ಕಪ್ ಗೆದ್ದ ಖುಷಿಯಲ್ಲಿದ್ದ ರಜತ್​​ಗೆ ಹೊಸ ಲೀಗ್​​ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲಿನಾಘಾತ – Kannada News

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಕೇವಲ ನಾಲ್ಕೇ ದಿನಗಳಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಅವರು ಮಧ್ಯಪ್ರದೇಶ ಲೀಗ್ ಆಡುತ್ತಿದ್ದು, ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಂಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗ್ವಾಲಿಯರ್ ಚೀತಾಸ್ ತಂಡವನ್ನು ಮುನ್ನಡೆಸಿದ ಪಾಟಿದಾರ್, ಉಜ್ಜಯಿನಿ ಫಾಲ್ಕನ್ಸ್ ವಿರುದ್ಧ 92 ರನ್‌ಗಳ ಹೀನಾಯ ಸೋಲು ಅನುಭವಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದ ಗ್ವಾಲಿಯರ್ ಚೀತಾಸ್ ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಈ ನಿರ್ಧಾರ ಸಂಪೂರ್ಣವಾಗಿ ಕೈಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಉಜ್ಜಯಿನಿ ಫಾಲ್ಕನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ಚಂಚಲ್ ರಾಥೋಡ್ ಮತ್ತು ಯಶ್ ದುಬೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಡೆಲ್ಲಿ ಕ್ಯಾಪಿಟಲ್ಸ್ ಯುವ ಆಟಗಾರನ ಅಬ್ಬರ

ಉಜ್ಜಯಿನಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಆಲ್ ರೌಂಡರ್ ಮಾಧವ್ ತಿವಾರಿ. ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಮಿಂಚಿದ್ದ 22 ವರ್ಷದ ತಿವಾರಿ, ಗ್ವಾಲಿಯರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಒಟ್ಟಾರೆ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 62 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 220ರ ಗಡಿ ದಾಟಿತು.

ಕೇವಲ 11 ರನ್‌ಗೆ ಔಟಾದ ಪಾಟಿದಾರ್; ಗ್ವಾಲಿಯರ್ ಧೂಳೀಪಟ

222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗ್ವಾಲಿಯರ್ ಚೀತಾಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂದೋರ್ ಅಂಗಳದಲ್ಲಿ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ರಜತ್ ಪಾಟಿದಾರ್ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರು.

ಗ್ವಾಲಿಯರ್ ಪರ ಸ್ಥಳೀಯ ಬ್ಯಾಟರ್ ಪಾರ್ಥ್ ಚೌಧರಿ ಒಂಟಿ ಹೋರಾಟ ನಡೆಸಿ, ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 46 ರನ್ ಚಚ್ಚಿ ಚೇತರಿಕೆ ನೀಡಿದರೂ ಪ್ರಯೋಜನ ಆಗಲಿಲ್ಲ. ಉಳಿದವರಿಂದ ಯಾವುದೇ ಬೆಂಬಲ ಸಿಗದ ಕಾರಣ ಗ್ವಾಲಿಯರ್ ತಂಡ 14.2 ಓವರ್‌ಗಳಲ್ಲಿ ಕೇವಲ 129 ರನ್‌ಗಳಿಗೆ ಆಲೌಟ್ ಆಯಿತು. ಉಜ್ಜಯಿನಿ ಪರ ಆಯುಷ್ ಮಂಕರ್ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಎಂಪಿಎಲ್‌ನಲ್ಲಿ ಉಜ್ಜಯಿನಿ ಫಾಲ್ಕನ್ಸ್ ಭರ್ಜರಿ ಜಯದೊಂದಿಗೆ ಅಭಿಯಾನ ಆರಂಭಿಸಿದೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *