ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿImage Credit source: Tv9 Kannada
ಬೆಂಗಳೂರು, ಜುಲೈ 03: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಸಂಬಂಧ ನಿನ್ನೆಯಷ್ಟೇ (ಜುಲೈ 02) ವಿಡಿಯೋ ಸಾಕ್ಷಿ ಸಮೇತ ಗಂಭೀರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಯಶವಂತಪುರ ಕ್ಷೇತ್ರಕ್ಕೆ ಸಂಬಂಧಿಸಿದ ಎಸ್ಐಆರ್ ಪ್ರಕ್ರಿಯೆಯ ಅಕ್ರಮಗಳ ಕುರಿತು ವಿಡಿಯೋ ರಿಲೀಸ್ ಮಾಡಿದ್ದು, ಶಾಸಕ ಎಸ್.ಟಿ.ಸೋಮಶೇಖರ್ ಫೋಟೋ ಇರುವ ಪುಸ್ತಕಗಳನ್ನು ಬಿಎಲ್ಒಗಳು ಹಿಡಿದಿರೋದು ಇದರಲ್ಲಿ ಕಂಡುಬಂದಿದೆ.
‘ಮತದಾರರ ಹುಂಡಿಯೇ ಲೂಟಿ’
ಸರ್ಕಾರದ ಗುಲಾಮರಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಪಿಸಿಸಿ ಹೊಸ ಅಧ್ಯಕ್ಷರು ರಾಮಮಂದಿರ ಬಗ್ಗೆ ಮಾತನಾಡುತ್ತಾರೆ. ಆದರೆ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಸರ್ಕಾರ ಹೊರಟಿದೆ. ಆ ಮೂಲಕ ಸಂವಿಧಾನವನ್ನ ಬುಡಮೇಲು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನನಗೆ ರಾಜ್ಯದ ಹಲವು ಭಾಗಗಳಿಂದ ಕರೆ ಬರುತ್ತಿದ್ದು, ಕೇಂದ್ರದ ಚುನಾವಣಾ ಆಯುಕ್ತರ ಭೇಟಿಗೆ ಸಮಯ ಕೇಳುತ್ತೇನೆ. ರಾಜ್ಯ ಚುನಾವಣಾ ಆಯುಕ್ತರನ್ನ ಇಂದು ಭೇಟಿ ಮಾಡುತ್ತೇವೆ. ರಾಜ್ಯ ಸರ್ಕಾರ ಯಾವ ಸಾಧನೆ ಮಾಡಲು ಹೊರಟಿದೆ ಎಂದವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ತನಿಖೆಗೆ ಆಗ್ರಹ; ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಬಾರಿ ಶೋಭಾ ಕರಂದ್ಲಾಜೆ ಪತ್ರ
‘ಕಚೇರಿಯಲ್ಲಿ ಕುಳಿತು ಹೇಳಿದ್ರೆ ಆಗುತ್ತಾ?’
ಇನ್ನು ಭಾರತೀಯ ಚುನಾವಣಾ ಆಯೋಗದ (ECI) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಖಡಕ್ ಆದೇಶದ ಬಗ್ಗೆಯೂ ಪ್ರತಕ್ರಿಯಿಸಿರುವ ಹೆಚ್ಡಿಕೆ, ಅನ್ಬುಕುಮಾರ್ ಕಚೇರಿಯಲ್ಲಿ ಕುಳಿತು ಹೇಳಿದ್ರೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾವು ನೀಡಿರುವ ದೂರಿನ ಬಗ್ಗೆ ಏನು ಕ್ರಮ ಆಗಿದೆ? ಬೆಳಿಗ್ಗೆಯಿಂದ ಆಯುಕ್ತರು ಕಚೇರಿಗೇ ಬಂದಿಲ್ಲ ಎಂದವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:43 pm, Fri, 3 July 26
