ಕುಂಟುತ್ತಾ ಸಾಗಿದ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಕಾರ್ಯ: ನೀರು ಸಂಗ್ರಹಕ್ಕೆ ತೊಂದರೆ, ರೈತರಲ್ಲಿ ಆಂತಕ – Kannada News | Tungabhadra Dam Crest Gate Repair Slows: Farmers Fear Water Scarcity in Kalyana Karnataka

ತುಂಗಭದ್ರಾ ಡ್ಯಾಂ, ಗೇಟ್ ರಿಪೇರಿ ಕಾರ್ಯ

ಬಳ್ಳಾರಿ, ಫೆಬ್ರವರಿ 19: ತುಂಗಭದ್ರಾ ಡ್ಯಾಂ (Tungabhadra dam) ಕಲ್ಯಾಣ ಕರ್ನಾಟಕದ ಜೀವನಾಡಿ. ಈ ಡ್ಯಾಂ‌‌ನ ಕ್ರೆಸ್ಟ್ ಗೇಟ್‌ಗಳ ರಿಪೇರಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕುಂಟುತ್ತಾ ಸಾಗಿರುವ ಗೇಟ್ (crust gate)  ರಿಪೇರಿ ಕಾರ್ಯದಿಂದ ರೈತರು ಆತಂಕಗೊಂಡಿದ್ದಾರೆ. ಮೇ ತಿಂಗಳ ಅಂತ್ಯದೊಳಗೆ ಡ್ಯಾಂ ಗೇಟ್ ರಿಪೇರಿ ಕಾರ್ಯ ಮುಗಿಯದಿದ್ದರೇ ಡ್ಯಾಂ‌ನಲ್ಲಿ ನೀರು ಸಂಗ್ರಹಿಸುವುದು ಕಷ್ಟ ಎನ್ನುತ್ತಿದ್ದಾರೆ.

ಜನರು ಹಾಗೂ ರೈತರಲ್ಲಿ ಆತಂಕ

ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಡ್ಯಾಂ. ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್ ರಿಪೇರಿ ಕಾರ್ಯ ನಡೆದು ಎರಡ್ಮೂರು ತಿಂಗಳುಗಳೇ ಕಳೆದಿವೆ. ಆದರೆ ಈವರಗೆ ಕೇವಲ ಒಂದೇ ಒಂದು ಗೇಟ್ ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಕುಂಟುತ್ತಾ ಸಾಗಿರುವ ಟಬಿ ಡ್ಯಾಂ ಗೇಟ್ ರಿಪೇರಿ ಕಾರ್ಯದಿಂದ ಜನರು ಹಾಗೂ ರೈತರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ 19 ನೇ ಕ್ರೆಸ್ಟ್ ಗೇಟ್ ಕಳೆದ ವರ್ಷ ನೀರಿನ ರಭಸಕ್ಕೆ ಕಿತ್ತುಹೋಗಿತ್ತು. ಆಗ ನೂರಾರು ಟಿಎಮ್‌ಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವಂತಾಗಿತ್ತು. ಹೀಗಾಗಿ ಎಚ್ಚೆತ್ತ ಸರ್ಕಾರ ಈ ವರ್ಷ 33 ಗೇಟ್ ಹೊಂದಿರುವ ಟಿಬಿ ಡ್ಯಾಂನ ಎಲ್ಲಾ ಗೇಟ್ ರಿಪೇರಿ ಕಾರ್ಯಕ್ಕೆ ಮುಂದಾಗಿತ್ತು. ಸರ್ಕಾರ ತೆಗೆದುಕೊಂಡಿರುವ ಕಾರ್ಯ ಉತ್ತಮವಾಗಿದ್ದು, ಆದರೆ ರಿಪೇರಿ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಶೀಘ್ರ ಗೇಟ್ ರಿಪೇರಿ ಕಾರ್ಯ ಪೂರ್ಣಗೊಳಿಸಬೇಕು ಅಂತಾ ಸ್ಥಳೀಯರಾದ ಸಂತೋಷ್​​ ಎಂಬುವವರು ಒತ್ತಾಯಿಸಿದ್ದಾರೆ.

ನೀರು ಸಂಗ್ರಹಕ್ಕೆ ತೊಂದರೆ

ಇನ್ನು ತುಂಗಭದ್ರಾ ಡ್ಯಾಂನಿಂದ ವಿಜಯನಗರ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ಜೀವನಾಡಿಯಾಗಿದೆ. ಕಳೆದ ವರ್ಷ 19ರಂದು ಕ್ರೆಸ್ಟ್ ಗೇಟ್ ಕಿತ್ತು ಹೋದ ಪರಿಣಾಮ ಈ ವರ್ಷ 33 ಗೇಟ್‌ಗಳನ್ನ ತೆರವುಗೊಳಿಸಿ ಹೊಸ ಗೇಟ್‌ಗಳನ್ನ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ ಆ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ. ಹೀಗಾಗಿ ರೈತರಿಗೆ, ಜನರಿಗೆ ಆತಂಕ ಶುರುವಾಗಿದೆ. ಏಕೆಂದರೆ ಮಳೆಗಾಲ ಆರಂಭ ಆಗುವ ಮೊದಲೇ ಎಲ್ಲ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳದಿದ್ದರೆ, ಮತ್ತೆ ನೀರಿನ ಸಂಗ್ರಹಕ್ಕೆ ತೊಂದರೆ ಆಗಲಿದೆ.

ಟಿಬಿ ಡ್ಯಾಂ 103 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಗೇಟ್‌ಗಳು ತಾಂತ್ರಿಕ ಸಮಸ್ಯೆ ಹಿನ್ನೆಲೆ ಕಳೆದ ವರ್ಷ ಕೇವಲ 80 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿತ್ತು. ಮತ್ತದೆ ಕೆಲಸ ಆದರೆ ಎರಡನೇ ಬೆಳೆಗೆ ನೀರಿನ ತೊಂದರೆ ಉಂಟಾಗಲಿದೆ. ಹೀಗಾಗಿ ಶೀಘ್ರದಲ್ಲೇ ಗೇಟ್ ರಿಪೇರಿ ಕಾರ್ಯ ಪೂರ್ಣಗೊಳ್ಳಬೇಕು ಎನ್ನುವುದು ಜನರ ಒತ್ತಾಯ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಒಟ್ಟು 33 ಗೇಟ್​ಗಳ ಪೈಕಿ, ಒಂದು ಗೇಟ್ ಅಳವಡಿಕೆ ಯಶಸ್ವಿ ಆಗಿದೆ. 23 ಹೊಸ ಕ್ರೆಸ್ಟ್ ಗೇಟ್​ಗಳ ನಿರ್ಮಾಣ ಪೂರ್ಣ, 15 ಹಳೆಯ ಕ್ರೆಸ್ಟ್ ಗೇಟ್​ಗಳ ತೆರವು ಕಾರ್ಯ ಮುಗಿಸಿರುವ ತಂತ್ರಜ್ಞರು, ಹೊಸಪೇಟೆ ಮತ್ತು ಗದಗಿನಲ್ಲಿ ತಲಾ ಒಂದೊಂದು ಗೇಟ್ ಸಿದ್ಧ ಪಡಿಸಲಾಗುತ್ತಿದೆ. 4 ಹಳೆಯ ಕ್ರೆಸ್ಟ್ ಗೇಟ್​ಗಳ ತೆರವು ಪ್ರಗತಿಯಲ್ಲಿದೆ. 5 ಹೊಸ ಕ್ರೆಸ್ಟ್ ಗೇಟ್​ಗಳು ಅಳವಡಿಸಲಾಗಿದೆ. 18ನೇ ಗೇಟ್​ನ ಟ್ರಯಲ್ ಆ್ಯಂಡ್​ ರನ್ ಯಶಸ್ವಿಯಾಗಿದೆ. 8 ಗೇಟ್​ಗಳ ಅಳವಡಿಕೆ ಪ್ರಗತಿಯಲ್ಲಿದೆ.

ಒಟ್ಟಿನಲ್ಲಿ ತುಂಗಭದ್ರಾ ಡ್ಯಾಂ ಕ್ರೆಸ್ಟ್ ಗೇಟ್ ರಿಪೇರಿ ಕಾರ್ಯ ಶೀಘ್ರದಲ್ಲೇ ಪೂರ್ಣಗೊಂಡು ನೂರಾರು ಟಿಎಂಸಿ ನೀರು ಸಂಗ್ರಹಿಸುವಂತಾಗಲಿದೆ. ಜೊತೆಗೆ ರೈತರ ಜಮೀನುಗಳಿಗೆ ಎರಡು ಬೆಳೆಗೂ ನೀರು ಸಿಗುವಂತಾಗಲಿ ಎನ್ನುವುದು ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *