ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ – Kannada News | Sharad Pawar, Supriya Sule Meet PM Modi Amid NCP NDA Merger Rumors and Delimitation Talks

ನವದೆಹಲಿ, ಜುಲೈ 22: ಎನ್​ಸಿಪಿ ಎನ್​ಡಿಎ ಜತೆ ವಿಲೀನವಾಗಲಿದೆ ಎನ್ನುವ ಅಂತೆ ಕಂತೆ ಹರಿದಾಡುತ್ತಿರುವ ಹೊತ್ತಿನಲ್ಲೇ ಶರದ್ ಪವಾರ್(Sharad Pawar) ಹಾಗೂ ಸುಪ್ರಿಯಾ ಸುಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಸಂಸತ್ತಿನಲ್ಲಿ ನೀಟ್ ಅಕ್ರಮ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ.

ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಹಾಗೂ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಸಂಸತ್ ಭವನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಸಭೆಯ ವೇಳೆ ಪ್ರಧಾನಿ ಮೋದಿ ಹಾಗೂ ಶರದ್ ಪವಾರ್ ಅತ್ಯಂತ ಆತ್ಮೀಯವಾಗಿ ನಗುಮುಖದಿಂದ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

ಭೇಟಿಗೆ ಕಾರಣವೇನು?

ಕ್ಷೇತ್ರ ಪುನರ್ವಿಂಗಡಣೆ ಮಸೂದೆ

ಕೇಂದ್ರ ಸರ್ಕಾರವು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ’ಯನ್ನು ತರಲು ಯೋಜಿಸುತ್ತಿದ್ದು, ಇದನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3rd) ಭಾರಿ ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ ಶರದ್ ಪವಾರ್ ಬಣದ 8 ಸಂಸದರು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್‌ಸಿಪಿಯಲ್ಲಿ ಮತ್ತೊಂದು ಒಡಕು

ಶೇ. 50 ರಷ್ಟು ಸೀಟು ಹೆಚ್ಚಳದ ಷರತ್ತು

ಮಸೂದೆಯಲ್ಲಿ ಶೇಕಡಾ 50 ರಷ್ಟು ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸರ್ಕಾರ ಲಿಖಿತ ಭರವಸೆ ನೀಡಿದರೆ ಬೆಂಬಲ ನೀಡುವ ಸುಳಿವನ್ನು ಎನ್‌ಸಿಪಿ ನೀಡಿದೆ. ನಿಮ್ಮ ನಿಲುವನ್ನು ಕಾಗದದ ಮೇಲೆ ಸ್ಪಷ್ಟಪಡಿಸಿ, ನಂತರ ಚರ್ಚಿಸೋಣ ಎಂದು ಸುಪ್ರಿಯಾ ಸುಳೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಮಹಾರಾಷ್ಟ್ರ ರಾಜಕೀಯ ಮತ್ತು ಎನ್‌ಸಿಪಿ ಪುನರ್ ಏಕೀಕರಣದ ವದಂತಿ

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಶರದ್ ಪವಾರ್ ಬಣದ ನಡುವೆ ಮತ್ತೆ ಒಂದಾಗುವ ಚರ್ಚೆಗಳು ಮಹಾರಾಷ್ಟ್ರದಲ್ಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಶರದ್ ಪವಾರ್ ಅವರ ಬಣ ಎನ್‌ಡಿಎ (NDA) ಮೈತ್ರಿಕೂಟ ಸೇರಲಿದೆ ಎಂಬ ವದಂತಿಗಳೂ ಇವೆ.

ಶರದ್ ಪವಾರ್ ಅಥವಾ ಅವರ ನಾಯಕರನ್ನು ವೈಯಕ್ತಿಕವಾಗಿ ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿಗೆ ಆಸಕ್ತಿಯಿಲ್ಲ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಅವರ ಎರಡೂ ಎನ್‌ಸಿಪಿ ಬಣಗಳು ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಸಂಪೂರ್ಣವಾಗಿ ಒಂದಾದರೆ ಮಾತ್ರ ಎನ್‌ಡಿಎ ಜೊತೆಗಿನ ನಿಕಟ ಮೈತ್ರಿ ಬಗ್ಗೆ ಪರಿಗಣಿಸಲಾಗುವುದು.

ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ಹೋರಾಟ ನಡೆಸುತ್ತಿರುವ ಮಧ್ಯೆಯೇ, ವಿಪಕ್ಷಗಳ ಪ್ರಮುಖ ರೂವಾರಿಯಾದ ಶರದ್ ಪವಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವುದು ಮುಂಬರುವ ದಿನಗಳಲ್ಲಿ ಭಾರಿ ರಾಜಕೀಯ ಬದಲಾವಣೆಯ ಮುನ್ಸೂಚನೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *