ದಾವಣಗೆರೆಯ ವಿರಕ್ತಮಠ, ಹರ್ಡೇಕರ ಮಂಜಪ್ಪImage Credit source: tv9 kannada
ದಾವಣಗೆರೆ, ಏಪ್ರಿಲ್ 20: ಜಗತ್ತಿನಾದ್ಯಂತ ಇಂದು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಜಗದ್ಗುರು ಬಸವಣ್ಣನವರ ಜಯಂತಿಯನ್ನು (Basava Jayanti) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಈ ‘ಬಸವ ಜಯಂತಿ’ ಎಂಬ ಜನೋತ್ಸವಕ್ಕೆ ನಾಂದಿ ಹಾಡಿದ್ದು ಎಲ್ಲಿ ಮತ್ತು ಯಾರು ಎಂಬುದು ಬಹುಶಃ ಇಂದಿನ ಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಮಹಾತ್ಮ ಗಾಂಧೀಜಿಯವರ ತತ್ವಗಳಿಗೂ ಮೊದಲೇ ಬಸವ ತತ್ವದ ಮೂಲಕ ಜನರನ್ನು ಸಂಘಟಿಸಿದ ‘ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪ ಅವರು ಈ ಜಯಂತಿಯ ರೂವಾರಿ. ದಾವಣಗೆರೆಯ (Davanagere) ವಿರಕ್ತಮಠದಲ್ಲಿ ಆರಂಭವಾದ ಈ ಜಯಂತಿಗೆ ಇಂದಿಗೆ ಭರ್ತಿ 114 ವರ್ಷ.
ಬಾಲಗಂಗಾಧರ ತಿಲಕ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಗಣೇಶ ಪ್ರತಿಷ್ಠಾಪನೆ ಮಾಡಿ ದೊಡ್ಡ ಕ್ರಾಂತಿ ಮಾಡಿದ್ದರು. ಇದೇ ಮಾದರಿಯಲ್ಲಿ ಅವರಿಗಿಂತಲೂ ಮೊದಲೇ ಜನ ಸಂಘಟನೆ ಹಾಗೂ ಕ್ರಾಂತಿ ಪುರುಷನನ್ನ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಮಾಡಿದ್ದರು. ಅವರೇ ಜಗದ್ಗುರು ಬಸವಣ್ಣನವರು.
ಪ್ರಪ್ರಥಮ ಬಾರಿಗೆ ಬಸವ ಜಯಂತಿ ಆಚರಿಸಿದ್ದು ಏಲ್ಲಿ?
ದೇಶ-ವಿದೇಶಗಳಲ್ಲಿ ಮತ್ತು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಸವ ಜಯಂತಿಗೆ ಸರ್ಕಾರಿ ರಜೆ ಇದೆ. ಇಂತಹ ಜಯಂತಿ ಆರಂಭವಾಗಿದ್ದು ದಾವಣಗೆರೆಯಲ್ಲಿ. ಇದೇ ದಾವಣಗೆರೆ ನಗರದ ಕಾಯಿಪೇಟೆಯಲ್ಲಿ ಬರುವ ವಿರಕ್ತ ಮಠದಲ್ಲಿ 1913ರಲ್ಲಿ ಪ್ರಪ್ರಥಮ ಬಾರಿಗೆ ಈ ಜಯಂತಿ ಆಚರಿಸಲಾಯಿತು. ಆ ವೇಳೆಗೆ ದೇಶದಲ್ಲಿ ಆಂಗ್ಲರ ವಿರುದ್ಧ ಜನರನ್ನ ಸಂಘಟನೆ ಮಾಡಬೇಕಿತ್ತು. ಜೊತೆಗೆ ಗಾಂಧಿ ಅವರ ತತ್ವ ಸಿದ್ಧಾಂತಗಳಿಗೆ ಬಸವಣ್ಣವರ ತತ್ವಗಳು ಹೊಲಿಕೆ ಆಗುತ್ತಿದ್ದವು. ಇದನ್ನ ಅರಿತ ಹರ್ಡೇಕರ ಮಂಜಪ್ಪ ಬಸವಣ್ಣನನ್ನ ಜಗತ್ತಿಗೆ ಪರಿಚಯಿಸುವ ಪ್ರಯತ್ನಕ್ಕೆ ಮುಂದಾದರು. ಇದೇ ವೇಳೆ ದೇಶದ ಬಗ್ಗೆ ಜನರಿಗೆ ತಿಳುವಳಿಕೆ ಹೇಳುವ ಅವಕಾಶವನ್ನ ಸಹ ಬಳಸಿಕೊಳ್ಳಲು ಈ ಜಯಂತಿ ಅನುಕೂಲವಾಯಿತು. ಹೀಗಾಗಿ ಜಯಂತಿ ಆರಂಭವಾದ ವಿರಕ್ತ ಮಠದಲ್ಲಿ ಇಂದು ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲಾಯಿತು. ವಿಶೇಷವಾಗಿ ಬಸವ ಭಕ್ತರ ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಜಯಂತಿ ಆಚರಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ
ದಾವಣಗೆರೆಗೆ ವಿರಕ್ತಮಠವನ್ನ ಬಸವಜಯಂತಿಯ ಗಂಗೋತ್ರಿ ಎನ್ನಲಾಗುತ್ತದೆ. ಹೀಗೆ ಹರ್ಡೇಕರ ಮಂಜಪ್ಪ ಅವರು ಬಸವ ಜಯಂತಿ ಶುರು ಮಾಡಿದ್ದೇ ತಡ, ರಾಜ್ಯದ ಬಹುತೇಕ ಕಡೆ ಇಂತಹ ಜಯಂತಿಗಳು ಶುರುವಾದವು. ಮೈಸೂರು ಸಂಸ್ಥಾನದಲ್ಲಿ ಕರಿಬಸಯ್ಯ ಎಂಬ ಪಂಡಿತರಿದ್ದರು. ಅವರು ಬಸವಣ್ಣನ ಬಗ್ಗೆ ಅಪಾರವಾದ ಜ್ಞಾನ ಸಂಪಾದಿಸಿದ್ದರು. ಅವರು ನೀಡಿದ ಮಾಹಿತಿ ಮತ್ತು ಬಸವಣ್ಣನ ನಿಜವಾದ ಕಾಳಜಿಗೆ ಮನಸೋತು ಅಂದು ವಿರಕ್ತಮಠದಲ್ಲಿ ಮೃತ್ಯುಂಜಯ ಅಪ್ಪಗಳು, ಹರ್ಡೇಕರ ಮಂಜಪ್ಪ ಅವರ ಜೊತೆ ಕೈಜೋಡಿಸಿದರು. ಅಂದಿನಿಂದ ಇಂದಿನವರೆಗೆ ದಾವಣಗೆರೆ ಜನತೆಯ ಪಾಲಿಗೆ ಬಸವ ಜಯಂತಿ ಅಂದರೆ ಪಂಚಪ್ರಾಣ. ಹೀಗಾಗಿ ಹತ್ತಾರು ಮಕ್ಕಳ ನಾಮಕರಣ ಇದೇ ಸ್ಥಳದಲ್ಲಿ ನಡೆಯುತ್ತಾ ಬಂದಿದೆ.
ಇದನ್ನೂ ಓದಿ: ಯಾರು ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯ ಮೈಕ್ನಿಂದ ಸಂದೇಶ
ಬಸವಣ್ಣ ಒಂದು ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಮಹಾನ್ ಹೋರಾಟಗಾರ. ಬಸವ ಜಯಂತಿ ಕೂಡ ದೇಶದ ಸ್ವಾತಂತ್ರ್ಯಕ್ಕಾಗಿ ಬಳಕೆ ಆಗಿದ್ದು ಇನ್ನೊಂದು ವಿಶೇಷ. ಇಂತಹ ವಿಶೇಷಕ್ಕೆ ಕಾರಣವಾಗಿದ್ದು ದಾವಣಗೆರೆ ವಿರಕ್ತಮಠ. ಹೀಗೆ ಜಗತ್ತಿಗೆ ಬಸವ ತತ್ವ ಸಾರಲು ಆರಂಭಿಸಿದ ಬಸವ ಜಯಂತಿ ನಡೆದ ಸ್ಥಳದಲ್ಲಿ ಬಸವ ಕಲ್ಯಾಣದ ಮಾದರಿಯಲ್ಲಿ ಅನುಭ ಮಂಟಪ ಕಟ್ಟುವ ಸಂಕಲ್ಪವಿದೆ. ಇದಕ್ಕೆ ಸಮಾಜ ಹಾಗೂ ಸರ್ಕಾರ ಸ್ಪಂದಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
