ಉಡುಪಿ, ಜುಲೈ 10: ಕಳೆದ ಒಂದು ವಾರದಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಗಾಳಿಯಿಂದಾಗಿ ವ್ಯಾಪಕ ಅನಾಹುತ ಸಂಭವಿಸಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬೀಸಿದ ಸುಂಟರಗಾಳಿಗೆ 150ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮಗೊಂಡಿವೆ. ಬೈಂದೂರು ತಾಲೂಕಿನ ಎಡಮಳ್ಳಿ ಮಕ್ಕಿನ ಮನೆ, ಹಕ್ಕಲುಮನೆ ಮತ್ತು ಮಕ್ಕಿಮನೆ ಪ್ರದೇಶಗಳಲ್ಲಿ ಈ ಅವಾಂತರ ಸಂಭವಿಸಿದೆ. ಬೆಳಿಗ್ಗೆ ಬಂದ ಸುಂಟರಗಾಳಿಯು 15 ರಿಂದ 20 ವರ್ಷದ ಫಲಕೊಡುವ ಅಡಿಕೆ ಮರಗಳನ್ನು ಬೇರುಸಮೇತ ಕಿತ್ತುಹಾಕಿದೆ. ಮರಗಳು ಮುರಿದು ಚಲ್ಲಾಪೆಲ್ಲೆಯಾಗಿ ಬಿದ್ದಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಅಡಿಕೆ ಬೆಳೆಗಾರರು ತಮ್ಮ ಜೀವನಾಧಾರವನ್ನೇ ಕಳೆದುಕೊಂಡಿದ್ದು, ಒಂದು ಮರ ಬೆಳೆಯಲು ಸುಮಾರು ಐದರಿಂದ ಹತ್ತು ವರ್ಷ ಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.