ಆರೋಪಿ ಪ್ರಭು ಹಾಗೂ ಮಹಿಳೆImage Credit source: tv9
ಬೆಂಗಳೂರು, ಏಪ್ರಿಲ್ 22: ‘ಕಸ ಹಾಕಿ ಬರುತ್ತೇನೆ’ ಎಂದು ಮನೆಯಿಂದ ಹೊರಹೋದ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎಂದು ಪತಿ ಗಂಭೀರ ಆರೋಪ ಮಾಡಿದ್ದು, ಸದ್ಯ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.
ಮಹಿಳೆ ನಿಗೂಢ ನಾಪತ್ತೆ ಘಟನೆಯ ಹಿನ್ನೆಲೆ
ಬಾಗಲಗುಂಟೆಯಲ್ಲಿ ವಾಸವಿದ್ದ ಶರತ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶರತ್ ಕೆಲಸಕ್ಕೆ ಹೋದ ಸಮಯದಲ್ಲಿ ಅದೇ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನ ಜೊತೆ ಮಹಿಳೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಪ್ರಭು ಮಹಿಳೆಯ ಮೊಬೈಲ್ ರೀಚಾರ್ಜ್ ಮಾಡಿಸುತ್ತಿದ್ದ ವಿಷಯ ತಿಳಿದು ದಂಪತಿ ನಡುವೆ ಈ ಹಿಂದೆ ಗಲಾಟೆಯೂ ನಡೆದಿತ್ತು. ಪತಿ ಶರತ್ ಈ ಬಗ್ಗೆ ಪತ್ನಿಗೆ ಬುದ್ಧಿವಾದ ಹೇಳಿದ್ದರು.
ನಿದ್ದೆ ಮಾತ್ರೆ ಹಾಕಿ ಎಸ್ಕೇಪ್?
ಏಪ್ರಿಲ್ 11ರ ರಾತ್ರಿ ಸುಮಾರು 11:57ಕ್ಕೆ ಮಹಿಳೆ ಮನೆ ಬಿಟ್ಟು ಹೋಗಿದ್ದಾಳೆ. ಹೋಗುವ ಮುನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಳು ಎಂಬ ಗಂಭೀರ ಆರೋಪವನ್ನು ಪತಿ ಶರತ್ ಮಾಡಿದ್ದಾರೆ. ‘ನಾನು ಮನೆಯಲ್ಲಿದ್ದಾಗಲೇ ಒಂದು ಕೈಯಲ್ಲಿ ಕಸದ ಬಕೆಟ್ ಹಾಗೂ ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಪ್ರಿಯಕರನ ಜೊತೆ ಹೋಗಿದ್ದಾಳೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ದಾಖಲು
ಮಹಿಳೆಯು ಬ್ಯಾಗ್ ಹಿಡಿದು ಹೋಗುತ್ತಿರುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಪತ್ನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ ಪತಿ ಶರತ್, ಕೊನೆಗೆ ಸಿಗದಿದ್ದಾಗ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:35 am, Wed, 22 April 26