ಕಾವೇರಿ ನದಿ ನೀರು ವಿವಾದ: ತಮಿಳುನಾಡಿನ ಜೊತೆ ಸಂಧಾನಕ್ಕೆ ಮುಂದಾದ ಕರ್ನಾಟಕImage Credit source: PTI
ಬೆಂಗಳೂರು, ಜುಲೈ 23: ಕಾವೇರಿ ನೀರು ಹಂಚಿಕೆ ಸಮಸ್ಯೆ ಮತ್ತು ಮೇಕೆದಾಟು ಯೋಜನೆ ವಿಚಾರ ಸಂಬಂಧ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ನೆರೆ ರಾಜ್ಯ ತಮಿಳುನಾಡಿನೊಂದಿಗೆ ಸಂಧಾನಕ್ಕೆ ಕರ್ನಾಟಕ ಮುಂದಾಗಿದೆ. ಈ ವಿಚಾರವಾಗಿ ಆಗಸ್ಟ್ 3ರಂದು ಮಾತುಕತೆಗೆ ಬರುವಂತೆ ತಮಿಳುನಾಡು ಸಿಎಂ ವಿಜಯ್ಗೆ ಕರ್ನಾಟಕ ಆಹ್ವಾನ ನೀಡಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ಪತ್ರ ವ್ಯವಹಾರ ನಡೆದಿದ್ದರೂ ಮಾತುಕತೆಗೆ ಬರುವ ವಿಚಾರವಾಗಿ ವಿಜಯ್ರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ತಮಿಳುನಾಡಿನ ಮುಂದಿನ ನಿರ್ಧಾರ ಏನಿರಬಹುದು ಎಂಬ ಕುತೂಹಲ ಹೆಚ್ಚಿದೆ. ಒಂದೊಮ್ಮೆ ಕರ್ನಾಟಕದ ಆಹ್ವಾನ ಒಪ್ಪಿ ವಿಜಯ್ ಬಂದಿದ್ದೇ ಆದಲ್ಲಿ ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮಹತ್ವದ ಚರ್ಚೆ ನಡೆಸಲಿದ್ದಾರೆ.
ನೀರು ಬಿಡದಿರಲು ಆದೇಶಿಸಿದ್ದ CWMA
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆ ತಮಿಳುನಾಡಿಗೆ ನೀರು ಬಿಡದಿರಲು CWMA ನಿನ್ನೆಯಷ್ಟೇ ಆದೇಶಿಸಿತ್ತು. ಜುಲೈ 26ರ ಬಳಿಕ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ . ಈ ಹಿನ್ನೆಲೆ ಒಂದು ವಾರದ ಬಳಿಕ ಅಂದರೆ ,ಜು.28ಕ್ಕೆ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ನೀರು ಬಿಡುವುದೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡುವುದಾಗಿ ತಿಳಿಸಿತ್ತು. ಈ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ಸಂಪೂರ್ಣ ಬತ್ತಿದ ಕಾವೇರಿ ನದಿ; ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ
ಲೋಕಸಭೆಯಲ್ಲಿ ಪ್ರತಿಭಟಿಸಿದ್ದ ಡಿಎಂಕೆ
ಇನ್ನು ಲೋಕಸಭೆ ಅಧಿವೇಶನದ ಮೊದಲ ದಿನವೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿತ್ತು. ಕರ್ನಾಟಕದ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿತ್ತು. ಮೇಕೆದಾಟು ವಿಚಾರವಾಗಿ ನಿಲುವಳಿ ಸೂಚನೆಗೆ ಅವಕಾಶ ಡಿಎಂಕೆ ಕೋರಿದ್ದು, ತಕ್ಷಣವೇ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿತ್ತು. ಆದರೆ ಪ್ರಸ್ತಾವನೆಗೆ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ ಕಾರಣ ಲೋಕಸಭೆ ಸದನದ ಬಾವಿಗಿಳಿದು ಡಿಎಂಕೆ ಸಂಸದರು ಪ್ರತಿಭಟನೆ ನಡೆಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.