ಕನಕಗಿರಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾವಳಿ: ನೆಮ್ಮದಿ ಕಳೆದುಕೊಂಡು ಬೀದಿಗಿಳಿದು ಕಣ್ಣೀರು ಹಾಕಿದ ಮಹಿಳೆಯರು! – Kannada News | Koppal: Women Protest in Kanakagiri Against Rampant Illegal Liquor Sales in Residential Areas

ನೆಮ್ಮದಿ ಕಳೆದುಕೊಂಡು ಬೀದಿಗಿಳಿದು ಕಣ್ಣೀರು ಹಾಕಿದ ಮಹಿಳೆಯರು

ಕೊಪ್ಪಳ, ಜುಲೈ 15: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಅಕ್ರಮ ಮದ್ಯ ಮಾರಾಟ ಜಾಲ ಹೆಮ್ಮರವಾಗಿ ಬೆಳೆದಿದ್ದು, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬದುಕು ನಡೆಸುವುದೇ ದುಸ್ತರವಾಗಿದೆ. ಪಟ್ಟಣದ 16 ನೇ ವಾರ್ಡ್‌ನಲ್ಲಿ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು, ಹೋಟೆಲ್‌ಗಳು ಹಾಗೂ ಮನೆಗಳೇ ಈಗ ಮದ್ಯದ ಅಡ್ಡೆಗಳಾಗಿ ಮಾರ್ಪಟ್ಟಿವೆ. ಇದರಿಂದ ರೋಸಿಹೋದ ಸ್ಥಳೀಯ ಮಹಿಳೆಯರು ಇಂದು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಗಲ್ಲಿ ಗಲ್ಲಿಗಳಲ್ಲೂ ರಾಜಾರೋಷವಾಗಿ ದಂಧೆ

ಕನಕಗಿರಿಯಲ್ಲಿ ಲೈಸೆನ್ಸ್ ಇಲ್ಲದಿದ್ದರೂ ಪ್ರತಿಯೊಂದು ಗಲ್ಲಿಗಳಲ್ಲಿ, ಸಣ್ಣ ಪುಟ್ಟ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ದಂಧೆಯ ದೃಶ್ಯಗಳನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಸಾರ್ವಜನಿಕವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾನೂನಿನ ಯಾವುದೇ ಭಯವಿಲ್ಲದೆ ಸಣ್ಣ ಮಕ್ಕಳ ಕೈಯಲ್ಲೂ ಮದ್ಯ ಸಿಗುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಗಳಲ್ಲಿ ಊಟಕ್ಕೂ ಗತಿಯಿಲ್ಲ

ಸ್ಥಳೀಯ ಮಹಿಳೆಯರು ಕಣ್ಣೀರು ಹಾಕುತ್ತಾ, ನಮ್ಮ ವಾರ್ಡ್‌ನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಮನೆ ಮನೆಗಳಲ್ಲೂ ಮದ್ಯ ಸಿಗುತ್ತಿರುವುದರಿಂದ ಪುರುಷರು ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಸುರಿಯುತ್ತಿದ್ದಾರೆ. ಇತ್ತ ಮನೆಯಲ್ಲಿ ಊಟಕ್ಕೂ ಗತಿಯಿಲ್ಲದಂತಾಗಿದೆ. ಸಂಜೆ ವೇಳೆಗೆ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಈ ಅಕ್ರಮ ಮಾರಾಟವನ್ನು ಬಂದ್ ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪವಿತ್ರ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಶಿಲ್ಪಾ, ಪದಮ್ಮ, ಸಿದ್ದಲಿಂಗಮ್ಮ, ಅಯ್ಯಮ್ಮ, ಗೌರಮ್ಮ, ಚಾಂದಿನಿಬೇಗಂ, ಸಾವಿತ್ರಮ್ಮ, ಶಿವಮ್ಮ, ಲಕ್ಷ್ಮೀ, ದೂಡ್ಡಲಕ್ಷ್ಮೀ, ದುರಗಮ್ಮ, ರೇಣುಕಾ, ದೀಪಮ್ಮ, ಹುಲಿಗೆಮ್ಮ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಕ್ರಮ ಮದ್ಯದ ಅಡ್ಡೆಗಳ ಮೇಲೆ ತಕ್ಷಣ ದಾಳಿ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಾರ್ಡ್‌ಗಳಲ್ಲಿ ಸೂಕ್ತ ಪೊಲೀಸ್ ಗಸ್ತು ವ್ಯವಸ್ಥೆ ಜಾರಿಗೊಳಿಸಬೇಕು ಎನ್ನುವುದು ಇವರ ಮುಖ್ಯ ಬೇಡಿಕೆಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಅಕ್ರಮ ದಂಧೆಗೆ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *