ಕಿರುಕುಳ ಆರೋಪ: ನಾಡಿದ್ದು ಹಸೆಮಣೆ ಏರಬೇಕಿದ್ದ ಯುವತಿ ಸೇರಿ ಹೆತ್ತವರ ದಾರುಣ ಅಂತ್ಯ – Kannada News | Mysuru Tragedy: Bride to Be and Parents Die Days Before Wedding, Harassment and Blackmail Alleged

ಮೈಸೂರು, ಜೂನ್​​ 22: ದಾಂಪತ್ಯ ಜೀವನದ ಕನಸು ಕಂಡಿದ್ದ ಯುವತಿ ಸೇರಿ ಆಕೆಯ ಹೆತ್ತವರು ದಾರುಣ ಅಂತ್ಯ ಕಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನಿಂದ ಯುವತಿಗೆ ಕಿರುಕುಳ ಹಿನ್ನೆಲೆ ವಿಷ ಸೇವಿಸಿ ಮೂವರು ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಮೃತರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​​ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ರಕ್ಷಿತಾಗೆ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈತನಿಗೆ ರಕ್ಷಿತಾ ಕಳುಹಿಸಿದ್ದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಮಾನಸಿಕ ಹಿಂಸೆ ನೀಡಿದ್ದ ಎನ್ನಲಾಗಿದೆ. ರಕ್ಷಿತಾ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನಿಗೂ ಈತ ಫೋಟೋಗಳನ್ನು ಕಳುಹಿಸಿದ್ದ. ಹೀಗಾಗಿ ಮಾನಕ್ಕೆ ಅಂಜಿದ ಕುಟುಂಬಸ್ಥರು ಮನೆಯಲ್ಲೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೂವರ ಸಾವಿಗೂ ಉಲ್ಲಾಸ್ ಗೌಡ‌ನೇ ಕಾರಣನೆಂದು ರಕ್ಷಿತಾ ಡೆತ್​ನೋಟ್ ಬರೆದಿರೋದು ಕೂಡ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಜಿಮ್ ಟ್ರೈನರ್ ವಿಜಯ್ ಕೊಲೆಗೆ ಬಿಗ್​ ಟ್ವಿಸ್ಟ್​​; ಪ್ರಭಾವಿ ಉದ್ಯಮಿಯ ಕೈವಾಡ, ಯಾರದು?

ಸಂಬಂಧಿಕರ ಆಕ್ರಂದನ

ಹಸೆಮಣೆ ಏರಬೇಕಿದ್ದ ಮೊಮ್ಮಗಳ ಜೊತೆ ಅಳಿಯ-ಮಗಳು ಕೂಡ ಮಸಣಕ್ಕೆ ಸೇರಿದ್ದಾರೆ. ರಕ್ಷಿತಾ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿತ್ತು. ಆದರೆ ಉಲ್ಲಾಸ್​​ ಗೌಡ ಎಂಬಾತ ಮದುವೆ ನಿಲ್ಲಿಸಬೇಕೆಂದು ನನ್ನ ಮೊಮ್ಮಗಳ ಮಾನ ತೆಗೆದಿದ್ದಾನೆ. ಈತ ನನ್ನ ಅಳಿಯನಿಗೆ ಪರಿಚಯಸ್ಥನಾಗಿದ್ದು, ಟ್ರ್ಯಾಕ್ಟರ್ ಓಡಿಸುತ್ತಿದ್ದ ಈತನಿಗೆ ಅಳಿಯನ ಜೊತೆ ಒಡನಾಟ ಇತ್ತು. ಆಗಾಗ ಮನೆಗೆ ಕೂಡ ಆತ ಬಂದು ಹೋಗುತ್ತಿದ್ದ. ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳ ಸಾವಿಗೆ ಕಾರಣವಾದ ಉಲ್ಲಾಸ್ ಗೌಡನಿಗೆ ಶಿಕ್ಷೆ ಆಗಬೇಕು ಎಂದು ರಕ್ಷಿತಾಳ ಅಜ್ಜಿ ಚಿನ್ನಮ್ಮ ಆಗ್ರಹಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ.

ಆ್ಯಂಬುಲೆನ್ಸ್​​ಗೆ ಗ್ರಾಮಸ್ಥರ ಮುತ್ತಿಗೆ

ಆರೋಪಿ ಉಲ್ಲಾಸ್ ಗೌಡ ಬಂಧನಕ್ಕೆ ಗ್ರಾಮಸ್ಥರು ಪಟ್ಟುಹಿಡಿದಿದ್ದು, ಬಂಧನವರೆಗೂ ಮೃತದೇಹಗಳನ್ನು ತೆಗೆದುಕೊಂಡು ಹೋಗದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಂಬಂಧಿಕರು ಹಾಗೂ ಗ್ರಾಮಸ್ಥರ ಮಾತಿನ ಚಕಮಕಿ ಕೂಡ ನಡೆದಿದೆ. ವಿರೋಧದ ನಡುವೆಯೂ ಮೃತದೇಹಗಳು ಆ್ಯಂಬುಲೆನ್ಸ್​ಗೆ ಶಿಫ್ಟ್ ಮಾಡಿ ಶವಗಳನ್ನು ಕೊಂಡೊಯ್ಯುತ್ತಿದ್ದ ಕಾರಣ ಆ್ಯಂಬುಲೆನ್ಸ್​ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಪ್ರಸಂಗ ಕೂಡ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿ. ಟಿ.ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಮಾತ್ರ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *