ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಗೋಕರ್ಣ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಹಲವೆಡೆ ಸಂಚಾರ ವ್ಯತ್ಯಯ – Kannada News | Heavy Rains in Uttara Kannada: Gokarna Mahabaleshwar Temple Sanctum Flooded, Atmalinga Submerged

ಗೋಕರ್ಣ ಮಹಾಬಲೇಶ್ವರ ದೇಗುಲದ ಆವರಣ ಜಲಾವೃತಗೊಂಡಿರುವುದು ಹಾಗೂ ಗರ್ಭಗುಡಿಗೆ ನೀರು ನುಗ್ಗಿರುವುದುImage Credit source: tv9

ಕಾರವಾರ್, ಜೂನ್ 29: ಕರ್ನಾಟಕದ (Karnataka) ಒಳನಾಡಿನ ಹಲವೆಡೆ ಮಳೆಯಿಲ್ಲದೆ ರೈತರು ಬರಗಾಲದ ಆತಂಕದಲ್ಲಿದ್ದರೆ, ಇತ್ತ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಮುಂಗಾರು ಮಳೆ (Monsoon Rain) ಅಬ್ಬರಿಸುತ್ತಿದೆ. ಕಳೆದ 36 ಗಂಟೆಗಳಿಂದ ಜಿಲ್ಲಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಮಳೆಯ ಪರಿಣಾಮವಾಗಿ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಮಳೆನೀರು ನುಗ್ಗಿದ್ದು, ಪವಿತ್ರ ಆತ್ಮಲಿಂಗ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಭಕ್ತರಿಗೆ ನೀಡಲಾಗುತ್ತಿದ್ದ ಆತ್ಮಲಿಂಗದ ಸ್ಪರ್ಶ ದರ್ಶನವನ್ನು ಭಾನುವಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಪಂಪ್‌ಸೆಟ್ ಮೂಲಕ ನೀರು ಹೊರಕ್ಕೆ

ದೇವಸ್ಥಾನದ ಒಳಗೆ ನೀರು ನುಗ್ಗಿದ್ದರಿಂದ ಪ್ರತಿದಿನ ಮಧ್ಯಾಹ್ನ 12:30 ಕ್ಕೆ ಜರುಗುತ್ತಿದ್ದ ಮಹಾಪೂಜೆಯನ್ನು ನೆರವೇರಿಸಲು ಅರ್ಚಕರು ತೀವ್ರ ಅಡಚಣೆ ಎದುರಿಸಬೇಕಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ದೇವಸ್ಥಾನದ ಸಿಬ್ಬಂದಿ, ಗರ್ಭಗುಡಿಯ ಹೊರಗಿನ ನೀರು ಒಳಗೆ ಬರದಂತೆ ತಡೆಗೋಡೆ ನಿರ್ಮಿಸಿಕೊಂಡು, ಪಂಪ್‌ಸೆಟ್ ಮೂಲಕ ಗರ್ಭಗುಡಿಯಲ್ಲಿದ್ದ ನೀರನ್ನು ಹೊರಹಾಕಲು ಹರಸಾಹಸ ಪಟ್ಟರು. ಇತ್ತ ಗೋಕರ್ಣದ ಪ್ರಮುಖ ರಸ್ತೆ ಹಾಗೂ ಬೀದಿಗಳು ಸಂಪೂರ್ಣವಾಗಿ ಕೆರೆಯಂತಾಗಿದ್ದು, ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಮತ್ತು ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸಿದರು.

ಹೆದ್ದಾರಿಗಳು ಬಂದ್: ಮುಳುಗಡೆಯ ಭೀತಿಯಲ್ಲಿ ಅಂಗಡಿ-ಮುಂಗಟ್ಟುಗಳು

ಮಳೆಯ ಆರ್ಭಟ ಕೇವಲ ಗೋಕರ್ಣಕ್ಕೆ ಮಾತ್ರ ಸೀಮಿತವಾಗಿರದೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನಾಲ್ಕೂ ತಾಲೂಕುಗಳಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ಕುಮಟಾ – ಸಿದ್ದಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಕುಮಟಾ ತಾಲೂಕಿನ ವಾಲಗಳಿ ಬಳಿ ರಸ್ತೆಯ ಮೇಲೆ ಹಳ್ಳದಂತೆ ನೀರು ಹರಿದಿದ್ದರಿಂದ ದ್ವಿಚಕ್ರ ವಾಹನ ಸವಾರರು ಮುಂದೆ ಸಾಗಲಾರದೆ ರಸ್ತೆ ಬದಿಯಲ್ಲೇ ನಿಲ್ಲಬೇಕಾಯಿತು. ಬೃಹತ್ ವಾಹನಗಳು ಪ್ರಾಣದ ಹಂಗು ತೊರೆದು ನೀರಿನಲ್ಲೇ ಪರದಾಡುತ್ತಾ ಚಲಿಸಿದವು. ಇನ್ನು ಹೆದ್ದಾರಿ ಬದಿಯ ತಗ್ಗು ಪ್ರದೇಶದ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿತ್ತಾದರೂ, ಅದೃಷ್ಟವಶಾತ್ ಮಳೆಯ ತೀವ್ರತೆ ಕೊಂಚ ಕಡಿಮೆಯಾದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು; ಪಶ್ಚಿಮ ಘಟ್ಟಗಳ ನಿಸರ್ಗ ವೈಭವಕ್ಕೆ ಪ್ರವಾಸಿಗರು ಫುಲ್ ಫಿದಾ

ಒಟ್ಟಾರೆಯಾಗಿ ಕಳೆದ 36 ಗಂಟೆಗಳ ಮಳೆ ಜಿಲ್ಲೆಯಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಕೈಮೀರಬಹುದು ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದ್ದು, ಜಿಲ್ಲಾಡಳಿತವು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *