ಬೆಂಗಳೂರು, ಜುಲೈ 29: ಮುಂಗಾರು ಮಳೆಯ ಭಾರಿ ಕೊರತೆ ಹಿನ್ನೆಲೆ ಕರ್ನಾಟಕದಲ್ಲಿಯೇ ನೀರಿನ ಅಭಾವ ತಲೆದೋರಿದೆ. ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳು ಭಣಗುಡುತ್ತಿರುವ ನಡುವೆ ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿರೋದೀಗ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಹೀಗಾಗಿ ಈ ಸಂಬಂಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಮುಂದಾಗಿದ್ದು, ರಾಜ್ಯದ ವಾಸ್ತವ ಸ್ಥಿತಿ ಮನದಟ್ಟು ಮಾಡಲು ತೀರ್ಮಾನಿಸಿದೆ.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ
ಕೆ.ಆರ್.ಎಸ್ ಜಲಾಶಯ
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ಕೆ.ಆರ್.ಎಸ್ ಜಲಾಶಯದಲ್ಲಿ ಸದ್ಯ ಬಳಕೆಗೆ ಇರೋದು ಕೇವಲ 12 ಟಿಎಂಸಿ ನೀರು. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ ಇಂದು 91.94 ಅಡಿ ಮಾತ್ರ ನೀರಿದ್ದು, 2,842 ಕ್ಯೂಸೆಕ್ ಒಳಹರಿವು ಮತ್ತು 1,747 ಕ್ಯೂಸೆಕ್ ಹೊರ ಹರಿವಿದೆ. 49.452 ಟಿಎಂಸಿ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 17.126 ಟಿಎಂಸಿ ಮಾತ್ರ ನೀರು ಲಭ್ಯವಿದ್ದು ಈ ಪೈಕಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ.
ಇದನ್ನೂ ಓದಿ: ಕಾವೇರಿ ಜಲ ವಿವಾದ: CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರ
ಕಬಿನಿ ಡ್ಯಾಂ
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಬೀರವಾಳು ಗ್ರಾಮದಲ್ಲಿರುವ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 75.79 ಅಡಿ ಇದ್ದು, ಕಳೆದ ವರ್ಷ ಇದೇ ದಿನ 81.66 ಅಡಿ ಸಂಗ್ರಹವಿತ್ತು. ಡ್ಯಾಂನಲ್ಲಿ 14.70 ಟಿಎಂಸಿ ನೀರಷ್ಟೇ ಲಭ್ಯವಿದ್ದು, 3,805 ಕ್ಯೂಸೆಕ್ ನೀರು ಒಳಹರಿವು ಮತ್ತು 500 ಕ್ಯೂಸೆಕ್ ಹೊರ ಹರಿವು ಸದ್ಯ ಜಲಾಶಯದಲ್ಲಿದೆ.
ಹೇಮಾವತಿ ಜಲಾಶಯ
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯ 37 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಹಾಲಿ 24.195 ಟಿಎಂಸಿ ನೀರು ಲಭ್ಯವಿದೆ. 5690 ಕ್ಯೂಸೆಕ್ ಒಳಹರಿವು ಮತ್ತು 500 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 35.992 ಟಿಎಂಸಿ ನೀರಿತ್ತು.
ಹಾರಂಗಿ ಜಲಾಶಯ
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನಲ್ಲಿರುವ ಹಾರಂಗಿ ಜಲಾಶಯ 2859 ಅಡಿ ಗರಿಷ್ಟ ಮಟ್ಟ ಹೊಂದಿದ್ದು, ಇಂದಿನ ನೀರಿನ ಮಟ್ಟ 2858.88 ಅಡಿಯಷ್ಟಿದೆ. 3221 ಕ್ಯೂಸೆಕ್ ಒಳಹರಿವು ಮತ್ತು 1895 ಕ್ಯೂಸೆಕ್ ಹೊರಹರಿವಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
