ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ? – Kannada News | Crude Oil Price Hike: How Israel Iran Tensions Impact India’s Economy and Fuel Strategy

ದೆಹಲಿ, ಫೆ.28: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಇಂಧನ ಬೆಲೆಗಳು (Petrol-Diesel Prices) ಏರಿಕೆಯಾಗಲಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇರಾನ್ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಯುದ್ಧದ ಕಾರಣದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಪ್ರತಿ ಬ್ಯಾರೆಲ್‌ಗೆ ಏರಿಕೆಯಾಗುತ್ತಿದೆ.

ಭಾರತವು ತನ್ನ ತೈಲದ ಅಗತ್ಯದ ಶೇ. 80ಕ್ಕಿಂತ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ಬೆಲೆ ಏರಿಕೆಯಾದರೆ, ಅದು ನೇರವಾಗಿ ಭಾರತದ ಆರ್ಥಿಕತೆಯ ಮೇಲೆ ಹೊರೆಯಾಗಲಿದೆ. ಕೆಂಪು ಸಮುದ್ರದ (Red Sea) ಮಾರ್ಗವಾಗಿ ನಡೆಯುವ ತೈಲ ಸಾಗಾಣಿಕೆಗೆ ಯುದ್ಧದ ಕಾರಣ ಅಡ್ಡಿಯುಂಟಾದರೆ, ವಿಮೆ ಮತ್ತು ಸಾಗಾಣಿಕೆ ವೆಚ್ಚಗಳು ಹೆಚ್ಚಾಗಲಿವೆ. ಇದು ಅಂತಿಮವಾಗಿ ಇಂಧನ ಬೆಲೆ ಏರಿಕೆಗೆ ದಾರಿ ಮಾಡಿಕೊಡಬಹುದು. ಸದ್ಯಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ತೈಲ ಕಂಪನಿಗಳು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಜಾಗತಿಕ ಪರಿಸ್ಥಿತಿ ಹದಗೆಟ್ಟರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತದಲ್ಲಿ ಚಿಲ್ಲರೆ ಇಂಧನ ಬೆಲೆಗಳು:

ನವದೆಹಲಿ: ಪೆಟ್ರೋಲ್ 94.77 ರೂ./ಲೀಟರ್, ಡೀಸೆಲ್ 87.57 ರೂ./ಲೀಟರ್

ಮುಂಬೈ: ಪೆಟ್ರೋಲ್ 103.54/ಲೀಟರ್, ಡೀಸೆಲ್ 90.03/ಲೀಟರ್

ಬೆಂಗಳೂರು: ಪೆಟ್ರೋಲ್ 103.06 ರೂ./ಲೀಟರ್, ಡೀಸೆಲ್ 91.09 ರೂ./ಲೀಟರ್

ಹೈದರಾಬಾದ್: ಪೆಟ್ರೋಲ್ 107.50/ಲೀಟರ್, ಡೀಸೆಲ್ 95.70/ಲೀಟರ್

ಚೆನ್ನೈ: ಪೆಟ್ರೋಲ್ 100.93/ಲೀಟರ್, ಡೀಸೆಲ್ 92.48/ಲೀಟರ್

ದಿನಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ

ಡೀಸೆಲ್ ಬೆಲೆ ಏರಿಕೆಯಾದ ತಕ್ಷಣ ಸಾರಿಗೆ ವೆಚ್ಚ (Transportation Cost) ಹೆಚ್ಚಾಗುತ್ತದೆ. ತರಕಾರಿ, ಹಣ್ಣುಗಳು, ಹಾಲು ಮತ್ತು ದಿನಸಿ ಪದಾರ್ಥಗಳನ್ನು ಮಾರುಕಟ್ಟೆಗೆ ತರಲು ಹೆಚ್ಚು ಹಣ ಖರ್ಚಾಗುವುದರಿಂದ, ಇವೆಲ್ಲವುಗಳ ಬೆಲೆ ಜನಸಾಮಾನ್ಯರ ಕೈಗೆಟುಕದಂತಾಗುತ್ತದೆ.

ಸಾಗಾಣಿಕೆ ಮಾರ್ಗದಲ್ಲಿ ಅಡಚಣೆ:

ಇಸ್ರೇಲ್-ಇರಾನ್ ಸಂಘರ್ಷವು ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ (Red Sea) ಮಾರ್ಗಗಳ ಮೇಲೆ ಪರಿಣಾಮ ಬೀರುತ್ತದೆ. ಜಗತ್ತಿನ ಹೆಚ್ಚಿನ ವ್ಯಾಪಾರ ಈ ಮಾರ್ಗಗಳ ಮೂಲಕವೇ ನಡೆಯುತ್ತದೆ. ಯುದ್ಧದ ಭೀತಿಯಿಂದ ಹಡಗುಗಳ ವಿಮೆ (Insurance) ಮತ್ತು ಪ್ರಯಾಣದ ಅವಧಿ ಹೆಚ್ಚಾಗುವುದರಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ಸ್, ಚಿನ್ನ ಮತ್ತು ಇತರ ವಸ್ತುಗಳ ಬೆಲೆ ಏರುತ್ತದೆ.

ರೂಪಾಯಿ ಮೌಲ್ಯ ಕುಸಿತ:

ಜಾಗತಿಕ ಅನಿಶ್ಚಿತತೆ ಉಂಟಾದಾಗ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾದ ಚಿನ್ನ ಅಥವಾ ಡಾಲರ್ ಮೇಲೆ ಹೂಡಿಕೆ ಮಾಡುತ್ತಾರೆ. ಇದರಿಂದ ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತದೆ. ರೂಪಾಯಿ ದುರ್ಬಲಗೊಂಡಷ್ಟೂ ನಾವು ವಿದೇಶದಿಂದ ತರಿಸಿಕೊಳ್ಳುವ ಪ್ರತಿಯೊಂದು ವಸ್ತುವಿಗೂ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಕುಸಿತ:

ಯುದ್ಧದ ಸುದ್ದಿಯಿಂದಾಗಿ ಹೂಡಿಕೆದಾರರು ಆತಂಕಕ್ಕೊಳಗಾಗಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಇದರಿಂದ ಷೇರು ಮಾರುಕಟ್ಟೆ ಕುಸಿದು, ಸಾಮಾನ್ಯ ಜನರ ಮ್ಯೂಚುಯಲ್ ಫಂಡ್ (MF) ಮತ್ತು ಎಸ್‌ಐಪಿ (SIP) ಹೂಡಿಕೆಗಳ ಮೌಲ್ಯ ಕಡಿಮೆಯಾಗುತ್ತದೆ.

ಈ ಯುದ್ಧದಿಂದ ತೈಲ ಬೆಲೆ ಹೆಚ್ಚಾದರೆ ಭಾರತದ ಮುಂದಿನ ದಾರಿ ?

ಉಕ್ರೇನ್ ಯುದ್ಧದ ನಂತರ ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ನೀಡುತ್ತಿದೆ. 2026ರ ಆರಂಭದ ವೇಳೆಗೆ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಮುಂದುವರಿದಿದೆ. ಇದನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವುದರಿಂದ ಭಾರತಕ್ಕೆ ವಾರ್ಷಿಕ ಸುಮಾರು 9 ರಿಂದ 12 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ. ಇದು ದೇಶೀಯ ಬೆಲೆಗಳು ಗಗನಕ್ಕೇರದಂತೆ ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ: ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ

ಎಥನಾಲ್ ಬ್ಲೆಂಡಿಂಗ್:

E20 ಗುರಿ: ಕೇಂದ್ರ ಸರ್ಕಾರವು ಏಪ್ರಿಲ್ 1, 2026 ರಿಂದ ದೇಶಾದ್ಯಂತ ಪೆಟ್ರೋಲ್‌ನಲ್ಲಿ 20% ಎಥನಾಲ್ (E20) ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಿದೆ.

ರೈತರಿಗೆ ಲಾಭ: ಕಬ್ಬು, ಮೆಕ್ಕೆಜೋಳ ಮತ್ತು ಹಾಳಾದ ಧಾನ್ಯಗಳಿಂದ ಎಥನಾಲ್ ಉತ್ಪಾದಿಸಲಾಗುತ್ತದೆ. ಇದು ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡುತ್ತಿದೆ.

ವಿದೇಶಿ ವಿನಿಮಯ ಉಳಿತಾಯ: ಎಥನಾಲ್ ಮಿಶ್ರಣದಿಂದಾಗಿ ಭಾರತ ಈವರೆಗೆ ಸುಮಾರು 1.40 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *