
ನವದೆಹಲಿ, (ಮಾರ್ಚ್ 23): ದೆಹಲಿಯಲ್ಲಿ ನಡೆಯುತ್ತಿರುವ ಟಿವಿ9 ವಾರ್ಷಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೆ’ ಸಮಿಟ್ನಲ್ಲಿ (‘TV9 What India Thinks Today Summit- 2026’) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇನ್ನು ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಇದರೊಂದಿಗೆ ಪ್ರಧಾನಿ ಮೋದಿ ಟಿವಿ9ನ ನಾಲ್ಕು ಶೃಂಗಸಭೆಗಳ ಪೈಕಿ ಸತತ ಮೂರನೇ ಬಾರಿಗೆ ಟಿವಿ9 ಶೃಂಗಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುರುವುದು ವಿಶೇಷವಾಗಿದೆ.
ಇದೇ ವೇಳೆ ಮಾತನಾಡಿದ ಬರುಣ್ ದಾಸ್, ನಾವು ಇಂದು ಅತ್ಯಂತ ಅಸ್ಥಿರವಾದ ದಿನಗಳಲ್ಲಿ ಬದುಕುತ್ತಿದ್ದೇವೆ. ಪಶ್ಚಿಮ ಏಷ್ಯಾದ ಯುದ್ಧಕ್ಕೂ ಮೊದಲು ಸುಂಕದ ಸಮರವು ವಿಶ್ವದ ಆರ್ಥಿಕತೆಯನ್ನು ನಡುಗಿಸಿತ್ತು. ಸೇನಾ ಬಲದ ಯುದ್ಧ ಒಂದಾದರೆ, ಆರ್ಥಿಕ ಯುದ್ಧ ಮತ್ತೊಂದು. ಜಗತ್ತಿನ 830 ಕೋಟಿ ಜನರು ಬಾಧಿತರಾಗಿದ್ದಾರೆ. ಈ ಜಾಗತಿಕ ಅಸ್ಥಿರತೆ ನಡುವೆ ಭಾರತ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲ, ಜಾಗತಿಕ ವ್ಯವಸ್ಥೆ ಸ್ಥಿರಗೊಳಿಸಲು ನೆರವಾಗಿದೆ ಎಂದರು.