ಕನ್ನಡ ಚಿತ್ರರಂಗಕ್ಕೆ ಮರಳಿ ಬಂದ ‘ಯಾರೇ ನೀನು ಚೆಲುವೆ’ ಹೀರೋಯಿನ್ ಸಂಗೀತಾ – Kannada News | Sangita Madhavan Nair comeback to Kannada Film Industry

ನಟಿ ಸಂಗೀತಾ ಮಾಧವನ್ (Sangita Madhavan) ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಅವರು ಕನ್ನಡ ಸಿನಿಮಾಗಳಲ್ಲಿ ನಟಿಸದೇ ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಆಗಿದೆ. 1998ರಲ್ಲಿ ಬಿಡುಗಡೆ ಆಗಿದ್ದ ‘ಯಾರೆ ನೀನು ಚೆಲುವೆ’ (Yaare Neenu Cheluve) ಸಿನಿಮಾದಲ್ಲಿ ಸಂಗೀತಾ ಮಾಧವನ್ ಅವರು ಹೀರೋಯಿನ್ ಆಗಿ ನಟಿಸಿದ್ದರು. 2000ನೇ ಇಸವಿಯಲ್ಲಿ ರಿಲೀಸ್ ಆದ ‘ಯಾರೆ ನೀ ಅಭಿಮಾನಿ’ ಸಿನಿಮಾದಲ್ಲಿ ಕೂಡ ಅವರು ಅಭಿನಯಿಸಿದ್ದರು. ಆ ಬಳಿಕ ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದರು.

ಈಗ ಸಂಗೀತಾ ಮಾಧವನ್ ಅವರು ಮತ್ತೆ ಕನ್ನಡ ಚಿತ್ರರಂಗದ ಕಡೆಗೆ ಮುಖ ಮಾಡಿದ್ದಾರೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ. ಹೊಸ ತಂಡವೊಂದು ಸಂಗೀತಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತಂದಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಿಚ್ಚ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಕಿರಣ್ ವಿಶ್ವನಾಥ್ ಅವರ ನಿರ್ದೇಶನದ ಸಿನಿಮಾದಲ್ಲಿ ಸಂಗೀತಾ ನಟಿಸಲಿದ್ದಾರೆ.

ಕಿರಣ್ ವಿಶ್ವನಾಥ್ ಅವರು ಈ ಮೊದಲು ‘ರನ್ನ’, ‘ವಿಕ್ಟರಿ’ ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಅವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊಸ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ಸಂಗೀತ ಮಾಧವನ್ ಅವರು ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಸಂಗೀತಾ ಅವರಿಗೆ ಭಾಗ್ಯ ಎಂಬ ಪಾತ್ರವನ್ನು ನೀಡಲಾಗಿದೆ. ನಾಯಕನ ತಾಯಿಯಾಗಿ ಅವರು ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಆಚಾರ್ ಅವರನ್ನು ಹೀರೋಯಿನ್ ಆಗಿ ಪರಿಚಯಿಸಿತ್ತು. ಇದೀಗ ಸಂಗೀತಾ ಮಾಧವನ್ ಅವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ ಎಂಬುದನ್ನು ತಿಳಿಸಲಾಗಿದೆ.

ಇದನ್ನೂ ಓದಿ: ನಂದಿತಾ ಶ್ವೇತಾ ನಟನೆಯ ಹೊಸ ಸಿನಿಮಾ ‘ಬೆನ್ನಿ’: ಬದಲಾಯ್ತು ಗೆಟಪ್

ಅಷ್ಟಕ್ಕೂ ಸಿನಿಮಾದ ಹೆಸರೇನು? ಹಿರೋ ಯಾರು ಎಂಬಿತ್ಯಾದಿ ಮಾಹಿತಿಯನ್ನು ಚಿತ್ರತಂಡದವರು ಸದ್ಯಕ್ಕೆ ಗೌಪ್ಯವಾಗಿ ಇಟ್ಟಿದ್ದಾರೆ. ಬಹಳ ಗ್ರ್ಯಾಂಡ್ ಆಗಿ ನಾಯಕನ ಪರಿಚಯ ಮಾಡಲು ಸಿದ್ಧತೆ ನಡೆದಿದೆ. ‘ಗೌರಿ ಆರ್ಟ್ಸ್ ಬ್ಯಾನರ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಂಗೀತಾ ಅವರ ಆಗಮನದಿಂದ ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *