‘ಕರಾವಳಿ’ ಸಿನಿಮಾ ವಿವಾದ: ನಟ ಪ್ರಜ್ವಲ್ ದೇವರಾಜ್ ಪರ ನಿಂತ ರಕ್ಷಿತಾ ಪ್ರೇಮ್ – Kannada News | Karavali movie controversy Rakshitha Prem supports Prajwal Devaraj

ತನ್ನ ಪೋಸ್ಟರ್, ಟೀಸರ್​​ಗಳಿಂದ ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ (Karavali) ಸಿನಿಮಾ ಇದೀಗ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಆದರೆ ಸಿನಿಮಾ ತಂಡದಲ್ಲಿ ಬಿರುಕು ಮೂಡಿದ್ದು, ಆ ಬಿರುಕು ಜಗಜ್ಜಾಹೀರಾಗಿದೆ. ಪ್ರಜ್ವಲ್ ದೇವರಾಜ್ ಹಾಗೂ ಸಿನಿಮಾದ ನಿರ್ದೇಶಕ ಗುರುದತ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಪ್ರಜ್ವಲ್ ದೇವರಾಜ್ ಬದಲಿಗೆ ಬೇರೊಬ್ಬರಿಂದ ಸಿನಿಮಾಕ್ಕೆ ಡಬ್ಬಿಂಗ್ ಮಾಡಿಸಲಾಗಿದ್ದು, ಇದು ಪ್ರಜ್ವಲ್ ಅಭಿಮಾನಿಗಳನ್ನು, ಖುದ್ದು ಪ್ರಜ್ವಲ್ ಅವರನ್ನೂ ಸಹ ಕೆರಳಿಸಿದೆ. ಈ ವಿವಾದ ಕುರಿತಂತೆ ನಿನ್ನೆ ನಿರ್ದೇಶಕ ಪನ್ನಗಾಭರಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಇಂದು ನಟಿ ಮೇಘನಾ ರಾಜ್ ಸಹ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹ ವಿವಾದದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಜ್ವಲ್ ದೇವರಾಜ್ ಪರ ನಿಂತಿದ್ದಾರೆ.

ಇನ್​​ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿರುವ ನಟಿ ರಕ್ಷಿತಾ, ‘ಸಂಭಾವನೆ ಕಾರಣಕ್ಕೆ ನಾಯಕಿಯರ, ಪೋಷಕ ನಟರುಗಳಿಂದ ಡಬ್ಬಿಂಗ್ ಮಾಡಿಸದೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸುವುದನ್ನು ವರ್ಷಗಳಿಂದಲೂ ನೋಡುತ್ತಾ ಬರುತ್ತಿದ್ದೇವೆ. ಆದರೆ ಅದ್ಯಾವುದೂ ಸಹ ಇಷ್ಟು ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ಆದರೆ ಈ ಬಾರಿ ನಾಯಕ ನಟನ ಧ್ವನಿಯನ್ನೇ ಕೈ ಬಿಡಲಾಗಿದೆ. ಹಾಗಾಗಿ ದೊಡ್ಡ ಸುದ್ದಿ ಆಗಿದೆ. ನಟ-ನಟಿ ಯಾರೇ ಇರಲಿ, ಅವರ ಲುಕ್, ನಟನೆಯ ಜೊತೆಗೆ ಅವರ ಧ್ವನಿಯಿಂದಲೂ ಅವರು ತಮ್ಮನ್ನು ಗುರುತಿಸಿಕೊಂಡಿರುತ್ತಾರೆ’ ಎಂದು ರಕ್ಷಿತಾ ಹೇಳಿದ್ದಾರೆ.

ಮುಂದುವರೆದು, ‘ಕೇವಲ ಸಂಭಾವನೆ ಅಥವಾ ಪಾವತಿಯ ಕಾರಣ ನೀಡಿ ನಟ-ನಟಿಯರ ಧ್ವನಿಯನ್ನು ಬದಲಾಯಿಸುವುದು ಸರಿಯಲ್ಲ. ಒಬ್ಬ ನಟ ತನ್ನ ಪಾತ್ರಕ್ಕೆ ಹಾಕುವ ಶ್ರಮ, ಸಮಯ ಮತ್ತು ಪ್ರತಿಭೆಯನ್ನು ಗೌರವಿಸಬೇಕು. ಪಾತ್ರದ ಸಂಪೂರ್ಣತೆಗೆ ಧ್ವನಿ ಅತ್ಯಗತ್ಯ, ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ಇದು ಎಲ್ಲ ನಟ-ನಟಿಯರಿಗೂ ಅನ್ವಯ ಆಗಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಕಿರಿಕ್: ಪ್ರಜ್ವಲ್​ಗೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇಕೆ? ವಿವರಿಸಿದ ಚಿತ್ರತಂಡ

‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಯ ಸಮಯದಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ ಗೈರುಹಾಜರಾಗಿದ್ದರು ಮತ್ತು ಟ್ರೇಲರ್‌ನಲ್ಲಿ ಅವರ ಧ್ವನಿಯೂ ಇರಲಿಲ್ಲ. ಇದರಿಂದ ಸಿಟ್ಟಾಗಿದ್ದ ಪ್ರಜ್ವಲ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಗಲಾಟೆ ಮಾಡಿದ್ದರು. ಇಂದು ಚಿತ್ರತಂಡವು ಪ್ರಕಟಣೆಯೊಂದನ್ನು ಹೊರಡಿಸಿದ್ದು, ‘ನಾವು ಪ್ರಜ್ವಲ್ ಅವರಿಗೆ ಬಾಕಿ ಹಣ ನೀಡಿದ್ದೇವೆ, ಅವರು ಸಿನಿಮಾಕ್ಕೆ ಸಿಕ್ಸ್ ಪ್ಯಾಕ್ ಮಾಡುತ್ತೇನೆ ಎಂದಿದ್ದರು, ಅದಕ್ಕಾಗಿ ಹೆಚ್ಚಿನ ಸಂಭಾವನೆ ನೀಡಲು ಒಪ್ಪಿಕೊಂಡಿದ್ದೆವು ಆದರೆ ಅವರು ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲಿಲ್ಲ, ಅದಕ್ಕಾಗಿ ನಾವು ಅವರ ಸಂಭಾವನೆ ತಡೆದಿದ್ದೆವು’ ಎಂದಿದ್ದಾರೆ.

ಗುರುದತ್ ಗಾಣಿಗಾ ನಿರ್ದೇಶಿಸಿರುವ ‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ರಾಜ್ ಬಿ ಶೆಟ್ಟಿ, ಮಿತ್ರಾ, ರಮೇಶ್ ಇಂದಿರಾ ಇನ್ನೂ ಕೆಲ ಪ್ರತಿಭಾವಂತ ನಟರು ನಟಿಸಿದ್ದಾರೆ. ನಾಯಕಿಯರಾಗಿ ಸಂಪದ ಮತ್ತು ಸುಷ್ಮಿತಾ ಭಟ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *