ಕಾವೇರಿ ನದಿ ನೀರು ಹಂಚಿಕೆ ವಿವಾದದ ತೀವ್ರತೆಯ ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೊಂದು ಘಟಿಸುವ ಸಾಧ್ಯತೆ ಇದೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (Vijay) ಆಗಸ್ಟ್ 3ರಂದು ಬೆಂಗಳೂರಿಗೆ ಆಗಮಿಸಲು ವೇದಿಕೆ ಸಿದ್ಧವಾಗಿದೆ. ಕಾವೇರಿ ನೀರು ಹಂಚಿಕೆ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಧಾನಸೌಧದಲ್ಲಿ ಅವರು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಆದರೆ, ಈ ಐತಿಹಾಸಿಕ ರಾಜಕೀಯ ಸಂಧಾನದ ಸಿದ್ಧತೆಗಳ ಬೆನ್ನಲ್ಲೇ, ಕರ್ನಾಟಕದಲ್ಲಿ ವಿಜಯ್ ನಟನೆಯ ಸಿನಿಮಾಗಳ ವಿರುದ್ಧ ಸಾರ್ವಜನಿಕ ಆಕ್ರೋಶದ ಕಿಚ್ಚು ಹೊತ್ತಿಕೊಂಡಿರುವುದು ತೀವ್ರ ವಿರೋಧಾಭಾಸಕ್ಕೆ ನಾಂದಿ ಹಾಡಿದೆ.
ಸಿನಿಮಾ ವರ್ಸಸ್ ರಾಜಕೀಯ: ಕಾವೇರಿ ಹೋರಾಟದ ಹೊಸ ಆಯಾಮ
ತಮಿಳುನಾಡಿನ ಹಿಂದಿನ ಸರ್ಕಾರಗಳು ಡಿಎಂಕೆ ಮತ್ತು ಎಐಎಡಿಎಂಕೆ ಕಾವೇರಿ ವಿಚಾರದಲ್ಲಿ ಕರ್ನಾಟಕದ ಜೊತೆ ನೇರ ಮಾತುಕತೆಗೆ ಸದಾ ಹಿಂದೇಟು ಹಾಕುತ್ತಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರ ಈ ನಡೆ ಒಂದು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಮಧ್ಯೆ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಎತ್ತಂಗಡಿ ಮಾಡಲಾಗುತ್ತಿದೆ.
ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರ ಹಾಗೂ ಮಂಡ್ಯದ ಗುರುಶ್ರೀ ಥಿಯೇಟರ್ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾವನ್ನು ಕನ್ನಡಪರ ಮತ್ತು ರೈತ ಸಂಘಟನೆಗಳ ತೀವ್ರ ಪ್ರತಿಭಟನೆಯ ಎಚ್ಚರಿಕೆಯ ನಂತರ ಪ್ರದರ್ಶನದಿಂದಲೇ ಎತ್ತಂಗಡಿ ಮಾಡಲಾಗಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಖ್ಯಾತೆ ತೆಗೆಯುತ್ತಿರುವಾಗ ಅವರ ಮುಖ್ಯಮಂತ್ರಿಯ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂಬುದು ಪ್ರತಿಭಟನಾಕಾರರ ಆಕ್ರೋಶವಾಗಿದೆ.
ವಿಜಯ್ಗೆ ಎದುರಾಗಿದೆ ಇಕ್ಕಟ್ಟಿನ ಪರಿಸ್ಥಿತಿ
ಸಿನಿಮಾ ನಟನಾಗಿ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ವಿಜಯ್, ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಜವಾಬ್ದಾರಿ ಹೊತ್ತಿದ್ದಾರೆ. ರಾಜಕೀಯವಾಗಿ ಅವರು ಕರ್ನಾಟಕದೊಂದಿಗೆ ಸೌಹಾರ್ದಯುತ ಮಾತುಕತೆಗೆ ಮುಂದಾಗಿದ್ದರೂ, ಅವರದೇ ಸಿನಿಮಾಗಳನ್ನು ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಬಹಿಷ್ಕರಿಸುತ್ತಿರುವುದು ಅವರ ಬದಲಾದ ಸ್ಥಾನಮಾನದ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಲೇ, ಕರ್ನಾಟಕದ ರೈತರ ಭಾವನೆಗಳಿಗೂ ಧಕ್ಕೆ ತರದಂತೆ ಸಮತೋಲನ ಕಾಯ್ದುಕೊಳ್ಳುವುದು ವಿಜಯ್ ಅವರಿಗೆ ಅಗ್ನಿಪರೀಕ್ಷೆಯಾಗಿದೆ.
ಬರೋದೇ ಅನುಮಾನ?
ತಮಿಳುನಾಡಿನ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ಈ ಕುರಿತು ಮಾಧ್ಯಮಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ‘ಮುಖ್ಯಮಂತ್ರಿ ವಿಜಯ್ ಅವರು ಕಾವೇರಿ ವಿವಾದದ ಸಂಧಾನ ಮಾತುಕತೆಗಾಗಿ ಕರ್ನಾಟಕಕ್ಕೆ ಭೇಟಿ ನೀಡುವ ಬಗ್ಗೆ ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮುಖ್ಯಮಂತ್ರಿಗಳ ಪ್ರವಾಸದ ಕುರಿತಾದ ನಿಖರ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಜಯ್ ಜತೆ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ ಖುಷಿಯಲ್ಲಿ ಕನ್ನಡಿಗ ವಜ್ರಾಂಗ್ ಶೆಟ್ಟಿ
ಇದೆಲ್ಲರ ನಡುವೆ ಆಗಸ್ಟ್ 3ರ ವಿಧಾನಸೌಧದ ಸಭೆಗೆ ಸರ್ವ ಸಿದ್ಧತೆಗಳು ನಡೆಯುತ್ತಿದ್ದು, ಉಭಯ ರಾಜ್ಯಗಳ ಬಾವುಟ ಮತ್ತು ಲಾಂಛನಗಳು ರಾರಾಜಿಸುತ್ತಿವೆ. ಈ ಸಭೆಯು ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತದೆಯೇ ಅಥವಾ ಕೇವಲ ಸಾಂಕೇತಿಕ ರಾಜಕೀಯ ಸಭೆಯಾಗಿ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
