Headlines

‘ಕಾಲಾ ಹಿರನ್’: ಸಲ್ಮಾನ್ ಖಾನ್ ಕೃಷ್ಣಮೃಗ ಭೇಟೆ ಕೇಸು ಕುರಿತು ಸಿನಿಮಾ

ಸಲ್ಮಾನ್ ಖಾನ್ (Salman Khan) ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಅದ್ಭುತವಾದ ವೃತ್ತಿ ಜೀವನ ನೋಡಿರುವ, ನೋಡುತ್ತಿರುವ ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ಏರು-ಪೇರುಗಳಿಂದ ಕೂಡಿತ್ತು. ಅಪಘಾತ ಪ್ರಕರಣ, ಸಹ ನಟನಿಗೆ ಬೆದರಿಕೆ, ಹಲ್ಲೆ ಪ್ರಕರಣ, ಕೃಷ್ಣಮೃಗ ಭೇಟೆ ಪ್ರಕರಣ, ಇನ್ನೂ ಹಲವಾರು ವಿವಾದಗಳಿಗೆ ಸಲ್ಮಾನ್ ಖಾನ್ ಸಿಲುಕಿಕೊಂಡಿದ್ದರು. ಅವುಗಳಲ್ಲಿ ಹೆಚ್ಚು ಸಾರ್ವಜನಿಕರ ಗಮನ ಸೆಳೆದಿದ್ದೆಂದರೆ ಕಾರು ಅಪಘಾತ ಪ್ರಕರಣ ಮತ್ತು ಕೃಷ್ಣಮೃಗ ಭೇಟೆ ಪ್ರಕರಣ. ಇದೀಗ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣದ ಬಗ್ಗೆ ಸಿನಿಮಾ ಒಂದು ಬಾಲಿವುಡ್​​ನಲ್ಲಿ ನಿರ್ಮಾಣ ಆಗುತ್ತಿದೆ.

ವಿವಾದಾತ್ಮಕ ಸಿನಿಮಾಗಳ ನಿರ್ಮಾಣದಿಂದಲೇ ಹೆಸರಾಗುತ್ತಿರುವ ಅಮಿತ್ ಜಾನಿ ನಿರ್ಮಾಣದಲ್ಲಿ ‘ಕಾಲಾ ಹಿರನ್: ದಿ ಬ್ಯಾಟಲ್ ಆಫ್ ಲೆಗಸಿ’ ಹೆಸರಿನ ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಲ್ಮಾನ್ ಖಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ಕೈಯಲ್ಲಿ ರೈಫಲ್ ಹಿಡಿದು ಗುರಿ ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಕೈಗೆ ಧರಿಸುವ ಚೈನ್ ಮಾದರಿಯ ಚೈನ್ ಪೋಸ್ಟರ್​​ನಲ್ಲಿರುವ ವ್ಯಕ್ತಿಯ ಕೈಯಲ್ಲೂ ಇದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಅಮಿತ್ ಜಾನಿ, ‘ಇದು ನಿಜ ಘಟನೆ ಮತ್ತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಕತೆಯನ್ನು ಒಳಗೊಂಡಿದೆ’ ಎಂದಿದ್ದಾರೆ. ಅಲ್ಲದೆ ಈ ಸಿನಿಮಾ ಭಾರತದ ಅತಿ ದೊಡ್ಡ ವಿವಾದಾತ್ಮಕ ಸಿನಿಮಾ ಆಗಲಿದೆ ಎಂದು ಸಹ ಅವರು ಹೇಳಿದ್ದಾರೆ. ಕೃಷ್ಣಮೃಗ ಭೇಟೆ ಕುರಿತ ಈ ಸಿನಿಮಾ ಸಲ್ಮಾನ್ ಖಾನ್ ಜೊತೆಗೆ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಕತೆಯನ್ನೂ ಒಳಗೊಂಡಿರಲಿದೆ.

‘ಉದಯಪುರ ಫೈಲ್ಸ್’ ಸಿನಿಮಾ ನಿರ್ಮಾಣ ಮಾಡಿದ್ದ ಅಮಿತ್ ಜಾನಿ ಇದೀಗ ‘ಕಾಲಾ ಹಿರನ್’ ಸಿನಿಮಾಕ್ಕೆ ಕೈ ಹಾಕಿದ್ದು, ಈ ಸಿನಿಮಾವನ್ನು ಭರತ್ ಎಸ್ ಶ್ರೀನಾಥ್ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜಾನಿ ಫೈರ್ ಫಾಕ್ಸ್ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಟೀಸರ್ ಜೂನ್ 20 ರಂದು ಬಿಡುಗಡೆ ಆಗಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *