ಓಂಪ್ರಕಾಶ್ ರಾಜೇ ನಿಂಬಾಳ್ಕರ್Image Credit source: tv9 kannada
ಮುಂಬೈ, ಜೂನ್ 21: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (Shiv Sena) ಪಕ್ಷಕ್ಕೆ ಮತ್ತೆ ಕೈಕೊಡಲು ಸಂಸದರು ಸಜ್ಜಾಗಿದ್ದಾರೆ. ಉದ್ಧವ್ ಬಣದ 9 ಸಂಸದರ ಪೈಕಿ 6 ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ. ಅವರಲ್ಲಿ ಧಾರಾಶಿವ್ ಕ್ಷೇತ್ರದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ (Omprakash Raje Nimbalkar) ಕೂಡ ಒಬ್ಬರು. ಇದೀಗ ಇವರು ಸಿಎಂ ಏಕನಾಥ್ ಶಿಂಧೆ ನಾಯಕತ್ವದಲ್ಲಿ ಮುನ್ನಡೆಯಲಿದ್ದೇವೆ ಎಂದು ತಮ್ಮ ರಾಜಕೀಯ ನಿಲುವನ್ನು ಅಧಿಕೃತವಾಗಿ ಘೊಷಿಸಿದ್ದಾರೆ. ಆ ಮೂಲಕ ಆಪರೇಷನ್ ಟೈಗರ್ ಯಶಸ್ವಿಯಾಗಿದೆ.
ಮುಖ್ಯಾಂಶಗಳು
- ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಪರಿಣಾಮ
- ಶಿಂಧೆ ಬಣಕ್ಕೆ ಓಂಪ್ರಕಾಶ್ ನಿಂಬಾಳ್ಕರ್ ಅಧಿಕೃತ ಸೇರ್ಪಡೆ
- ಅಧಿಕಾರವಿಲ್ಲದೆ ಜನಸೇವೆ ಅಸಾಧ್ಯ ನಿಂಬಾಳ್ಕರ್
ಶನಿವಾರವಷ್ಟೇ ತಾವು ಪಕ್ಷ ಸೇರ್ಪಡೆ ಕುರಿತು ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದ ನಿಂಬಾಳ್ಕರ್, ತಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಬಳಿಕ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದ್ದರು. ಇದು ಶಿವಸೇನೆಯ ಶಿಂಧೆ ಬಣದಲ್ಲಿ ತಳಮಳ ಸೃಷ್ಟಿಸಿತ್ತು. ಆದರೆ, ಇದೀಗ ಓಂರಾಜೇ ನಿಂಬಾಳ್ಕರ್ ತಮ್ಮ ಅಧಿಕೃತ ನಿಲುವು ಸ್ಪಷ್ಟಪಡಿಸಿದ್ದಾರೆ.
ಓಂರಾಜೇ ನಿಂಬಾಳ್ಕರ್ ಹೇಳಿದ್ದಿಷ್ಟು
ತಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಓಂರಾಜೇ ನಿಂಬಾಳ್ಕರ್, ‘ನನ್ನ ಮನವಿಗೆ ಓಗೊಟ್ಟು ಲೋಕಸಭಾ ಕ್ಷೇತ್ರದ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎಲ್ಲರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಪಡೆದಿದ್ದೇನೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್ಗೆ ದೂರು
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ತೀವ್ರ ಹೋರಾಟ ನಡೆಸಿದರೂ, ಧಾರಾಶಿವ್ನ ಯಾವುದೇ ಪಂಚಾಯತ್ ಸಮಿತಿ ಅಥವಾ ನಗರಸಭೆಯಲ್ಲಿ ನಮಗೆ ಯಶಸ್ಸು ಸಿಗಲಿಲ್ಲ. ನಾವೆಲ್ಲರೂ 24 ಗಂಟೆ ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ಅಧಿಕಾರವಿಲ್ಲದ ಕಾರಣ ಸೋಲು ಅನುಭವಿಸಬೇಕಾಯಿತು. ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಅಧಿಕಾರದ ಬಲ ಬೇಕಾಗಿದೆ. ಆದ್ದರಿಂದ, ಕಾರ್ಯಕರ್ತರ ಒಮ್ಮತದ ತೀರ್ಮಾನದಂತೆ ನಾವು ಶಿವಸೇನೆ ಸೇರಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಾಯಕತ್ವದಲ್ಲಿ ಮುನ್ನಡೆಯಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
