ಎರಡು ಟ್ರಕ್​ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು – Kannada News | Indonesia Road Accident: 13 Dead as Pickup Van Crushed Between Two Trucks

ಜಕಾರ್ತಾ, ಜುಲೈ 13: ಮದುವೆ(Marriage) ಮನೆಯ ಸಂಭ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಅತಿಥಿಗಳ ಪಾಲಿಗೆ ಹೆದ್ದಾರಿಯೇ ಮೃತ್ಯುಕೂಪವಾಗಿ ಮಾರ್ಪಟ್ಟಿತ್ತು. ಇಂಡೋನೇಷ್ಯಾದ ಜಾವಾ ದ್ವೀಪದ ಜನನಿಬಿಡ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಜನರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಎರಡು ಬೃಹತ್ ಟ್ರಕ್‌ಗಳ ನಡುವೆ ಮದುವೆ ಅತಿಥಿಗಳಿದ್ದ ಪಿಕಪ್ ವ್ಯಾನ್ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ  ಐವರನ್ನು ಬಿಟ್ಟು ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.

ಯು-ಟರ್ನ್ ತೆಗೆದುಕೊಳ್ಳಲು ಹೋದಾಗ ಸಂಭವಿಸಿದ ಅವಘಡ
ಇಂದ್ರಮಾಯು ರೀಜೆನ್ಸಿಯ ಕಿಯಾಜರನ್ ಕುಲೋನ್ ಗ್ರಾಮದ ಬಳಿಯ ಉತ್ತರ ಕರಾವಳಿ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ. ಮೃತಪಟ್ಟವರೆಲ್ಲರೂ ನೆರೆಯ ಪರೇನ್ ಗ್ರಾಮದಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಹಳ್ಳಿಗೆ ಹಿಂತಿರುಗುತ್ತಿದ್ದರು.

ಸ್ಥಳೀಯ ಸಂಚಾರ ಪೊಲೀಸ್ ಮುಖ್ಯಸ್ಥ ಉಂಡಾಂಗ್ ಸಯಾರಿಫ್ ಹಿದಾಯತ್ ನೀಡಿರುವ ಮಾಹಿತಿ ಪ್ರಕಾರ, ಅತಿಥಿಗಳು ತೆರೆದ ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಹೆದ್ದಾರಿಯ ಮಧ್ಯದಲ್ಲಿದ್ದ ಕಟಿಂಗ್ ಬಳಿ ವಾಹನವನ್ನು ಯು-ಟರ್ನ್ ಮಾಡಲು ಚಾಲಕ ಗಾಡಿಯನ್ನು ನಿಧಾನಗೊಳಿಸಿದ್ದಾನೆ. ಇದೇ ವೇಳೆ ಅದೇ ದಿಕ್ಕಿನಲ್ಲಿ ಅತಿ ವೇಗವಾಗಿ ಬಂದ ದೊಡ್ಡ ವಿಂಗ್-ಬಾಕ್ಸ್ ಲಾರಿಯೊಂದು ಪಿಕಪ್ ವ್ಯಾನ್‌ನ ಹಿಂಭಾಗಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಮೊದಲ ಲಾರಿ ಹೊಡೆದ ಡಿಕ್ಕಿಯ ರಭಸಕ್ಕೆ ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ದಾಟುತ್ತಾ ವಿರುದ್ಧ ದಿಕ್ಕಿನ ಲೇನ್‌ಗೆ ತೂರಿ ಹೋಗಿದೆ. ದುರಾದೃಷ್ಟವೆಂದರೆ ಅದೇ ಕ್ಷಣದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿ ಪಿಕಪ್ ವ್ಯಾನ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ಮತ್ತಷ್ಟು ಓದಿ: ದುಬೈ ರಸ್ತೆ ಅಪಘಾತ: ಸಂತ್ರಸ್ತ ಕುಟುಂಬಗಳ ಕಣ್ಣೀರು ಒರೆಸಿದ ಉದ್ಯಮಿ ಡಾ. ಶಮ್ಶೀರ್, 2.6 ಕೋಟಿ ರೂ. ಪರಿಹಾರ

ಎರಡು ಬದಿಗಳಿಂದ ಬಿದ್ದ ಭೀಕರ ಹೊಡೆತಕ್ಕೆ ಪಿಕಪ್ ವ್ಯಾನ್‌ನ ಹಿಂಭಾಗದಲ್ಲಿದ್ದ ಒಂದು ಡಜನ್‌ಗೂ ಹೆಚ್ಚು ಜನರು ಗಾಳಿಯಲ್ಲಿ ತೂರಿ ಬಂದು ಹೆದ್ದಾರಿಯ ಕಾಂಕ್ರೀಟ್ ರಸ್ತೆಯ ಮೇಲೆ ಬಿದ್ದಿದ್ದಾರೆ. ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದ್ದರಿಂದ 13 ಜನರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಡೋನೇಷ್ಯಾದಲ್ಲಿ ಹೆಚ್ಚುತ್ತಿದೆ ಅಪಘಾತ ಪ್ರಮಾಣ
ಆಗ್ನೇಯ ಏಷ್ಯಾ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಇಂತಹ ಭೀಕರ ರಸ್ತೆ ಅಪಘಾತಗಳು ತೀರಾ ಸಾಮಾನ್ಯ ಎಂಬಂತಾಗಿದೆ.

ತೆರೆದ ವಾಹನಗಳ ಬಳಕೆ: ಹಳ್ಳಿಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಸರಕು ಸಾಗಿಸುವ ತೆರೆದ ಪಿಕಪ್ ವ್ಯಾನ್ ಅಥವಾ ಟ್ರಕ್‌ಗಳಲ್ಲೇ ಸಾಮೂಹಿಕವಾಗಿ ಪ್ರಯಾಣಿಸುತ್ತಾರೆ. ಇಂತಹ ವಾಹನಗಳಲ್ಲಿ ಯಾವುದೇ ಸುರಕ್ಷತಾ ಬೆಲ್ಟ್ ಅಥವಾ ಏರ್‌ಬ್ಯಾಗ್ ಇರುವುದಿಲ್ಲ.
ಅತಿಯಾದ ವೇಗ, ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಳ್ಳುವುದು ಮತ್ತು ರಸ್ತೆಗಳ ಕಳಪೆ ವಿನ್ಯಾಸದಿಂದಾಗಿ ಇಂಡೋನೇಷ್ಯಾದ ಹೆದ್ದಾರಿಗಳಲ್ಲಿ ಪ್ರತಿ ವರ್ಷ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸದ್ಯ ಪೊಲೀಸರು ಎರಡೂ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದಿದ್ದು, ಘಟನೆಯ ತನಿಖೆ ಮುಂದುವರೆಸಿದ್ದಾರೆ. ಮದುವೆಯ ಸಡಗರದಲ್ಲಿದ್ದ ಇಡೀ ಹಳ್ಳಿ ಈಗ ಸೂತಕದ ಮನೆಯಾಗಿ ಮಾರ್ಪಟ್ಟಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *