ಸಿನಿಮಾ (Cinema) ನಟ-ನಟಿಯರು ಅನಗತ್ಯ ಖರ್ಚುಗಳನ್ನು ಮಾಡುತ್ತಿರುವ ಬಗ್ಗೆ ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ವಿಶೇಷವಾಗಿ ಬಾಲಿವುಡ್ ನಟ-ನಟಿಯರು ತಮಗಾಗಿ ಹೆಚ್ಚುವರಿ ವ್ಯಾನಿಟಿ ವ್ಯಾನ್ ತರಿಸಿಕೊಳ್ಳುತ್ತಾರೆ. ತಮ್ಮೊಟ್ಟಿಗೆ 20-30 ಜನರ ತಂಡವನ್ನು ಕರೆದುಕೊಂಡು ಬರುತ್ತಾರೆ. ಅನಗತ್ಯ ಡಿಮ್ಯಾಂಡುಗಳನ್ನು ಮಾಡುತ್ತಾರೆ ಎಂದೆಲ್ಲ ನಿರ್ಮಾಪಕರು ಆರೋಪಗಳನ್ನು ಮಾಡಿದ್ದರು. ಇದೀಗ ಬಾಲಿವುಡ್ ನಟ ಮತ್ತು ನಿರ್ಮಾಪಕ ಆಗಿರುವ ತುಷಾರ್ ಕಪೂರ್ ಇದೇ ವಿಷಯವಾಗಿ ಮಾತನಾಡಿದ್ದು, ಸಿನಿಮಾದ ಹೆಸರು ಹೇಳಿ, ದುಂದು ವೆಚ್ಚವನ್ನು ಟೀಕೆ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಸೇರಿ ಬಾಲಿವುಡ್ನ ಹಲವು ಸ್ಟಾರ್ ನಟಿಯರು ಒಟ್ಟಿಗೆ ನಟಿಸಿರುವ ಹಾಸ್ಯ ಪ್ರಧಾನ ಸಿನಿಮಾ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಒಟ್ಟೊಟ್ಟಿಗೆ 50 ವ್ಯಾನಿಟಿ ವ್ಯಾನುಗಳನ್ನು ನಟ-ನಟಿಯರಿಗಾಗಿ ತರಿಸಲಾಗುತ್ತಂತೆ. ಇದರ ಬಗ್ಗೆ ನಟ ತುಷಾರ್ ಕಪೂರ್ ಮಾತನಾಡಿದ್ದು, ಇದು ಅನಗತ್ಯ ದುಂದು ವೆಚ್ಚ ಎಂದು ಟೀಕೆ ಮಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ತುಷಾರ್, ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಸೆಟ್ಗಳಲ್ಲಿ ಪ್ರತಿದಿನ ತಗಲುತ್ತಿದ್ದ ವೆಚ್ಚದ ಬಗ್ಗೆ ತಮಗೆನಿಸಿದ್ದನ್ನು ಹಂಚಿಕೊಂಡಿದ್ದಾರೆ. ‘ನಾನು ಸೆಟ್ಗೆ ತಲುಪಿದಾಗ, ನಮ್ಮ ವ್ಯಾನಿಟಿ ವ್ಯಾನ್ ಪಾರ್ಕ್ ಮಾಡಲು ಐದು ನಿಮಿಷ ಹಿಡಿಯುತ್ತಿತ್ತು, ಏಕೆಂದರೆ ನಾವು ವ್ಯಾನ್ಗಳ ದೊಡ್ಡ ಸಾಲಿನ ಮೂಲಕ ಹೋಗಬೇಕಾಗುತ್ತಿತ್ತು. ಇಷ್ಟು ವ್ಯಾನ್ಗಳು ಮತ್ತು ಎಲ್ಲರ ಸಿಬ್ಬಂದಿಗೆ ಪ್ರತಿದಿನದ ವೆಚ್ಚ ಎಷ್ಟು ಎಂದು ನಾನು ನೋಡುತ್ತಾ ಆಶ್ಚರ್ಯಪಡುತ್ತಿದ್ದೆ. ಇಷ್ಟು ಜನ ನಟರನ್ನು ಕರೆದುಕೊಂಡು ಬರುವುದು ನಿಜಕ್ಕೂ ಅಗತ್ಯವೇ?’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್ಬೀರ್ ಕಪೂರ್ ಮಾಹಿತಿ
ನಿರ್ದೇಶಕ ಅಹ್ಮದ್ ಅವರ ದೃಷ್ಟಿಕೋನವು ಉತ್ತಮವಾಗಿದೆ, ಅವರು ಭಾರತದಲ್ಲಿ ಹಿಂದೆಂದೂ ಪ್ರಯತ್ನಿಸದ ಹೊಸ ಪ್ರಕಾರವನ್ನು ತರುತ್ತಿದ್ದಾರೆ, ಆದರೆ ಇಷ್ಟು ಜನ ನಟರನ್ನು ಕರೆದುಕೊಂಡು ಬಂದು ಇಷ್ಟು ಖರ್ಚು ಮಾಡುವುದು ನಿಜಕ್ಕೂ ಸಮರ್ಥನೀಯವೇ ಎಂದು ನಾನು ಯೋಚಿಸುತ್ತಿದ್ದೆ. ಎಲ್ಲ ಶಾಟ್ ಗೂ ಎಲ್ಲ ನಟರೂ ಬೇಕು ಎಂದು ಅಹ್ಮದ್ ಪಟ್ಟುಹಿಡಿದಿದ್ದರು. ‘ವೆಲ್ಕಮ್’ ಚಿತ್ರದ ಚಿತ್ರೀಕರಣದಲ್ಲಿ ಒಂದು ವರ್ಷದ ಅಂತರವಿತ್ತು. ಚಿತ್ರವು ಪುನರಾರಂಭಗೊಂಡಾಗ, ಸೆಟ್ನಲ್ಲಿ ಲಭ್ಯವಿರುವ ನಟರೊಂದಿಗೆ ಮಾತ್ರ ಚಿತ್ರೀಕರಣ ನಡೆಸಲು ಅವರು ಎಂದಿಗೂ ಯೋಚಿಸಲಿಲ್ಲ. ಅವರು ತಮ್ಮ ಮಾತಿಗೆ ಕಟ್ಟುಬಿದ್ದು ಚಿತ್ರವನ್ನು ಮುಗಿಸಿದರು” ಎಂದು ಅವರು ಹೇಳಿದರು.
ನಟರ ಹೆಚ್ಚುತ್ತಿರುವ ಸಿಬ್ಬಂದಿ ವೆಚ್ಚದ ನಡುವೆ ಸಮತೋಲನವಿರಬೇಕು ಎಂದು ತುಷಾರ್ ಹೇಳಿದ್ದು, ‘ಖರ್ಚಿನಲ್ಲಿ ಸಮತೋಲನ ಇರಬೇಕು. ಹೇರ್ ಸ್ಟೈಲಿಸ್ಟ್, ಮೇಕಪ್ ಮ್ಯಾನ್ ಬೇಕು. ನಿಮಗೆ ಕೆಲವು ಸೌಲಭ್ಯಗಳು ಬೇಕಾಗುತ್ತವೆ. ಒಬ್ಬ ಪ್ರಮುಖ ನಟ ಅಥವಾ ನಟಿ ಅನುಭವಿಸುವ ಒತ್ತಡವನ್ನು ಗಮನಿಸಿದರೆ, ನಿಮ್ಮ ಅತ್ಯುತ್ತಮವಾದದನ್ನು ಹೊರತರಲು ನಿಮಗೆ ಸ್ವಲ್ಪ ಸೌಕರ್ಯ, ಸ್ಥಳ ಮತ್ತು ಐಷಾರಾಮಿ ಅನುಭವ ಬೇಕಾಗುತ್ತದೆ. ಇದು ದೃಶ್ಯ ಮಾಧ್ಯಮವಾಗಿದೆ, ಆದ್ದರಿಂದ ಆ ಸೌಂದರ್ಯವನ್ನು ಹೊರತರಲು ನಿಮಗೆ ಸ್ವಲ್ಪ ಖರ್ಚು ಬೇಕು. ಅದು ಪರವಾಗಿಲ್ಲ. ಆದರೆ ಅದಕ್ಕೊಂದು ಮಿತಿಯಿದೆ. ಅದು ಅಹಂಕಾರ ಅಥವಾ ನಾರ್ಸಿಸಿಸಂ ಆಗಿ ಬದಲಾಗುವ ಹಂತಕ್ಕೆ ವ್ಯಾನಿಟಿಯ ಮೂಲಭೂತ ಅವಶ್ಯಕತೆಯನ್ನು ಮೀರಿ ಹೋಗಬಾರದು. ನಿಮ್ಮ ಅಹಂ ತೃಪ್ತಿಪಡಿಸಲು ಇದನ್ನು ಮಾಡಬಾರದು. ಅದು ಒಳ್ಳೆಯದಲ್ಲ’ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
