ಕಾಂಗ್ರೆಸ್​ನಲ್ಲಿ ಕ್ಷಿಪ್ರ ಬೆಳವಣಿಗೆ? ಬೆಂಗಳೂರಿನ ಖಾಸಗಿ ಹೊಟೆಲ್​ನಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ! – Kannada News | Sudden Political Buzz in Karnataka Congress: Over 40 DK Shivakumar Supporter MLAs Hold Dinner Meet in Bengaluru

ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ!Image Credit source: tv9

ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಆಗಾಗ ತೀವ್ರಗೊಂಡು ಮತ್ತೆ ತಣ್ಣಗಾಗುತ್ತಿದ್ದ ನಾಯಕತ್ವ ಬದಲಾವಣೆ ಗೊಂದಲ ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆಯಾ ಎಂಬ ಅನುಮಾನ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಣಗಳ ನಡುವಿನ ಶೀತಲ ಸಮರಕ್ಕೆ ಹೊಸ ತಿರುವು ಸಿಕ್ಕಿದ್ದು, ಡಿಕೆಶಿ ಬೆಂಬಲಿಗ ಶಾಸಕರು ಶಕ್ತಿಪ್ರದರ್ಶನ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾಗಡಿ ಶಾಸಕ ಎಚ್​ಸಿ ಬಾಲಕೃಷ್ಣ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ನಡೆದ ಔತಣಕೂಟದಲ್ಲಿ ಡಿಕೆಶಿ ಬೆಂಬಲಿಗರೆಂದು ಗುರುತಿಸಲ್ಪಟ್ಟ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದಾರೆ. ಈ ಮೂಲಕ ತಮ್ಮ ಒಗ್ಗಟ್ಟನ್ನು ತೋರಿಸುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶಾಸಕರ ಶಕ್ತಿ ಪ್ರದರ್ಶನದ ಫೋಟೋ ವೈರಲ್

ಸಭೆಯಲ್ಲಿ ಸಚಿವರಾದ ಡಿ ಸುಧಾಕರ್, ಮಂಕಾಳ ವೈದ್ಯ, ಸಿಪಿ ಯೋಗೇಶ್ವರ್, ಟಿಬಿ ಜಯಚಂದ್ರ, ಎನ್‌ಎ ಹ್ಯಾರಿಸ್, ಗಣೇಶ್ ಹುಕ್ಕೇರಿ, ಕುಣಿಗಲ್ ರಂಗನಾಥ್, ಪ್ರಕಾಶ್ ಕೋಳಿವಾಡ ಸೇರಿದಂತೆ ಹಲವರು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಶಾಸಕರು ಒಟ್ಟಾಗಿ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಮಾತನಾಡಿ, ‘ಸುಮಾರು 35ರಿಂದ 40 ಜನ ಶಾಸಕರು ಸೇರಿದ್ದೇವೆ’ ಎಂದು ತಿಳಿಸಿದ್ದಾರೆ.

ನಾಯಕತ್ವ ಗೊಂದಲಕ್ಕೆ ಅಂತಿಮ ತೆರೆ ಎಳೆಯಬೇಕು: ಬಾಲಕೃಷ್ಣ

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಚ್‌.ಸಿ. ಬಾಲಕೃಷ್ಣ, ‘ನಾಯಕತ್ವ ಬದಲಾವಣೆ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಬೇಕು. ಸಿಎಂ ಬದಲಾಯಿಸುತ್ತಾರೋ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುತ್ತಾರೋ ಅದು ವರಿಷ್ಠರ ನಿರ್ಧಾರ. ಆದರೆ, ಈ ಗೊಂದಲಕ್ಕೆ ತೆರೆ ಎಳೆಯಬೇಕು. ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ರಚಿಸುವುದು ಕಷ್ಟವಾಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದು ಯಾವ ಬಣದ ಸಭೆಯೂ ಅಲ್ಲ. ನನ್ನ ಹುಟ್ಟುಹಬ್ಬದ ನಿಮಿತ್ತ ಎಲ್ಲರನ್ನು ಊಟಕ್ಕೆ ಆಹ್ವಾನಿಸಿದ್ದೆ. ನಾವು ಎಲ್ಲರೂ ಕಾಂಗ್ರೆಸ್ ಶಾಸಕರೇ ಹೊರತು ಯಾರಾದರೂ ಪರ–ವಿರೋಧ ಎನ್ನುವ ಪ್ರಶ್ನೆಯೇ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆಯಾಗಿದೆ: ಶಿವಗಂಗಾ ಬಸವರಾಜ್

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸುಳ್ಳು ಹೇಳಲು ಕಾರಣವಿಲ್ಲ. ಸುಮಾರು 40 ಜನ ಶಾಸಕರು ಸೇರಿದ್ದೇವೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆಯಾಗಿದೆ. ಅಧಿಕಾರ ಹಂಚಿಕೆ ಹಾಗೂ ಗೊಂದಲಗಳಿಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದು ಕೇವಲ ಭೋಜನ ಕೂಟ: ರವಿ ಗಣಿಗ ಸ್ಪಷ್ಟನೆ

ಖಾಸಗಿ ಹೋಟೆಲ್ ಬಳಿ ಪ್ರತಿಕ್ರಿಯಿಸಿದ ಶಾಸಕ ರವಿ ಗಣಿಗ, ಇದು ಯಾವುದೇ ಅಧಿಕೃತ ಸಭೆಯಲ್ಲ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಊಟ ಮಾತ್ರ. ನಾವು ಎಲ್ಲರೂ ಸ್ನೇಹಪೂರ್ವಕವಾಗಿ ಸೇರಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮತ್ತೆ ಚರ್ಚೆಗೆ

ಇತ್ತೀಚೆಗೆ ಸಿದ್ದರಾಮಯ್ಯ ಬಣದ ನಾಯಕರು ಪ್ರತ್ಯೇಕವಾಗಿ ಸಭೆ, ಔತಣಕೂಟಗಳನ್ನು ನಡೆಸುತ್ತಿರುವ ಹಿನ್ನೆಲೆ, ಡಿಕೆಶಿ ಬಣವೂ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ವಿಶೇಷವಾಗಿದೆ. ಶಾಸಕರ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು: ಒಟ್ಟೊಟ್ಟಿಗೇ ಹಲವು ಮಹತ್ವದ ಬೆಳವಣಿಗೆ! ಮಂಗಳವಾರ ಏನೇನಾಯ್ತು ಗೊತ್ತೇ?

ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ‘ಸಿದ್ದು ವರ್ಸಸ್ ಡಿಕೆಶಿ’ ಬಣಗಳ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಂತಾಗಿದ್ದು, ನಾಯಕತ್ವ ಗೊಂದಲಕ್ಕೆ ಹೈಕಮಾಂಡ್ ಯಾವಾಗ ಅಂತಿಮ ತೆರೆ ಎಳೆಯಲಿದೆ ಎಂಬುದು ಪ್ರಶ್ನೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *