ಉಮರ್ ಖಾಲಿದ್ ಪುಸ್ತಕ ಸಂಬಂಧಿತ ಕಾರ್ಯಕ್ರಮಕ್ಕೆ ಬಿಜೆಪಿ ವಿರೋಧ: ಅನುಮತಿ ಕೊಟ್ಟರೆ ಉಗ್ರ ಹೋರಾಟದ ಎಚ್ಚರಿಕೆ – Kannada News | BJP Opposes Bengaluru Umar Khalid Book Event, Warns of Massive Protests

ನಗರ ಪೊಲೀಸ್ ಆಯುಕ್ತರಿಗೆ BJP ಮನವಿ Image Credit source: Tv9 Kannada

ಬೆಂಗಳೂರು, ಏಪ್ರಿಲ್​​ 27: ದೊಮ್ಮಲೂರಿನ ಬಿಐಸಿಯಲ್ಲಿ ನಾಳೆ ನಿಗದಿಯಾಗಿರುವ ‘ಉಮರ್ ಖಾಲಿದ್ ಆ್ಯಂಡ್​ ಹಿಸ್ ವರ್ಲ್ಡ್’ ಪುಸ್ತಕದ ಕುರಿತ ಕಾರ್ಯಕ್ರಮಕ್ಕೆ ಅನುಮತಿ ಸಂಬಂಧ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ನಟ ಪ್ರಕಾಶ್ ರಾಜ್, ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಹಲವು ಮುಖಂಡರು ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ಜೆಎನ್​ಯು ಮಾಜಿ ವಿದ್ಯಾರ್ಥಿ ನಾಯಕನಾಗಿದ್ದ ಉಮರ್ ಖಾಲಿದ್, 2020ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ತಿಹಾರ್ ಜೈಲಿನಲ್ಲಿದ್ದಾನೆ ಎಂದು ಬಿಜೆಪಿ ದೂರಿದೆ.

ಬಿಜೆಪಿ ಮನವಿಯಲ್ಲಿ ಏನಿದೆ?

ಉಮರ್​​ ಖಾಲಿದ್ ಪ್ರಪಂಚ ಎಂಬ ವೇದಿಕೆಯು ಭಯೋತ್ಪಾದನೆ ಕಾಯಿದೆ ಅಡಿ ಬಂಧಿತನಾದ ವ್ಯಕ್ತಿಗೆ ಬೆಂಬಲ ಸೂಚಿಸಲು ಬೆಂಗಳೂರಿನಲ್ಲಿ ವಿಚಾರ ಸಂಕೀರ್ಣ ಏರ್ಪಡಿಸಿದೆ. ದೇಶದಲ್ಲೆಡೆ ಕೇಂದ್ರ ಸರ್ಕಾರ ನಕ್ಸಲರನ್ನು ಬಗ್ಗು ಬಡಿದಿದೆ. ಆದರೆ ನಗರ ನಕ್ಸಲರು ಮಾತ್ರ ಇನ್ನೂ ಸಕ್ರಿಯವಾಗಿದ್ದು ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಉಮರ್ ಖಾಲೀದ್ ಅತ್ಯಂತ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಕಳೆದ ಮೂರು ವರ್ಷದಿಂದ ಇವನಿಗೆ ನ್ಯಾಯಲಯಗಳು ಜಾಮೀನು ನೀಡಲು ನಿರಾಕರಿಸಿರುವುದು ಇವನ ಅಪರಾಧಿ ಚಟುವಟಿಕೆಗೆ ಸಾಕ್ಷಿ. ಇವನನ್ನು ವೈಭವೀಕರಿಸುವುದು ಅಪರಾಧಿಗಳಿಗೆ ಉತ್ತೇಜನ ಕೊಡುವ ದುಷ್ಕೃತ್ಯವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ನಮ್ಮ ನಗರದಲ್ಲಿ ನಡೆಯುತ್ತಿರುವುದು ಆಘಾತಕಾರಿ ಸಂಗತಿ. ಈಗಾಗಲೇ ನಗರದ ಗೋಡೆಗಳ ಮೇಲೆ ಉಮರ್ ಖಾಲಿದ್ ಬೆಂಬಲಿಸಿ ಗೋಡೆ ಬರಹಗಳನ್ನು ಬರೆಯುತ್ತಿರುವುದು ಇವರ ಜಾಲ ಹರಡುತ್ತಿದ್ದಾರೆ. ನಗರದ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಇವರ ವಿಚಾರ ಸಂಕಿರಣ ನಡೆಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು. ಈ ಕಾರ್ಯಕ್ರಮ ನಡೆದರೆ ಅಲ್ಲಿ ಉಂಟಾಗುವ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾದರೆ ಬಿಜೆಪಿಯು ಹೊಣೆಯಾಗುವುದಿಲ್ಲ. ನಗರದ ಹಿತದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸುತ್ತಿರೋದಾಗಿ ನಗರ ಪೊಲೀಸ್ ಆಯುಕ್ತರಿಗೆ ನೀಡಿದ ಮನವಿಯಲ್ಲಿ ಬಿಜೆಪಿ ತಿಳಿಸಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವೈರ್ ಕಟ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಚ್ಚರಿಯ ಕಾರಣ ಬಹಿರಂಗ

ಪ್ರತಿಭಟನೆಯ ಎಚ್ಚರಿಕೆ

ಉಮರ್ ಖಾಲಿದ್ ಆ್ಯಂಡ್ ಹಿಸ್ ವರ್ಲ್ಡ್ ಪುಸ್ತಕದ ಕುರಿತ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಟಿವಿ9ಗೆ ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ. ಉಮರ್ ಖಾಲೀದ್ 2020ರ ದೆಹಲಿ ದಂಗೆಯ ಪ್ರಮುಖ ಆರೋಪಿ. ಇಂದಿನವರೆಗೂ ಉಮರ್ ಖಾಲೀದ್​ಗೆ ಕೋರ್ಟ್ ಜಾಮೀನು ಕೊಟ್ಟಿಲ್ಲ. ಆತ ದೇಶದ್ರೋಹಿ ಆಗಿದ್ದು ಅವನ ಕುರಿತಾದ ಪುಸ್ತಕ ಬಿಡುಗಡೆ ಮಾಡ್ತಿದ್ದಾರೆ. ಶಾಂತಿಯುತ ಸ್ಥಳವಾಗಿರುವ ಬೆಂಗಳೂರಿನಲ್ಲಿ ಇದಕ್ಕೆ ಅವಕಾಶ ಕೊಡಬಾರದು. ಬೇರೆ ಯಾವ ರಾಜ್ಯದಲ್ಲೂ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಲ್ಲ. ಇಲ್ಲಿ ಕಾಂಗ್ರೆಸ್​​ ಸರ್ಕಾರ ಇರುವುದರಿಂದ ಅನುಮತಿ ಸಿಕ್ಕಿದೆ. ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲದಿಂದಲೇ ಈ ಕಾರ್ಯಕ್ರಮ ನಡೀತಿದೆ. ಹೀಗಾಗಿ ಅನುಮತಿ ಕೊಟ್ಟರೆ ನಾವು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಪಿ.ಸಿ.ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *