ಬೆಂಗಳೂರು, ಆಗಸ್ಟ್ 18: ಕಳಪೆ ಆಹಾರ ಪೂರೈಸುವ ಹೋಟೆಲ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರ, 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ, ಕಳಪೆ ಆಹಾರ ಪದಾರ್ಥಗಳ ಮಾರಾಟ ಮತ್ತು ಅವಧಿ ಮೀರಿದ ಔಷಧಿಗಳ ವಿತರಣೆಯನ್ನು ತಡೆಯಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಕ್ರಾಂತಿಕಾರಿ ಕ್ರಮ ಕೈಗೊಂಡಿದೆ. ಇದೀಗ ಗ್ರಾಹಕರು ಹೋಟೆಲ್ ಮತ್ತು ಮೆಡಿಕಲ್ ಸ್ಟೋರ್ಗಳ ವಿರುದ್ಧ ಸ್ಥಳದಲ್ಲೇ ದೂರು ಸಲ್ಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಆರೋಗ್ಯ ಸಚಿವ ಯು ಟಿ ಖಾದರ್ ಅವರು ಈ ಹೊಸ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಿದ್ದಾರೆ.
ದೂರು ನೀಡುವುದು ಹೇಗೆ?
ಈ ನೂತನ ವ್ಯವಸ್ಥೆಯ ಅಡಿಯಲ್ಲಿ, ಹೋಟೆಲ್ ಮತ್ತು ಮೆಡಿಕಲ್ ಸ್ಟೋರ್ಗಳ ಹೊರಗೆ ಕ್ಯೂಆರ್ ಕೋಡ್ಗಳನ್ನು ಅಂಟಿಸಲಾಗುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಮೂಲಕ ಈ ಕೋಡ್ಗಳನ್ನು ಸ್ಕ್ಯಾನ್ ಮಾಡಿ, ಸ್ವಚ್ಛತೆ ಇಲ್ಲದಿರುವುದು, ಕಳಪೆ ಗುಣಮಟ್ಟದ ಆಹಾರ, ಅವಧಿ ಮೀರಿದ ಔಷಧಗಳು, ಅತಿಯಾದ ಬೆಲೆ ವಸೂಲಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಬಹುದು. ದೂರು ಸಲ್ಲಿಕೆಯಾದ ಕೆಲವೇ ನಿಮಿಷಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.
ಕರ್ನಾಟಕ ಈ ತಂತ್ರಜ್ಞಾನ ಆಧಾರಿತ ದೂರು ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿದೆ. ಕಳಪೆ ಆಹಾರ ಪೂರೈಸುವ ಹೋಟೆಲ್ಗಳಿಗೆ 5 ಲಕ್ಷದವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಇನ್ನು ಮುಂದೆ ಪಿಜಿಗಳು, ಹಾಸ್ಟೆಲ್ಗಳು, ಕಲ್ಯಾಣ ಮಂಟಪಗಳು, ಕಾಲೇಜು ಮತ್ತು ರೈಲ್ವೆ ಕ್ಯಾಂಟೀನ್ಗಳಲ್ಲೂ ತಪಾಸಣೆಗಳನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇದು ರಾಜ್ಯದಲ್ಲಿ ಆಹಾರ ಮತ್ತು ಔಷಧ ಸುರಕ್ಷತೆಯನ್ನು ಹೆಚ್ಚಿಸಲು ಪ್ರಮುಖ ಹೆಜ್ಜೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
