ಡೇವಿಡ್ ಡಿಸೋಜಾ, ಬಂಧಿತರುImage Credit source: tv9 kannada
ಉಡುಪಿ, ಆಗಸ್ಟ್ 08: ಕರಾವಳಿ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಒಂದು ವಾರದ ಅಂತರದಲ್ಲಿ ಎರಡು ಶೂಟೌಟ್ (Shootout) ನಡೆದಿದೆ. ನಿನ್ನೆ ಉಡುಪಿಯಲ್ಲಿ (udupi) ಹಾಡಹಗಲೇ ನಡು ರಸ್ತೆಯಲ್ಲಿ ಊರಿನ ಜನಪ್ರಿಯ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ. ಅದು ಬೇರೆ ಯಾರೂ ಅಲ್ಲ, ಅದೇ ಗ್ರಾಮದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ನಟೋರಿಯಸ್ ವ್ಯಕ್ತಿತ್ವದ ಡೇವಿಡ್ ಡಿಸೋಜ. ಈತನ ಕೊಲೆಯ ಕಥೆ ಎಷ್ಟು ರೋಚಕವಾಗಿದೆಯೋ ಆರೋಪಿಗಳ ಪತ್ತೆಯೂ ಅಷ್ಟೇ ಸಿನಿಮೀಯವಾಗಿದೆ. ಕಂಡಕಂಡವರಿಗೆ ಪಿಸ್ತೂಲ್ ತೋರಿಸಿ ಬೆದರಿಸುತ್ತಿದ್ದವ, ಆನೆ ಗುಂಡೇಟಿಗೆ ಬಲಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಆ ದಿನ ನಡೆದದ್ದೇನು?
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ, ಜನನಿಬಿಡ ಮತ್ತು ನಿರಂತರ ಚಟುವಟಿಕೆಯ ಪೇಟೆ. ಜಿಲ್ಲೆಯ ಇಂಡಸ್ಟ್ರಿಯಲ್ ಹಬ್, ಪಡುಬಿದ್ರೆಯಿಂದ ಸ್ವಲ್ಪವೇ ದೂರದಲ್ಲಿರುವ ಗ್ರಾಮ. ಪಡುಬಿದ್ರೆ ಪೇಟೆಯಲ್ಲಿ ಡೇವಿಡ್ ಡಿಸೋಜಾ ತನ್ನ ಕಚೇರಿ ಹೊಂದಿದ್ದ. ಅದು ತುಂಬಾ ಚಟುವಟಿಕೆಯ ಹೊತ್ತು, ಮಧ್ಯಾಹ್ನ 3:45ರ ವೇಳೆಗೆ, ಶಾಲೆ ಬಿಟ್ಟು ಮಕ್ಕಳು ಮನೆಗಳಿಗೆ ತೆರಳುವ ಸಮಯ. ಅಂಗಡಿ ಮುಂಗಟ್ಟುಗಳಲ್ಲಿ ಜನವೋಜನ. ಪಕ್ಕದಲ್ಲಿರುವ ಚರ್ಚ್ ಆವರಣವಂತೂ ತುಂಬಿ ತುಳುಕುವ ಹೊತ್ತು, ಅದೇ ವೇಳೆಗೆ ಅಲ್ಲಿ ಟೈಯರ್ ಸ್ಪೋಟಗೊಂಡಂತೆ ಶಬ್ದ ಕೇಳಿದೆ. ಅತ್ತ ತಿರುಗಿ ನೋಡಿದರೆ, ಅದೇ ಊರಿನಲ್ಲಿ ರಾಜನಂತೆ ಮೆರೆದಾಡಿದ ಡೇವಿಡ್ ಡಿಸೋಜಾ, ಚರ್ಚ್ ಗೇಟ್ ಆವರಣದಲ್ಲಿ ಶವವಾಗಿ ಬಿದ್ದಿದ್ದ.
ಒಂದೇ ಗುಂಡೇಟಿಗೆ ಬಲಿ
ಡೇವಿಡ್ ಡಿಸೋಜಗೆ ಗುಂಡು ಹೊಡೆದ ರೀತಿ ಸಿನಿಮಾ ದೃಶ್ಯದ ಪಡಿ ಅಚ್ಚಿನಂತಿತ್ತು. ಚರ್ಚ್ ಗೇಟ್ನ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದೆ. ಡೇವಿಡ್ ಡಿಸೋಜ ತನ್ನ ಕಚೇರಿಯಿಂದ ಹೊರ ಬರುತ್ತಾನೆ. ಆತನ ಜೊತೆಗೆ ಸಹಾಯಕ ಕೂಡ ಇರುತ್ತಾನೆ. ಹೊಚ್ಚ ಹೊಸ ಬಿಳಿ ಬಣ್ಣದ ಥಾರ್ ಕಾರು ಹತ್ತಬೇಕೆನ್ನುವಷ್ಟರಲ್ಲಿ ಹಿಂಬಾಲಿಸಿ ಕೊಂಡು ಬಂದ ದುಷ್ಕರ್ಮಿ ಕಣ್ಣಲ್ಲಿ ಕಣ್ಣಿಟ್ಟು ಗುಂಡು ಹೊಡೆದಿದ್ದಾನೆ. ಮೊದಲ ಗುಂಡು ನೇರ ಹಣೆಗೆ, ಒಂದೇ ಏಟಿಗೆ ಡೇವಿಡ್ ಡಿಸೋಜ ಕುಸಿದು ಬಿದ್ದಿದ್ದಾನೆ. ಬಿದ್ದವನ ಮೇಲೆ ಮತ್ತೆರಡು ಗುಂಡು ಹಾರಿಸಲಾಗಿದೆ. ಒಟ್ಟು ಐದು ಗುಂಡುಗಳಲ್ಲಿ ಮೂರು ಮಿಸ್ ಫೈರ್ ಆದರೆ, ಎರಡು ಡೇವಿಡ್ನ ಜೀವ ಪಡೆದಿದೆ.
ಇದನ್ನೂ ಓದಿ: ಉಡುಪಿಯಲ್ಲಿ ಮತ್ತೊಂದು ಶೂಟೌಟ್; ಗುಂಡಿಕ್ಕಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ
ಸುತ್ತಮುತ್ತ ಸಂಚರಿಸುತ್ತಿದ್ದ ಜನ ಅಂಗಡಿ ಮಂಗಟುಗಳಲ್ಲಿ ನಿಂತಿದ್ದ ಗ್ರಾಹಕರು ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳು, ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಜೊತೆಗಿದ್ದ ಸಹಾಯಕ ಕಿರುಚಾಡಿಗಾದ ಆತನಿಗೂ ಗನ್ ತೋರಿಸಿ ಬೆದರಿಸಿದ್ದಾರೆ. ಬಳಿಕ ಮೊದಲೇ ಕಾಯುತ್ತಿದ್ದ ಇನ್ನೊಬ್ಬ ದುಷ್ಕರ್ಮಿ ಜೊತೆ ಬೈಕ್ ಏರಿ ಪರಾರಿಯಾಗಿದ್ದಾನೆ. ಇವರಿಬ್ಬರ ಈ ಕೃತ್ಯಕ್ಕೆ ಮೂರನೇ ವ್ಯಕ್ತಿ ಒಬ್ಬ ಪರೋಕ್ಷವಾಗಿ ಸಾಥ್ ನೀಡಿದ್ದಾನೆ.
ಆಸ್ಪತ್ರೆಗೆ ಕಾಂಗ್ರೆಸ್ ನಾಯಕರು ದೌಡು
ಘಟನೆ ನಡೆದ ತಕ್ಷಣ, ಅಲ್ಲಿದ್ದವರು ತಮ್ಮ ಗ್ರಾಮದ ಮಾಜಿ ಅಧ್ಯಕ್ಷನ ಜೀವ ಉಳಿಸಲು ಧಾವಿಸಿ ಬಂದಿದ್ದಾರೆ. ತಕ್ಷಣವೇ ಆತನನ್ನು ಸ್ಥಳಿಯ ಶಿರ್ವ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಗುಂಡೇಟಿನಿಂದ ಸತ್ತಿರಬಹುದು ಎಂದು ಭಾವಿಸಿದರು ಕೂಡ ಜೀವ ಉಳಿಸುವ ಕೊನೆಯ ಪ್ರಯತ್ನವಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೂ ಕೊಂಡೊಯ್ಯದಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಡೇವಿಡ್ ಕೊನೆ ಉಸಿರೆಳೆದಿದ್ದ. ಶಿರ್ವ ನಿವಾಸಿಗಳಾಗಿರುವ ಆತನ ಪತ್ನಿ ಮಕ್ಕಳು ಆಸ್ಪತ್ರೆಗೆ ಧಾವಿಸಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರೆಲ್ಲರೂ ಆಸ್ಪತ್ರೆಗೆ ಬಂದಿದ್ದಾರೆ. ಮಾಜಿ ಸಚಿವ ಮತ್ತು ಅದೇ ಮುದರಂಗಡಿ ಗ್ರಾಮ ಇರುವ ಕಾಪು ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ವಿನಯಕುಮಾರ ಸೊರಕೆ ಕುಟುಂಬದ ಜೊತೆಗಿದ್ದು ಆಸ್ಪತ್ರೆಯ ಉಸ್ತುವಾರಿಗಳನ್ನು ನೋಡಿಕೊಂಡರು. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬಳಿಕ ಇದೊಂದು ಗಂಭೀರ ಪ್ರಕರಣವಾದ ಕಾರಣ ಶವವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಡೇವಿಡ್ ಡಿಸೋಜ ಯಾರು?
ಡೇವಿಡ್ ಡಿಸೋಜ ಒಬ್ಬ ಸಕ್ರಿಯ ರಾಜಕಾರಣಿ. ಕಾಪು ತಾಲೂಕಿನ ಗ್ರಾಮಾಂತರ ಕಾಂಗ್ರೆಸ್ನಲ್ಲಿ ಪದಾಧಿಕಾರಿ. ಮುದರಂಗಡಿ ಪಂಚಾಯತ್ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಾಗ ಅಧ್ಯಕ್ಷ. ಅಪಾರ ಸಂಪತ್ತು ಹೊಂದಿದ್ದ ಈತ, ಪಕ್ಷದ ಚಟುವಟಿಕೆಗಳಿಗೆ ನಿರಂತರ ಸಂಪನ್ಮೂಲ ಒದಗಿಸುತ್ತಿದ್ದ ಪ್ರಭಾವಿ ನಾಯಕ. ಕ್ರಿಶ್ಚಿಯನ್ ಸಮುದಾಯದಲ್ಲಿ ಮುಂಚೂಣಿಯಲಿದ್ದ ಕಾರಣ, ಸಮುದಾಯದ ಜನರ ರಾಜಕೀಯ ಧ್ವನಿಯಾಗಿಯೂ ಡೇವಿಡ್ ಗುರುತಿಸಿಕೊಂಡಿದ್ದ. ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದಾಗ, ಅಪಾರ ಪ್ರಮಾಣದ ಸಂಪನ್ಮೂಲವನ್ನು ವಿನಿಯೋಗಿಸಿ ಗ್ರಾಮದ ಅಭಿವೃದ್ಧಿಗೆ ಟೊಂಕ ಕಟ್ಟಿ ಕೆಲಸ ಮಾಡಿದ್ದ. ಇಷ್ಟೆಲ್ಲಾ ಇದ್ದರೂ, ಡೇವಿಡ್ ಡಿಸೋಜಾ ಓರ್ವ ನಟೋರಿಯಸ್ ಕ್ರಿಮಿನಲ್ನಂತೆ ಸತ್ತಿರುವುದಕ್ಕೂ ಬಲವಾದ ಕಾರಣಗಳಿವೆ.
ಡೇವಿಡ್ ಡಿಸೋಜ ಮೇಲಿತ್ತು 21 ಕೇಸುಗಳು
ಡೇವಿಡ್ ಡಿಸೋಜಾ ಓರ್ವ ಅಭಿವೃದ್ಧಿ ಪರ ರಾಜಕಾರಣಿ. ಆದರೆ ಕ್ರಿಮಿನಲ್ ಹಿನ್ನೆಲೆಯಿಂದ ಹೆಸರು ಕೆಡಿಸಿಕೊಂಡಿದ್ದ. ವಿವಾದಗಳಿಗೂ ಈತನಿಗೂ ಅವಿನಾಭಾವ ಸಂಬಂಧ. ಪಡುಬಿದ್ರೆ ಭಾಗದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದ್ದ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟದಲ್ಲಿ ಡೇವಿಡ್ ಪರಿಸರ ಪ್ರಿಯರೊಂದಿಗೆ ಗುರುತಿಸಿಕೊಂಡಿದ್ದ. ನಂತರ ಇದೇ ಹೋರಾಟಗಾರರಿಗೆ ಮಣ್ಣುಮುಕ್ಕಿಸಿ, ನಾಗಾರ್ಜುನ ಕಂಪನಿಯೊಂದಿಗೆ ಸೇರಿಕೊಂಡು ಗುತ್ತಿಗೆ ಪಡೆದಿದ್ದ. ಸಾಯುವವರೆಗೂ ಈ ಉಷ್ಣ ವಿದ್ಯುತ್ ಸ್ಥಾವರದ ಪ್ರಧಾನ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸಾವಿರಾರು ಕೋಟಿ ರೂ ವ್ಯವಹಾರ ನಡೆಸುತ್ತಿದ್ದ. ಇದೇ ವ್ಯವಹಾರ ಡೇವಿಡ್ಗೆ ಮುಳುವಾಗಿದ್ದು, ಕ್ರಿಮಿನಲ್ನಂತೆ ಬೀದಿ ಹೆಣವಾಗಿದ್ದಾನೆ.
ಇಷ್ಟಕ್ಕೂ ಡೇವಿಡ್ನ ಚರಿತ್ರೆ ಖತರ್ನಾಕ್ ಆಗಿದೆ. ಪರಿಸರ ಹೋರಾಟ ಮಾಡುತ್ತಿದ್ದ ಸ್ಥಳೀಯ ಬಡಪಾಯಿ ಗ್ರಾಮಸ್ಥರನ್ನು, ಭೂ ವತ್ತುವರಿ ಮಾಡುವಾಗ ಗನ್ ತೋರಿಸಿ ಬೆದರಿಕೆ ಹಾಕುತ್ತಿದ್ದ. ಸಮಾಜದಲ್ಲಿ ಅತ್ಯಂತ ಹಿಂದುಳಿದ ಕೆಲ ಸಮುದಾಯದ ವ್ಯಕ್ತಿಗಳನ್ನು, ಬಲಿಪಶು ಮಾಡಿಕೊಂಡು ತನ್ನೊಂದಿಗೆ ಇರಿಸಿ ತಾನು ನಡೆಸುವ ದೋ ನಂಬರ್ ಕೆಲಸಗಳಿಗೆ ಗುರಾಣಿಯಾಗಿ ಬಳಸುತ್ತಿದ್ದ. ಇದೇ ಕಾರಣಕ್ಕೆ ಮೈತುಂಬ ಕೇಸು ಹಾಕಿಸಿಕೊಂಡಿದ್ದ. ಈತನ ಮೇಲಿದ್ದ 21 ಕೇಸುಗಳ ಪೈಕಿ, 16 ಪ್ರಕರಣ ಪಡುಬಿದ್ರೆ ಠಾಣೆ ಒಂದರಲ್ಲಿ ದಾಖಲಾಗಿದೆ. ಇವೆಲ್ಲವೂ ಹೋರಾಟದ ಕಾಲದ ಬೆದರಿಕೆ ಪ್ರಕರಣಗಳು. ಐದು ಪ್ರಕರಣ ಈತ ವಾಸ ಮಾಡುತ್ತಿದ್ದ ಶಿರ್ವ ಠಾಣ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಪೈಕಿ ಆ ಒಂದು ಪ್ರಕರಣದಲ್ಲಿ ಈತ ಆರೋಪಿಯಾಗಿ ಜೈಲು ಸೇರಿದ್ದು ಇದೆ.
ಚರ್ಚಿನ ಧರ್ಮ ಗುರುಗೆ ಬೆದರಿಕೆ: ಆತ್ಮಹತ್ಯೆಗೆ ಪ್ರಚೋದನೆ
2019 ಅಕ್ಟೋಬರ್ 11ರಂದು ಮಂಚಕಲ್ ಭಾಗದ ಜನಪ್ರಿಯ ಧರ್ಮ ಗುರು ಮಹೇಶ್ ಡಿಸೋಜ ತಾನು ಕೆಲಸ ಮಾಡುತ್ತಿದ್ದ ಚರ್ಚಿನ ಡಾನ್ ಬಾಸ್ಕೋ ಕಾಲೇಜಿನ, ಪ್ರಾಂಶುಪಾಲರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಧರ್ಮ ಗುರು ಒಬ್ಬರ ಈ ಆಕಸ್ಮಿಕ ಸಾವು ಇಡೀ ಊರಿನ ಕ್ರಿಶ್ಚಿಯನ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಜನಾನುರಾಗಿ ಆಗಿದ್ದ ಧರ್ಮಗುರುಗಳ ಸಾವಿಗೆ ಡೇವಿಡ್ ಡಿಸೋಜಾ ಕಾರಣ ಅನ್ನೋದು ನಂತರ ಬಯಲಾಯಿತು. ಅವರು ಸಾಯುವ ಕೆಲ ಸಮಯದ ಮುಂಚೆ, ಇದೇ ಡೇವಿಡ್ ಡಿಸೋಜ ಅವರಿಗೆ ಬೆದರಿಕೆ ಹಾಕಿದ್ದ. ತನ್ನ ಪತ್ನಿಗೆ ನೀವು ನಿರಂತರ ಕರೆ ಮಾಡುತ್ತೀರಿ ಎಂದು ಬೆದರಿಸಿದ್ದ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದೆ ಎಂದು ಪ್ರಕರಣ ದಾಖಲಿಸಿ, ಡೇವಿಡ್ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಬಳಿಕ ಡೇವಿಡ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.
ಶೋಕಿಲಾಲ ಡೇವಿಡ್: ದುಬಾರಿ ಮನೆ, ಊರೆಲ್ಲಾ ಹೆಸರು ಮಾಡುವ ಚಟ
ದಶಕಗಳ ಹಿಂದೆ ಡೇವಿಡ್ಗೆ ಲಾಟರಿ ಹೊಡೆದು ಲಕ್ಷಾಂತರ ರೂ. ಬಂದಿತ್ತು ಎಂದು ಜನ ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದರು. ತನ್ನ ಸಂಪಾದನೆಯ ಶೋಕಿ ತೋರಿಸಿಕೊಳ್ಳುವ ಚಟವು ಅವನಿಗಿತ್ತು. ಲಾಟರಿ ಹಣ ಬಂದಿರೋದು ವದಂತಿಯಾದರೂ ಅವನ ಬಳಿ ಸಂಪತ್ತಿಗೆ ಕೊರತೆ ಇರಲಿಲ್ಲ. ವಿದೇಶದಲ್ಲಿ ದುಡಿದು ಸಾಕಷ್ಟು ಸಂಪಾದಿಸಿ ಊರಿಗೆ ಬಂದು, ಈ ಭಾಗದಲ್ಲಿ ಶೋಭಾಜಿ ಮಾಡಿಕೊಂಡಿದ್ದ. ತನ್ನನ್ನು ಪ್ರಿನ್ಸ್ ಎಂದು ಕರೆಸಿಕೊಳ್ಳಲು ಹವಣಿಸುತ್ತಿದ್ದ. ಇದೇ ಹೆಸರಲ್ಲಿ ಬ್ರಾಂಡ್ ಕ್ರಿಯೇಟ್ ಮಾಡಿಕೊಂಡಿದ್ದ. ಪ್ರಿನ್ಸ್ ಹೆಸರಲ್ಲಿ ಬ್ರಾಂಡ್ ಕ್ರಿಯೇಟ್ ಮಾಡುವ ಹಠಕ್ಕೆ ಬಿದ್ದಿದ್ದ. ಪ್ರಿನ್ಸ್ ಹೆಸರಿನಲ್ಲಿ ಬಂಗಲೆ ಕಟ್ಟಿಸಿದ್ದ. ಬಸ್ ಉದ್ಯಮ ನಡೆಸಿದ್ದ. ಊರಿನ ಯಾವುದೇ ಆಟೋ ಚಾಲಕರು ಪ್ರಿನ್ಸ್ ಹೆಸರು ಹಾಕಿಕೊಂಡರೆ ಅವರಿಗೆ ಹಣ ಕೊಟ್ಟು ಶೋಕಿ ಮಾಡುತ್ತಿದ್ದ. ಒಟ್ಟಾರೆ ರಾಜಕಾರಣಿಯಾಗಿ ಜನಾನುರಾಗಿ ಆಗಿದ್ದ ಡೇವಿಡ್, ತನ್ನ ದುರ್ಬುದ್ಧಿಯಿಂದ ಅಷ್ಟೇ ಪ್ರಮಾಣದಲ್ಲಿ ಹೆಸರು ಕೆಡಿಸಿಕೊಂಡಿದ್ದ.
ಅದಾನಿ ಉಷ್ಣ ವಿದ್ಯುತ್ ಸ್ಥಾವರ ಸೇರಿದ ಬಳಿಕ ಕುಲಾಯಿಸಿದ ಅದೃಷ್ಟ
ಊರಿನ ಹೋರಾಟಗಾರರನ್ನೇ ದಾಳ ಮಾಡಿಕೊಂಡು, ಬಳಿಕ ಅವರಿಗೆ ತಿರುಗಿಬಿದ್ದು, ಜನವಿರೋಧಿ ಕಂಪನಿಗೆ ಬೇಕಾದ ಭೂಮಿ ಒದಗಿಸಿ ಕೊಡುವಲ್ಲಿ ಡೇವಿಡ್ ಪ್ರಮುಖ ಪಾತ್ರವಹಿಸಿದ್ದ. ತನ್ನ ಗ್ರಾಮದ ಎಕರೆಗಟ್ಟಲೆ ಭೂಮಿಯನ್ನು ಜನವಿರೋಧಿ ಕಂಪನಿಗೆ ಮೂರು ಕಾಸಿನ ಹಣಕ್ಕೆ ಮಾರಾಟ ಮಾಡಿಸುವಲ್ಲಿ ಡೇವಿಡ್ ಪಾತ್ರ ಇತ್ತು. ಇದೇ ಕಾರಣಕ್ಕೆ ಪರಿಸರಪ್ರಿಯರು, ಹೋರಾಟಗಾರರು ಆತನಿಗೆ ಹಿಡಿಶಾಪ ಹಾಕಿದ್ದರು.
ಬೀದಿ ಹೆಣವಾಗಿದ್ದು ಏಕೆ?
ಇಷ್ಟಕ್ಕೂ ಸ್ವತಃ ರೌಡಿ ಅಂತಿದ್ದ, ಡೇವಿಡ್ ಪುಡಿ ರೌಡಿಗಳಿಂದ ಹತ್ಯೆಯಾಗಿದ್ದನ್ನು ಊರಿನವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎದುರು ಸಿಕ್ಕವರಿಗೆಲ್ಲ ಪಿಸ್ತೂಲ್ ತೋರಿಸಿ ಬೆದರಿಸುತ್ತಿದ್ದವ, ತಾನೇ ಗುಂಡೇಟಿಗೆ ಬಲಿಯಾಗಿರುವುದರ ಹಿಂದೆ ರೋಚಕ ಕಥೆ ಇದೆ. ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಕಂಪನಿಯ ಗುತ್ತಿಗೆದಾರನಾಗಿ ಸೇರಿಕೊಂಡ ನಂತರ ಈತನ ವಹಿವಾಟುಗಳು ಬಲು ಜೋರಾಗಿ ನಡೆದಿತ್ತು. ಕಂಪನಿಯ ಸಿಎಸ್ಆರ್ ಫಂಡ್ ವಿನಿಯೋಗ ಸೇರಿದಂತೆ ಹಲವು ಮಹತ್ವದ ಚಟುವಟಿಕೆಗಳಲ್ಲಿ ಈತ ಭಾಗಿಯಾಗಿದ್ದ. ಕಂಪನಿ ಪ್ರಮುಖರಿಗೆ ಸ್ಥಳೀಯ ಪ್ರಭಾವಿ ವ್ಯಕ್ತಿಯಾಗಿ ಸಹಕರಿಸುತ್ತಿದ್ದ. ಸಾವಿರಾರು ಕೋಟಿಯ ಕಾಮಗಾರಿಗಳು ಕಂಪನಿ ಆವರಣದಲ್ಲಿ ನಡೆಯುತ್ತಿದ್ದು. ಅದನ್ನು ವಹಿಸಿಕೊಂಡು ಕೇರಳ ಸಂಪತ್ತು ಮಾಡಿಕೊಂಡಿದ್ದ.
ಹಣದ ವಿಚಾರಕ್ಕೆ ನಡೆಯಿತಾ ಶೂಟೌಟ್?
ಉತ್ತರ ಭಾರತದ ಉದ್ಯಮಿಯೊಬ್ಬರಿಗೆ, ಯುಪಿಸಿಎಲ್ ಕಂಪನಿಯ ಬಹುದೊಡ್ಡ ಗುತ್ತಿಗೆ ಸಿಕ್ಕಿತ್ತು. ಹತ್ತಾರು ಕೋಟಿ ಮೌಲ್ಯದ ಈ ಗುತ್ತಿಗೆ ಕೆಲಸವನ್ನು ಡೇವಿಡ್ ಅವರಿಂದ ವಹಿಸಿಕೊಂಡಿದ್ದ. ಕಾಮಗಾರಿ ಪೂರ್ಣಗೊಳಿಸಿದ್ದ. ಕೆಲಸ ಪೂರ್ಣಗೊಂಡರು ಆ ಉದ್ಯಮಿ ತಕರಾರು ತೆಗೆದು ಇವನಿಗೆ ಹಣ ಪಾವತಿಸಿರಲಿಲ್ಲ. ಇದು ಕೋಟ್ಯಂತರ ರೂ ವ್ಯವಹಾರ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಪದೇ ಪದೇ ಗಲಾಟೆ ಕೂಡ ನಡೆದಿತ್ತು. ಇವರಿಬ್ಬರ ನಡುವಿನ ದ್ವೇಷ ತಾರಕಕ್ಕೆ ಹೋಗಿ ಡೇವಿಡ್ ಉದ್ಯಮಿಗೆ ಸಂಬಂಧಿಸಿದ ಎರಡು ಮೂರು ಕೋಟಿ ರೂ ಸ್ವತ್ತುಗಳನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಇರಿಸಿಕೊಂಡಿದ್ದ. ಇದು ಆ ಉದ್ಯಮಿಯನ್ನು ಕೆರಳಿಸಿತ್ತು. ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತು ಎಂದು ಡೇವಿಡ್ ಬೆದರಿಕೆ ಹಾಕಿದ್ದ. ಇದೇ ಬೆದರಿಕೆಗೆ ರಿವೆಂಜ್ ತೀರಿಸಿಕೊಳ್ಳಲು ಆ ಉದ್ಯಮಿ ಸುಪಾರಿ ಕಿಲ್ಲರ್ಗಳನ್ನ ನಿಯೋಜಿಸಿರುವ ಶಂಕೆ ಆಧಾರದಲ್ಲಿ ತನಿಖೆ ಶುರುವಾಗಿದೆ.
ಗುಂಡು ಹೊಡೆದವರು ಯಾರು?
ಇಷ್ಟಕ್ಕೂ ಘಟನೆಯ ಸಿಸಿಟಿವಿ ದೃಶ್ಯ ಗಮನಿಸಿದವರಿಗೆ ಇದು ಸ್ಥಳೀಯರ ಕೃತ್ಯ ಅಲ್ಲ ಅನ್ನೋದು ಮೊದಲೇ ಗೊತ್ತಾಗಿತ್ತು. ಯಾವುದೇ ಮಾಸ್ಕ ಧರಿಸದೆ ರಾಜಾರೋಷವಾಗಿ ಬಂದು ಗುಂಡು ಹೊಡೆದು ಜನರ ಎದುರಲ್ಲೇ ದ್ವಿಚಕ್ರ ವಾಹನದಲ್ಲಿ ಪರಾರಿಯಾದ ರೀತಿ ಅಪ್ಪಟ ಉತ್ತರ ಭಾರತೀಯ ಶೈಲಿಯದ್ದಾಗಿತ್ತು. ಕೊನೆಗೂ ಆರೋಪಿಗಳು ಪತ್ತೆಯಾಗಿದ್ದಾರೆ. ಈ ಕೃತ್ಯದಲ್ಲಿ ನೇರವಾಗಿ ಮೂರು ಜನ ಭಾಗಿಯಾಗಿದ್ದಾರೆ. ಮೂವರು ಆರೋಪಿಗಳು ಬಸ್ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಬೈಂದೂರಿನ ಒತ್ತಿನೆಣೆ ಬಳಿ ಬಸ್ ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಗಳು ಬಸ್ನಿಂದ ಇಳಿದು ಪರಾರಿಯಾಗಲು ಯತ್ನಿಸಿದರು. ಆರೋಪಿಗಳನ್ನು ಬೆನ್ನಟ್ಟಿದ ವೇಳೆ ರಾಜು (42), ಉತ್ತರ ಪ್ರದೇಶದ ಥಾಣಾ ಪಿಲ್ವ ನಿವಾಸಿ, ಕಾಪು ಠಾಣೆಯ ಪಿಎಸ್ಐ ತೇಜಸ್ವಿ ಅವರನ್ನು ದೂಡಿ, ಪಿಸ್ತೂಲ್ನಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲ್ನ್ನೂ ವಶಪಡಿಸಿಕೊಳ್ಳಲಾಗಿದೆ.
ಗುಂಡಿನ ದಾಳಿಯಲ್ಲಿ ಪಿಎಸ್ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉತ್ತರಾಖಂಡದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಅವರನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಹಾಗೂ ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಅವರನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಸುಪಾರಿ ಕೊಟ್ಟದ್ದು ಯಾರು?
ಸುಪಾರಿ ಕೊಟ್ಟವ ನಾಲ್ಕು ತಿಂಗಳ ಮುಂಚೆಯೇ ಅವರನ್ನು ಉಡುಪಿಯಲ್ಲಿ ಬಿಟ್ಟಿದ್ದ. ಮೂವರಿಗೂ ಪರಸ್ಪರ ಭೇಟಿ ಇಲ್ಲ, ಪರಿಚಯ ಇಲ್ಲ. ಎರಡು ದಿನಗಳ ಹಿಂದೆ ಡೇವಿಡ್ನನ್ನು ಕೊಲ್ಲುವ ಟಾಸ್ಕ್ ಕೊಟ್ಟು, ಫೋಟೋ ಕಳುಹಿಸಿದ್ದಾರೆ. ಬಳಿಕ ಮೂವರು ಜೊತೆಯಾಗಿ ಹೊಂಚು ಹಾಕಿ ಕುಳಿತು ಕೊಲೆ ಮಾಡಿದ್ದಾರೆ.
ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಪ್ರಿನ್ಸ್ ಡೇವಿಡ್
ಪ್ರಿನ್ಸ್ ಡೇವಿಡ್ ಕಷ್ಟಗಳಿಗೆ ಸ್ಪಂದಿಸುತ್ತಿದ್ದ. ನಡುರಾತ್ರಿ ಸಹಾಯಕ್ಕೆ ಕರೆದರೂ ಧಾವಿಸಿ ಹೋಗುತ್ತಿದ್ದ ವ್ಯಕ್ತಿ. ಅನೇಕ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡುವುದರ ಜೊತೆಗೆ, ರಿಕ್ಷಾ ಚಾಲಕರಿಗೆ ನಿಲ್ದಾಣ ಕಟ್ಟಿಸಿ ಕೊಡುವುದರ ಜೊತೆಗೆ ಪ್ರತಿಯೊಂದು ಕಷ್ಟ ನಷ್ಟಗಳಲ್ಲಿ ಭಾಗಿಯಾಗುತ್ತಿದ್ದ. ಊರಿನಲ್ಲಿ ಸೌಹಾರ್ದತೆಯ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ. ಊರಿನಲ್ಲಿ ಗಣೇಶ ಚತುರ್ಥಿ ಸಾರ್ವಜನಿಕ ಆಚರಣೆ ಆರಂಭಿಸಿದ್ದೆ ಡೇವಿಡ್.
ಡೇವಿಡ್ ಪತ್ನಿ ಪ್ರಿಯಾ ಡೇವಿಡ್ ಹೇಳಿದ್ದಿಷ್ಟು
‘ಪತಿಯ ಸಾವು ಆಕಸ್ಮಿಕ. ನಮ್ಮ ಬಳಿ ಉದ್ಯಮದ ಯಾವುದೇ ವಿಚಾರ ಹೇಳಿಕೊಂಡಿರಲಿಲ್ಲ. ಪ್ರತಿದಿನ ಅವರ ದಿನಚರಿಯಂತೆ, ಊಟ ಮುಗಿಸಿ ಕಚೇರಿಗೆ ತೆರಳಿದ್ದರು. ದುರ್ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಗೆ ಧಾವಿಸಿ ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪತಿ, ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ಪತಿಗೆ ಗುಂಡು ಹಾರಿಸಿ ರಕ್ತ ಚೆಲ್ಲಿದವರ ರಕ್ತ ಅದೇ ರೀತಿ ಬೀಳಬೇಕು. ಪೊಲೀಸರು ನಡೆಸಿರುವ ಶೀಘ್ರ ಕಾರ್ಯಾಚರಣೆಯಿಂದ ನೆಮ್ಮದಿಯಾಗಿದೆ. ಆರೋಪಿಗಳಿಗೆ ಮತ್ತು ಈ ಸಂಚಿನಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಪತಿ ಉದ್ಯಮಿಯಾಗಿ, ರಾಜಕಾರಣಿಯಾಗಿ ಊರಿನ ಅಭಿವೃದ್ಧಿಗೆ ಅಪಾರ ಶ್ರಮಿಸಿದ್ದಾರೆ. ಅವರ ಸಾವಿನಿಂದ ಆಘಾತವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಶೂಟೌಟ್: ಕಾಂಗ್ರೆಸ್ ಮುಖಂಡನ ಮೇಲೆ ಗುಂಡಿನ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮುದರಂಗಡಿಯಲ್ಲಿ ಪ್ರಿನ್ಸ್ ಅಂದರೆ ರಾಜಕುಮಾರನಂತೆ ಮೆರೆದಾಡಿದ್ದ ಡೇವಿಡ್ ಡಿಸೋಜ, ತನ್ನದೇ ಊರಿನ ಜನರ ನಡುವೆ ಹೆಣವಾಗಿ ಬಿದ್ದಿದ್ದಾನೆ. ಎಷ್ಟೇ ಒಳ್ಳೆ ಕೆಲಸ ಮಾಡಿದರೂ, ದುಷ್ಟತನಕ್ಕೆ ಬೆಲೆ ತೆರಲೇಬೇಕು ಅನ್ನೋದಕ್ಕೆ ಪ್ರಿನ್ಸ್ ಡೇವಿಡ್ ಸಾವು ಉದಾಹರಣೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:35 pm, Sat, 8 August 26
