹಿಡಿಯಿರಿ.

ಗಾಯವನ್ನು ಸ್ವಚ್ಚಗೊಳಿಸಿ: ರಕ್ತಸ್ರಾವ ನಿಂತ ನಂತರ, ಗಾಯವಾದ ಜಾಗವನ್ನು ಹರಿಯುವ ನೀರಿ (ಬೆಚ್ಚಗಿನ ನೀರಾದರೆ ಉತ್ತಮ) ನಲ್ಲಿ ತೊಳೆಯಿರಿ. ಆಂಟಿ ಬ್ಯಾಕ್ಟೀರಿಯಲ್‌ ಲಿಕ್ವಿಡ್‌ ಅಥವಾ ಸೋಪಿನ ಬಳಕೆ ಉತ್ತಮ, ಇದರಿಂದ ಗಾಯದ ಒಳಗೆ ಸೇರಿರುವ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ನೆರವಾಗುತ್ತದೆ.

ವೈದ್ಯರ ಭೇಟಿ ಕಡ್ಡಾಯ: ಗಾಯ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಇಲಿ ಪರಚಿದ ಗಾಯವಾದರೂ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿಯಾಗಿ. ಇಲಿ ಕಡಿತದಿಂದ ಧನುರ್ವಾಯು ಬರುವ ಅಪಾಯವಿರುತ್ತದೆ, ಕಳೆದ ಐದು ವರ್ಷಗಳಲ್ಲಿ ಟೆಟಾನಸ್‌ ಚುಚ್ಚುಮದ್ದು ಪಡೆಯದೇ ಇದ್ದಲ್ಲಿ ವೈದ್ಯರಿಗೆ ತಿಳಿಸಿ ಟೆಟಾನಸ್‌ ಚುಚ್ಚುಮದ್ದು ಪಡೆಯಿರಿ.

ಇದನ್ನೂ ಓದಿ: ಹಾಂಟಾ ವೈರಸ್ ಯಾರಿಗೆ ಹೆಚ್ಚು ಅಪಾಯಕಾರಿ ಗೊತ್ತಾ? ತಜ್ಞರು ಹೇಳಿರುವ ಈ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ

ದೇಹಕ್ಕೆ ಸೇರಿದ ವಿಷ ನಿರ್ಮೂಲನೆಗೆ ಆಯುರ್ವೇದ ಸಲಹೆಗಳು:

ಡಾ. ರಕ್ಷಿತ್‌ ಹೇಳಿರುವ ಪ್ರಕಾರ, ತುರ್ತು ಚಿಕಿತ್ಸೆ ಬಳಿಕ ದೇಹದಲ್ಲಿ ಉಳಿದಿರುವ ವಿಷಕಾರಿ ಅಂಶಗಳನ್ನು ತೆಗೆಯುವಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದದ ಕೆಲವು ಮಾರ್ಗಗಳು ಸಹಾಯಕಾರಿ. ಕಹಿಬೇವಿನ ಎಲೆ ಮತ್ತು ಅರಿಶಿಣವನ್ನು ಅರೆದು ಗಾಯದ ಸುತ್ತ (ಗಾಯದ ಮೇಲಲ್ಲ) ಹಚ್ಚುವುದರಿಂದ ಸೋಂಕು ಬೇರೆಡೆ ಹರಡುವುದನ್ನು ತಡೆಯಬಹುದು. ಹಾಗೇ ರಕ್ತ ಶುದ್ದಿಗೆ ಆಯುರ್ವೇದ ತಜ್ಞರ ಸಲಹೆ ಮೇರೆಗೆ ‘ಮಂಜಿಷ್ಠಾದಿ ಕಷಾಯ’ ಅಥವಾ ಸಾರಿವಾದಂತಹ ರಕ್ತ ಶುದ್ಧೀಕರಿಸುವ ಔಷಧಗಳನ್ನು ಸೇವಿಸುವುದು ಉತ್ತಮ. ಹಾಗೇ ರೋಗನಿರೋಧಕ ಶಕ್ತಿ ವರ್ಧನೆಗೆ ಅಮೃತಬಳ್ಳಿ ಮತ್ತು ಅಶ್ವಗಂಧದಂತಹ ಮೂಲಿಕೆಗಳ ಸೇವನೆ ಉತ್ತಮ ಎಂದು ಹೇಳಿದ್ದಾರೆ.

ಸಾಧ್ಯವಾದಷ್ಟು ವಾಸಸ್ಥಾನದಲ್ಲಿ ಇಲಿಗಳ ಓಡಾಟವನ್ನು ತಪ್ಪಿಸಿ, ಮನೆ ಸುತ್ತಮುತ್ತ ಕಸ ಶೇಖರಣೆಯಾಗದಂತೆ ನೋಡಿಕೊಳ್ಳಿ, ಆಹಾರ ಪದಾರ್ಥಗಳನ್ನು ಗಾಳಿಯಾಡದಂತಹ ಡಬ್ಬಿಗಳಲ್ಲಿ ಸುರಕ್ಷಿತವಾಗಿಡಿ. ಹಾಗೇ ಇಲಿ ಕಡಿತವನ್ನು ಎಂದೂ ಚಿಕ್ಕ ಗಾಯವೆಂದು ಕಡೆಗಣಿಸದಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *