ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಸಾವು: ದಾರುಣವಾಗಿ ಮೃತಪಟ್ಟ ಹಾಸನದ ರೈತ

ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಸಾವು: ದಾರುಣವಾಗಿ ಮೃತಪಟ್ಟ ಹಾಸನದ ರೈತ

ಹಾಸನ, ಏಪ್ರಿಲ್​​ 12: ಕರ್ನಾಟಕದಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮುಂದುವರಿದಿದ್ದು, ಹುಲಿ ಮತ್ತು ಆನೆಗಳ ದಾಳಿಗೆ ಮೃತ ಪಡುವ ಅಮಾಯಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಕಾಡಾನೆ ದಾಳಿಗೆ ಮತ್ತೊಂದು ಸಾವು ರಾಜ್ಯದಲ್ಲಿ ನಡೆದಿದ್ದು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ರೈತ ರಾಜಶೆಟ್ಟಿ(56) ಬಲಿಯಾಗಿದ್ದಾರೆ. ಬೆಳಗ್ಗೆ ತೋಟಕ್ಕೆ ತೆರಳಿದ್ದ ರಾಜಶೆಟ್ಟಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದು ರೈತನ ಕೊಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾಡಾನೆ ದಾಳಿ ಮತ್ತು ಸಾವು

  • ಫೆಬ್ರವರಿ 16, 2026: ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿರುವಳ್ಳಿ ಗ್ರಾಮದ ನಿವಾಸಿ ಯಲ್ಲಪ್ಪ, ನಾಗೇಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿತ್ತು.
  • ಫೆಬ್ರವರಿ 22, 2026: ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ(34) ಬಲಿಯಾಗಿದ್ದರು. ಈ ಘಟನೆಯೂ ನಾಗೇಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ನಡೆದಿತ್ತು.
  • ಮಾರ್ಚ್​​ 09, 2026: ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಕಾಡಾನೆ ದಾಳಿಗೆ ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ(53) ಮೃತಪಟ್ಟಿದ್ದರು. ನಡೆದುಕೊಂಡು ಹೋಗುತ್ತಿದ್ದ ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು.
  • ಮಾರ್ಚ್​​ 12, 2026: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದರು.
  • ಏಪ್ರಿಲ್​​ 08, 2026: ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರತ್ತು (56) ಎಂಬ ಬೆಳೆಗಾರ ಮೃತಪಟ್ಟಿದ್ದರು. ಬೆಳಗ್ಗೆ ಮನೆ ಬಳಿ ವಾಕ್ ಮಾಡುವಾಗ ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು.
  • ಏಪ್ರಿಲ್​​ 28, 2026: ಕಾಡಾನೆ ದಾಳಿಗೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯು ವಿದ್ಯಾರ್ಥಿನಿ ದಾರುಣ‌ವಾಗಿ ಮೃತಪಟ್ಟಿದ್ದಳು. ಪೂಜ್ಯ(19) ಮೃತಳಾಗಿದ್ದು, ತಂದೆ-ತಾಯಿ‌ ಜತೆ ಬೈಕ್‌ನಲ್ಲಿ ಬರುವಾಗ ಆನೆ ಅಟ್ಯಾಕ್​​ ಮಾಡಿತ್ತು.

ಮೇಲಿಂದ ಮೇಲೆ ಈ ರೀತಿಯ ಘಟನೆಗಳು ರಾಜ್ಯದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ ನಡುವೆ ಕಾಡಂಚಿನ ಗ್ರಾಮಗಳ ಜಮೀನಿಗೆ ವನ್ಯಜೀವಿಗಳು ನುಗ್ಗುತ್ತಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಬಳಿಕ ಕ್ರಮಕ್ಕೆ ಮುಂದಾಗುವ ಬದಲು, ಅರಣ್ಯ ಇಲಾಖೆ ಸಿಬ್ಬಂದಿ ಮೊದಲೇ ಎಚ್ಚೆತ್ತುಕೊಳ್ಳಬೇಕು. ಮುಂದೆ ಈ ರೀತಿಯ ಯಾವುದೇ ಅನಾಹುತ ನಡೆಯದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *